ದೇವಲಕುಂದ ವಾದಿರಾಜ್

 
ದೇವಲಕುಂದ ವಾದಿರಾಜ್ ಸಾಂಪ್ರದಾಯಕ ಶಿಲ್ಪಕಲೆಗೆ ವಿಶ್ವದಾದ್ಯಂತ ಗೌರವ ತಂದುಕೊಟ್ಟವರು.
ರಾಷ್ಟ್ರಪ್ರಶಸ್ತಿ ವಿಜೇತ ಮಹಾನ್ ಕಲಾವಿದರಾದ ದೇವಲಕುಂದ ವಾದಿರಾಜರು ಕುಂದಾಪುರ ತಾಲ್ಲೂಕಿನ ದೇವಲಕುಂದದಲ್ಲಿ 1920ರ ಮಾರ್ಚ್ 20 ರಂದು ಜನಿಸಿದರು. ತಂದೆ ಸುಬ್ಬರಾಯಭಟ್ಟರದು ಅರ್ಚಕ ವೃತ್ತಿ. ತಾಯಿ ಲಕ್ಷ್ಮಮ್ಮನವರು.
ತಂದೆಯ ಅಕಾಲ ಮರಣದಿಂದಾಗಿ ಹರಿದು ತಿನ್ನುವ ಬಡತನಕ್ಕೀಡಾದಾಗ, ತಾಯಿ ಮಗನೊಡನೆ ಮೈಸೂರು ಸೇರಿದರು. ಹುಡುಗನಿಗೋ ಶಾಲೆಗೆ ಚಕ್ಕರ್ ಹಾಕಿ ಚಿತ್ರ ಬಿಡಿಸುವಲ್ಲಿ ಆಸಕ್ತಿ. ಮುಂದೆ ತಾಯಿ ಮತ್ತು ಮಗ ನಂಜನಗೂಡಿಗೆ ಬಂದರು. ಅಲ್ಲೂ ದೇವಸ್ಥಾನದ ಚಿತ್ರಕಲೆಯಿಂದ ಆಕರ್ಷಿತರಾದರು. ಹೀಗಾಗಿ ಮೈಸೂರಿನ ಚಾಮರಾಜೇಂದ್ರ ಚಿತ್ರಕಲಾ ಶಾಲೆಗೆ ಸೇರಿಸಲು ಅವರಿವರು ಸಲಹೆ ಮಾಡಿದರು.
ಮೈಸೂರಿನ ಚಾಮರಾಜೇಂದ್ರ ಚಿತ್ರಕಲಾ ಶಾಲೆಯಲ್ಲಿ ವಾದಿರಾಜರು, ಕೆತ್ತನೆ ಕೆಲಸದಲ್ಲಿ ತರಬೇತಿ ಪಡೆದರು. ಈ ಮಧ್ಯೆ ಆಸರೆಯಾಗಿದ್ದ ತಾಯಿ ಮಲೇರಿಯಾ ಜ್ವರದಿಂದ ನಿಧನರಾದರು. 12ರ ವಯಸ್ಸಿನ ಹುಡುಗನಿಗೆ ಹೇಳತೀರದ ಬವಣೆ ಪ್ರಾಪ್ತವಾಯಿತು. ಶಿವಮೊಗ್ಗದಲ್ಲಿ ಹೊಟೇಲೊಂದರ ಮಾಣಿ ಕೆಲಸ ಮಾಡಿದರು. ಧಾರವಾಡ, ಗದಗು, ಹುಬ್ಬಳ್ಳಿ ಸುತ್ತಿ ಮತ್ತೆ ಮೈಸೂರಿಗೆ ಬಂದರು. ಕೆಲಸ ಮಾಡುತ್ತಿದ್ದ ಡಾ, ಸಂಪತ್ತೈಂಗಾರ್ ಮನೆಯಲ್ಲಿ ತೊಳೆಯಲು ಕೊಟ್ಟ ಸಾಬೂನಿನಲ್ಲೂ ಕೆತ್ತನೆ ಕೆಲಸ ಮಾಡಿ ತೋರಿದರು. ಡಾ. ಸಂಪತ್ತೈಂಗಾರ್ ಅವರು ಪ್ರೋತ್ಸಾಹ ಕೊಟ್ಟರು. ಡಾಕ್ಟರಿಗೆ ಬೆಂಗಳೂರಿಗೆ ವರ್ಗವಾದಾಗ, ಅವರ ಜೊತೆ ಬೆಂಗಳೂರಿಗೆ ಬಂದು ಕೆತ್ತನೆ ಕೆಲಸದಂಗಡಿಯಲ್ಲಿ ಉದ್ಯೋಗ ಮಾಡಲಾರಂಭಿಸಿದರು. ಅಲ್ಲಿ ಸಂಗೀತಗಾರ ಎ. ಸುಬ್ಬರಾಯರ ಪರಿಚಯವಾಯಿತು. ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಕೃತಿ ರಚನೆ ಮಾಡಿದರು. ನಂತರ ಅಖಿಲ ಭಾರತ ಕರಕುಶಲ ಮಂಡಲಿ ವಿನ್ಯಾಸ ಕೇಂದ್ರದಲ್ಲಿ ಮರದ ಕೆತ್ತನೆ ವಿಭಾಗದಲ್ಲಿ ಕೆಲಸ ದೊರಕಿತು.
ವಾದಿರಾಜರು ಹಲವಾರು ಶ್ರೇಷ್ಠ ಕೃತಿಗಳನ್ನು ರಚಿಸಿದರು. ಅವುಗಳಲ್ಲಿ ಆನಂದಮಯಿ ಆಶ್ರಮಕ್ಕೆ ಗಂಧದ ಮಂಟಪ, ಕೈಗಾರಿಕೋದ್ಯಮಿ ನವಲ್ ಕಿಶೋರ್ ರವರಿಗೆ ದಂತದ ಕೃಷ್ಣನ ವಿಗ್ರಹ, ಕೋಲ್ಕತ್ತಾದ ಬಿರ್ಲಾ ಆಸ್ಪತ್ರೆಗೆ ವಿಷ್ಣು ವಿಗ್ರಹ ಮುಂತಾದವುಗಳಲ್ಲದೆ ಎಂ.ವೈ. ಘೋರ್ಪಡೆಯವರ ಅರಮನೆಯ ದೇವಸ್ಥಾನಕ್ಕೆ ರಚಿಸಿದ ಹಲವಾರು ವಿಗ್ರಹಗಳು ಪ್ರಮುಖವೆನಿಸಿದವು. ಹೀಗೆ ತಮ್ಮ ಕಲೆಯಲ್ಲಿ ನೈಪುಣ್ಯತೆ ಮೆರೆದ ವಾದಿರಾಜರಿಗೆ ಗ್ರೇಟ್ ಬ್ರಿಟನ್ನಿನಲ್ಲಿ ನಡೆದ ಭಾರತ್ ಉತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನ ಬಂತು. ಅಲ್ಲಿ ವಿದೇಶಿ ಪತ್ರಿಕೆಗಳಿಂದ ಅಪಾರ ಪ್ರಶಂಸೆ ಬಂತು. ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್, ಗ್ಲಾಸ್ಗೋ ಮುಂತಾದೆಡೆಗಳಲ್ಲಿ ಕೃತಿ ಪ್ರದರ್ಶನ ನಡೆಸಿದರು.
ರಾಷ್ಟ್ರದ ಅನೇಕ ದೇವಸ್ಥಾನ, ವಸ್ತು ಸಂಗ್ರಹಾಲಯಗಳಲ್ಲಿ ಖಾಸಗಿ ಗೃಹಗಳಲ್ಲಿ ವಾದಿರಾಜರ ನೂರಾರು ಶಿಲ್ಪಕಲಾಕೃತಿಗಳು ಕಂಗೊಳಿಸುತ್ತಿವೆ. ಕರಕುಶಲ ಮಂಡಲಿ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದ ವಾದಿರಾಜರು ಕರಕುಶಲ ಕೇಂದ್ರದ ರೂವಾರಿ ಎನಿಸಿದ್ದರು. ಕರ್ನಾಟಕ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ರಾಷ್ಟ್ರಾಧ್ಯಕ್ಷರ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ವಾದಿರಾಜರಿಗೆ ಸಂದಿದ್ದವು. ವಾದಿರಾಜರ ಅನೇಕ ಶಿಷ್ಯಂದಿರು ಕಲಾಲೋಕವನ್ನು ಬೆಳುಗುತ್ತ ಸಾಗಿದ್ದಾರೆ.

ದೇವಲಕುಂದ ವಾದಿರಾಜರು ಫೆಬ್ರವರಿ 1993ರಲ್ಲಿ ಈ ಲೋಕವನ್ನಗಲಿದರು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾ.ಹ. ದೇಶಪಾಂಡೆ

Sun Mar 20 , 2022
‘ಸಿರಿಗನ್ನಡಂ ಗೆಲ್ಗೆ’ ಎಂಬುದು ಸಾಮಾನ್ಯವಾಗಿ ಕನ್ನಡ ಪ್ರೇಮಿಗಳು ಪ್ರೀತಿಯಿಂದ ಉಸುರುವ ಮಂತ್ರ. ಈ ಮಂತ್ರವನ್ನು ಮೊದಲು ಉದ್ಘೋಷಿಸಿದವರು ಕನ್ನಡವನ್ನು ಬೆಳೆಸಿದ ಮಹಾಪುರುಷರಲ್ಲಿ ಪ್ರಮುಖರಾದ ರಾಮಚಂದ್ರ ಹಣಮಂತರಾಯ ದೇಶಪಾಂಡೆ ಅವರು. ಕನ್ನಡದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿದ, ಕನ್ನಡ ಸಾಹಿತ್ಯ ಪರಿಷತ್ತಿಗಿಂತಲೂ 28 ವರ್ಷ ಹಿಂದೆಯೇ ತಲೆ ಎತ್ತಿದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಸ್ಥಾಪನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದವರಾಗಿಯೂ ಅವರು ಪ್ರಸಿದ್ಧರು. ರಾ. ಹ. ದೇಶಪಾಂಡೆ ಅವರು 1861ರ ಮಾರ್ಚ್ 20ರಂದು […]

Advertisement

Wordpress Social Share Plugin powered by Ultimatelysocial