ಕನ್ನಡ ಸಾಹಿತ್ಯಲೋಕದ ಮಹತ್ಕಾದಂಬರಿಗಳಾದ ‘ಮಹಾಬ್ರಾಹ್ಮಣ’, ‘ಮಹಾಕ್ಷತ್ರಿಯ’, ‘ಮಹಾದರ್ಶನ’, ‘ಮಯೂರ’, ‘ಅಂತರಂಗ’ ಮುಂತಾದವನ್ನು ಸೃಷ್ಟಿಸಿದವರು ದೇವುಡು ನರಸಿಂಹ ಶಾಸ್ತ್ರಿಗಳು. ರಂಗಭೂಮಿ ಮತ್ತು ಚಲನಚಿತ್ರಗಳಲ್ಲೂ ದೇವುಡು ಕೆಲಸ ಮಾಡಿದವರು.ಮೈಸೂರಿನಲ್ಲಿ ರಾಜಪುರೋಹಿತರೂ, ಆಸ್ಥಾನ ಪಂಡಿತರೂ ಎಂದು ಹೆಸರುವಾಸಿಯಾದ ವಂಶದಲ್ಲಿ 1897ರ ಡಿಸೆಂಬರ್ 27ರಂದು ದೇವುಡು ಜನಿಸಿದರು. ಇವರ ತಂದೆ 1880ರಲ್ಲಿ ಸ್ಥಾಪನೆಯಾದ ಲಕ್ಷ್ಮೀನರಸಿಂಹ ಪ್ರೆಸ್ ಸ್ಥಾಪಕರಲ್ಲಿ ಒಬ್ಬರಾದ ವೇದಶಾಸ್ತ್ರ ಸಂಪನ್ನರು.ದೇವುಡು ಹನ್ನೆರಡು ವರ್ಷಗಳ ವಯಸ್ಸಲ್ಲೇ ರಾಮಾಯಣ, ಭಾರತ, ಭಾಗವತ, ಬ್ರಹ್ಮಾಂಡ ಪುರಾಣಗಳನ್ನು ಓದಿ ಮುಗಿಸಿದ್ದರು. ತಮ್ಮ ಐದನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರೂ ತಮ್ಮ ಮನೆತನದ ಹಿರಿಮೆ-ಗರಿಮೆಗಳನ್ನು, ಆಚಾರ-ಸಂಪ್ರದಾಯಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ಬೆಳೆಸಿಕೊಂಡರು. ಹೆಂಗಸರು ಹೇಳುವ ಹಾಡುಗಳನ್ನು ಕೆಳುವುದರಲ್ಲೂ ಆಸಕ್ತಿ ಮತ್ತು ಉತ್ಸಾಹ ಅವರಿಗಿತ್ತು. 1912ರ ವೇಳೆಗೇ ಛಂದಸ್ಸು, ವ್ಯಾಕರಣಗಳನ್ನು ಕಲಿತು ಪದ್ಯಗಳನ್ನು ರಚಿಸಿದರು. ಒಂದು ಕಡೆ ವ್ಯಾಸಂಗ ಮತ್ತೊಂದು ಕಡೆ ನಾಟಕಗಳಿಗೆ ಹಾಡು ಬರೆದು ನಟಿಸುವುದು ಜೊತೆಜೊತೆಯಲ್ಲಿ ಸಾಗಿ ರಂಗಭೂಮಿಯ ಪರಿಚಯವಾಯಿತು. ವೈದಿಕ ವಿದ್ಯೆ ಕಲಿತವರಾಗಿದ್ದರೂ ಮುಂದೆ 1917-1922ರ ಅವಧಿಯಲ್ಲಿ ಅಧ್ಯಯನ ನಿರತರಾಗಿ ಬಿ.ಎ., ಎಂ.ಎ ಪದವಿಗಳನ್ನು ಪಡೆದರು. ಕನ್ನಡ ಸಾಹಿತ್ಯಲೋಕದ ಮತ್ತೋರ್ವ ವಿದ್ವಾಂಸ ವಿ.ಸೀ ಅವರು ಇವರ ಸಹಪಾಠಿಗಳಾಗಿದ್ದರು. ಡಾ. ರಾಧಾಕೃಷ್ಣನ್, ಪ್ರೊ.ಎಂ. ಹಿರಿಯಣ್ಣ ಅಂತಹ ಮಹನೀಯರು ಇವರ ಗುರುಗಳು. 1923-24ರಲ್ಲಿ ಒಂದು ವರ್ಷ ಮೈಸೂರಿನ ಸದ್ವಿದ್ಯಾಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸಿದರು. ಸ್ವತಂತ್ರ ಪ್ರವೃತ್ತಿಯವರಾದ ದೇವುಡು ಅದನ್ನು ಬಿಟ್ಟು ತಿ.ತಾ ಶರ್ಮ ಅಂತಹ ಗೆಳೆಯರ ಒತ್ತಾಸೆಯ ಮೇರೆಗೆ 1925ರಲ್ಲಿ ಬೆಂಗಳೂರಿಗೆ ಬಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada