ರಾಜೇಂದ್ರ ಪೊನ್ನಪ್ಪನಾಗಿ ರವಿಚಂದ್ರನ್ ಮತ್ತೆ ಥಿಯೇಟರ್ನಲ್ಲಿ ಅಬ್ಬರಿಸಿದ್ದಾರೆ. 2014ರಲ್ಲಿ ಮಲಯಾಳಂನ ದೃಶ್ಯಂ ಸಿನಿಮಾ ಕನ್ನಡದಲ್ಲಿ ದೃಶ್ಯ ಹೆಸರಿನಲ್ಲಿ ರಿಲೀಸ್ ಆಗಿತ್ತು. ಅಲ್ಲದೇ ದೊಡ್ಡ ಹಿಟ್ ಕೂಡ ತನ್ನದಾಗಿಸಿಕೊಂಡಿತ್ತು. ಕಥೆಯಲ್ಲಿ ಅಂತಹ ಕುತೂಹಲ ಇರೋದರಿಂದ ಕಥೆ ಪ್ರೇಕ್ಷಕರನ್ನು ಹಿಡಿದಿಟ್ಟಿತ್ತು.
ಇದೀಗ ದೃಶ್ಯ ಸಿನಿಮಾದ ಪಾರ್ಟ್ 2 ಕೂಡ ಇಂದು (ಡಿಸೆಂಬರ್ 10) ರಿಲೀಸ್ ಆಗಿದ್ದು ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ.
2014ರಲ್ಲಿ ಇದ್ದ ರಾಜೇಂದ್ರ ಪೊನ್ನಪ್ಪನಿಗೂ ಈಗಿನ ರಾಜೇಂದ್ರ ಪೊನ್ನಪ್ಪನಿಗೂ ಯಾವುದೇ ವ್ಯತ್ಯಾಸ ಇಲ್ಲ. ಅಷ್ಟು ಅಚ್ಚುಕಟ್ಟಾಗಿ ರವಿಚಂದ್ರನ್ ಅವರ ಅಭಿನಯ ಸಿನಿಮಾದಲ್ಲಿ ಮೂಡಿ ಬಂದಿದೆ. ಹೊಡಿ ಬಡಿ ಸಿನಿಮಾಗಳ ನಡುವೆ ಇಂಥ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವನ್ನು ಜನ ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಮೊದಲ ಭಾಗದಲ್ಲಿ ರಾಜೇಂದ್ರ ಪೊನ್ನಪ್ಪ ಐಜಿ ಹುದ್ದೆಯ ರೂಪಾ ಚಂದ್ರಶೇಖರ್ ಅವರ ಪುತ್ರ ತರುಣ್ ಚಂದ್ರಶೇಖರ್ ಕೊಲೆಯಾಗಿರುತ್ತಾರೆ. ಕೊಲೆಯಾದ ಬಳಿಕ ಶವವನ್ನು ರಾಜೇಂದ್ರ ಪೊನ್ನಪ್ಪ ಆಗಷ್ಟೇ ನಿರ್ಮಾಣ ಹಂತದಲ್ಲಿದ್ದ ಪೋಲೀಸ್ ಠಾಣೆಯಲ್ಲಿ ಹುದುಗಿ ಹಾಕಿದ್ದರು. ನಂತರ ಇಡೀ ಕುಟುಂಬ ಭಯದಲ್ಲೆ ಜೀವನ ನಡೆಸುತ್ತಿರುತ್ತೆ. ಹೀಗೆ ಸಾಗಿದ್ದ ಕಥೆ ದೃಶ್ಯ 2 ನಲ್ಲಿ ಏನಾಗುತ್ತೆ, ರಾಜೇಂದ್ರ ಪೊನ್ನಪ್ಪ ಈ ಸಂಕಷ್ಟದಿಂದ ತನ್ನ ಕುಟುಂಬವನ್ನು ಪಾರು ಮಾಡುತ್ತಾನಾ ಅನ್ನೋದೆ ಸಿನಿಮಾದ ಸಾರಾಂಶ.
ರಾಜೇಂದ್ರ ಪೊನ್ನಪ್ಪ ತನ್ನದೇ ಊರಿನಲ್ಲಿ ಥಿಯೇಟರ್ ಕಟ್ಟಿ ಅದರಲ್ಲಿ ಏಳಿಗೆ ಕಾಣುತ್ತಾನೆ. ತನಗೊಂದು ಒಳ್ಳೆ ಸಿನಿಮಾ ನಿರ್ಮಾಣ ಮಾಡಬೇಕು ಎಂದು ಸಿನಿಮಾ ಸ್ಕ್ರಿಪ್ಟ್ ರೈಟರ್ ಅನಂತ್ ನಾಗ್ ಅವರ ಬಳಿ ತೆರಳುತ್ತಾರೆ. ಅಲ್ಲಿ ಯಾವ ರೀತಿ ಕಥೆಯನ್ನು ಬರೆಸುತ್ತಾರೆ. ಆ ಕಥೆಗೆ ಬರುವ ಟ್ವಿಸ್ಟ್ ಏನು? ರಾಜೇಂದ್ರ ಪೊನ್ನಪ್ಪ ಹುದುಗಿಟ್ಟಿದ್ದ ಮೃತದೇಹ ಪೋಲಿಸರಿಗೆ ಸಿಗೋದು ಹೇಗೆ? ಕುಟುಂಬವನ್ನು ಅಪರಾಧಿಗಳ ಸ್ಥಾನದಿಂದ ಬಚಾವ್ ಮಾಡಲು ರಾಜೇಂದ್ರ ಪೊನ್ನಪ್ಪ ಏನೆಲ್ಲಾ ಮಾಸ್ಟರ್ ಮೈಂಡ್ ಯೂಸ್ ಮಾಡುತ್ತಾರೆ ಅನ್ನೋದೆ ಸಿನಿಮಾದ ಹೈಲೈಟ್ಸ್ಗಳು. ಟರ್ನ್ ಆಂಡ್ ಟ್ವಿಸ್ಟ್ಗಳಿಂದಲೇ ಹಿಡಿದಿಡುವ ಸಿನಿಮಾ ಕ್ಲೈಮ್ಯಾಕ್ಸ್ನಲ್ಲಿ ನೀರಿಕ್ಷಿಸದಂತೆ ತಿರುವು ಪಡೆದುಕೊಳ್ಳುತ್ತೆ.
ಇದಿಷ್ಟು ಕಥೆಯ ಬಗ್ಗೆ ಆದರೇ ಇನ್ನು ಪಾತ್ರವರ್ಗಗಳು ಕೂಡ ತುಂಬಾ ಅಚ್ಚು ಕಟ್ಟಾಗಿ ಪಾತ್ರ ನಿರ್ವಹಿಸಿದೆ. ರಾಜೇಂದ್ರ ಪೊನ್ನಪ್ಪನಾಗಿ ರವಿಚಂದ್ರನ್, ಪತ್ನಿಯಾಗಿ ನವ್ಯ ನಾಯರ್, ದೊಡ್ಡ ಮಗಳಾಗಿ ಆರೋಹಿ ನಾರಾಯಣ್, ಪ್ರಭು ಶಿವಾಜಿ, ಸಾಧುಕೋಕಿಲ, ನೀತು ರೈ, ಪ್ರಮೋದ್ ಶೆಟ್ಟಿ, ಅಶೋಕ್, ಶಿವರಾಂ, ಉನ್ನತಿ, ಕೃಷ್ಣ ಯಟರ್ನ್, ನಾರಾಯಣ್ ಸ್ವಾಮಿ, ಲಾಸ್ಯ ನಾಗರಾಜ್ ಮುಂತಾದವರು ನಟಿಸಿದ್ದಾರೆ. ನೈಜ ರೀತಿಯಲ್ಲಿಯೇ ಪಾತ್ರವನ್ನು ನಿಭಾಯಿಸಿದ್ದಾರೆ ಕಲಾವಿದರು. ಆದರೆ ಮೂಲ ಕಥೆಯಲ್ಲಿದ್ದ ಗಂಭೀರತೆ ದೃಶ್ಯ 2 ಸಿನಿಮಾದಲ್ಲಿ ಕಂಡುಬರಲಿಲ್ಲಾ. ಈ ರೀತಿ ಅನ್ನಿಸೋದಕ್ಕೆ ಕಾರಣವು ಇದೆ. ಮೂಲ ಸಿನಿಮಾದಲ್ಲಿ ಎಲ್ಲಿಯೂ ಸೀರಿಯಸ್ ಅಂಶ ಬಿಟ್ಟರೇ ಕಾಮಿಡಿಗೆ ಎಲ್ಲೂ ಅವಕಾಶ ಇರಲಿಲ್ಲ. ಆದರೆ ದೃಶ್ಯ 2 ಚಿತ್ರದಲ್ಲಿ ಸಾಧುಕೋಕಿಲ ಅವರ ಕಾಮಿಡಿ ಕಚಗುಳಿ ಅಲ್ಲಲ್ಲಿ ಬಂದು ಕಥೆಯ ಗಂಭೀರತೆಯನ್ನೇ ಅಡಚಣೆ ಮಾಡಿದಂತೆ ಭಾಸವಾಗುತ್ತಿತ್ತು. ಈ ಪಾತ್ರದ ಅವಶ್ಯಕತೆ ಇಲ್ಲದೇ ಇದ್ದರೂ ಸಿನಿಮಾದಲ್ಲಿ ಇಟ್ಟಿರುವುದು ಕಥೆಯ ನಿಜ ಸಾರವನ್ನು ನುಂಗಿ ಹಾಕಿದಂತಿದೆ.
ಇದನ್ನು ಹೊರತು ಪಡಿಸಿ ಮತ್ತೊಂದಷ್ಟು ಆಳಕ್ಕೆ ಕನ್ನಡದ ದೃಶ್ಯ ಸಿನಿಮಾ ಇಳಿಯ ಬೇಕಿತ್ತು. ಮೇಕಿಂಗ್, ಲೋಕೇಶನ್ ಎಲ್ಲವೂ ಅಚ್ಚುಕಟ್ಟಾಗಿ ಮೂಡಿಬಂದಿದ್ದರೂ ಕೂಡ ಮೂಲ ಸಿನಿಮಾ ನೋಡಿದವರಿಗೆ ಈ ಸಿನಿಮಾದಲ್ಲಿ ಅಂತಹ ಡೆಪ್ತ್ ಇಲ್ಲ ಅಂತ ಅನ್ನಿಸೋದು ಸಹಜವಾಗಿದೆ. ಇದನ್ನು ಹೊರತುಪಡಿಸಿ ಮತ್ಯಾವ ಲೋಪಗಳು ದೃಶ್ಯ 2 ಸಿನಿಮಾದಲ್ಲಿ ಕಂಡು ಬಂದಿಲ್ಲ.
ದೃಶ್ಯ ಭಾಗ ಒಂದನ್ನು ನಿರ್ದೇಶನ ಮಾಡಿದ್ದ ಪಿ ವಾಸು ಅವರೇ ಭಾಗ ಎರಡನ್ನು ನಿರ್ದೇಶನ ಮಾಡಿದ್ದಾರೆ. ಪಿ ವಾಸು ಅವರ ನಿರ್ದೇಶನ ಎಂದರೇ ಅಲ್ಲಿ ಸಾಕಷ್ಟು ನಿರೀಕ್ಷೆ ಇರುತ್ತೆ. ಜನರ ನಿರೀಕ್ಷೆಯನ್ನು ಈ ಸಿನಿಮಾ ಹುಸಿ ಮಾಡಿಲ್ಲ. ನೇಟಿವಿಟಿಗೆ ತಕ್ಕಂತೆ ಯಾವ ರೀತಿ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಇಡಬೇಕು ಆ ಜವಬ್ದಾರಿಯನ್ನು ಪಿ ವಾಸು ನೀಟಾಗಿ ನಿಭಾಯಿಸಿದ್ದಾರೆ.ಇದು ಎಂಟೈನ್ಮೆಂಟ್ ಬ್ಯಾನರ್ನಲ್ಲಿ ದೃಶ್ಯ 2 ಸಿನಿಮಾ ಮೂಡಿಬಂದಿದೆ. ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಸಿ.ವಿ. ಸಾರಥಿ ಕೆಲಸ ಮಾಡಿದ್ದಾರೆ. ಜಿ.ಎಸ್.ವಿ. ಸೀತಾರಾಂ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ, ರವಿ ಸಂತೆಹುಕ್ಲು ಕಲಾ ನಿರ್ದೇಶನ ಹಾಗೂ ಲೋಕೇಶ್ ಬಿಕೆ ಗೌಡ, ಭರತ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. ಇನ್ನುಳಿದಂತೆ ಸಿನಿಮಾದ ಹಾಡುಗಳು, ಹಿನ್ನೆಲೆ ಬಿಜಿಎಮ್ ಉತ್ತಮವಾಗಿದೆ. ಒಟ್ಟಿನಲ್ಲಿ ನಿರೀಕ್ಷಿಸಿದಂತೆ ಸಿನಿಮಾ ಮೂಡಿಬಂದಿದ್ದು ಜನರಿಂದಲೂ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada