ಬೆಂಗಳೂರು, ಏ.11- ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಇಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿತ್ತು.
ಕಳೆದೆರಡು ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿದ್ದು, ಇಂದು ನಗರದ ಸ್ವತಂತ್ರ್ಯ ಉದ್ಯಾನವನದಲ್ಲಿ ರಾಜ್ಯಮಟ್ಟದ ಪ್ರತಿಭಟನೆ ನಡೆಸಲಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ನಾಯಕರು ಭಾಗವಹಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿ ಮೊನ್ನೆ ಬಿಡುಗಡೆಯಾಗಿದೆ. ಪಟ್ಟಿ ಇಷ್ಟಕ್ಕೆ ಮುಗಿಯುವುದಿಲ್ಲ. ಹಗಲು ರಾತ್ರಿ ದುಡಿಯುವವರಿಗೆ ಅವಕಾಶ ನೀಡಲಾಗುವುದು. ಈಗಾಗಲೇ ಸಾಕಷ್ಟು ವಿಳಂಬವಾಗಿದೆ, ಏನೋ ಒಂದು ಮಾಡಿಕೊಡಿ ಎಂದು ಹೈಕಮಾಂಡ್ ಅನ್ನು ಕೇಳಿಕೊಂಡಿದ್ದೇವು. ಅದಕ್ಕಾಗಿ ನಮ್ಮ ಪಟ್ಟಿಗೆ ಕೆಲವನ್ನು ಸೇರಿಸಿ, ಇನ್ನೂ ಕೆಲವನ್ನು ತೆಗೆದು 150 ಮಂದಿಯ ಮೊದಲ ಪಟ್ಟಿ ಮೊನ್ನೆ ಬಿಡುಗಡೆಯಾಗಿದೆ. ಇನ್ನೂ 200 ಮಂದಿಯ ಪಟ್ಟಿ ಬಿಡುಗಡೆಯಾಗಲಿದೆ ಎಂದರು.
ಹೊಸ ಪದಾಧಿಕಾರಿಗಳು ಮನೆ ಮನೆಗೆ ಹೋಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಜನರಿಗೆ ಆಗುತ್ತಿರುವ ಕಿರುಕುಳದ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಕೋವಿಡ್ ಸಂದರ್ಭದಲ್ಲಿ ಸರ್ಕಾರ ತೋರಿಸಿದ ಅನಾದರಣೆ, ಸಂಕಷ್ಟಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಕಾರದಲ್ಲಿದ್ದಾಗ ತೈಲ ಬೆಲೆ ಹತೋಟಿಯಲ್ಲಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಪೆಟ್ರೋಲ್, ಡೀಸೆಲ್ ದರ ಏರುತ್ತಲೇ ಇದ್ದು, ನಿತ್ಯ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ. ಇದು ಕೊನೆಯಾಗಬೇಕಾದರೆ ಎಲ್ಲರೂ ಕಾಂಗ್ರೆಸ್ ಜೊತೆ ಕೈ ಜೋಡಿಸಬೇಕು ಎಂದು ಮನೆ ಮನೆ ಪ್ರಚಾರ ನಡೆಸುವಂತೆ ಕರೆ ನೀಡಿದ್ದರು.
ಬೆಲೆ ಏರಿಕೆ ವಿರುದ್ಧ ಸಂಗೋಳ್ಳಿ ರಾಯಣ್ಣ ಪ್ರತಿಮೆಯಿಂದ ಫ್ರೀಡಂ ಪಾರ್ಕ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಪ್ರತಿಭಟನಾ ಮೆರವಣಿಗೆ ನಡೆಸದಂತೆ ಹೈಕೋರ್ಟ್ ಆದೇಶವಿದೆ. ಹಾಗಾಗಿ ರ್ಯಾಲಿಯನ್ನು ಕೈ ಬಿಟ್ಟಿದ್ದೇವೆ ಎಂದರು, ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಸರ್ಕಾರಗಳು ಬೆಲೆ ಏರಿಕೆ ಮೂಲಕ ಜನರನ್ನು ಲೂಟಿ ಮಾಡುತ್ತಿವೆ. ಜನರ ಆದಾಯ ಪಾತಾಳಕ್ಕೆ ಹೋಗುತ್ತಿದೆ, ಖರ್ಚುದುಪ್ಪಟ್ಟಾಗುತ್ತಿದೆ. ದೇಶದಲ್ಲಿ 17 ಸಾವಿರ ಮಂದಿ ಕೈಗಾರಿಕೋದ್ಯಮಿಗಳು ಸರ್ಕಾರದ ಕಿರುಕೂಳ ತಾಳಲಾರದೆ ಭಾರತ ಬಿಟ್ಟು ಕೆನಡಾ, ಸೌದಿ ಅರೆಬಿಯಾ, ಬ್ರಿಟನ್, ಅಮೆರಿಕಾ, ಸೌಥ್ ಆಫ್ರಿಕಾ ಸೇರಿ ಹಲವು ರಾಷ್ಟ್ರಗಳಿಗೆ ವಲಸೆ ಹೋಗಿದ್ದಾರೆ.
ಯುಪಿಎ ಸರ್ಕಾರ ಇದ್ದಾಗ ಅಡುಗೆ ಅನಿಲ 410 ರೂಪಾಯಿ ಇತ್ತು. ಈಗ ಒಂದು ಸಾವಿರ ರೂಪಾಯಿ ಹೆಚ್ಚಾಗಿದೆ. ಪೆಟ್ರೋಲ್ 60 ರೂ.ನಿಂದ 111, ಡಿಸೇಲ್ 50 ರಿಂದ 97, ಅಡುಗೆ ಎಣ್ಣೆ 90ರಿಂದ 210ರೂ. ಹೆಚ್ಚಾಗಿದೆ. ಹಾಲು ಶೇ.20, ವಿದ್ಯುತ್ 35 ಪೈಸೆ ಹೆಚ್ಚಳವಾಗಿದೆ. ಪ್ರತಿಯೊಂದರ ಬೆಲೆಯೂ ಶೇ.20 ಹೆಚ್ಚಾದರೆ, ಸಕ್ಕರೆ ಶೇ.50ರಷ್ಟು ದರ ಏರಿಕೆಯಾಗಿದೆ. ರಸಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಬೀಜ ಎಲ್ಲವೂ ದುಬಾರಿಯಾಗಿದೆ. ಕಬ್ಬಿಣ, ಸಿಮೆಂಟ್, ಎಲೆಕ್ಟ್ರಿಕಲ್, ಪ್ಲಂಬಿಂಗ್ ಸಲಕರಣೆಗಳ ಬೆಲೆಯೂ ಹೆಚ್ಚಾಗಿದೆ. ರೈತರ ಮೇಲೆ ಈ ಸರ್ಕಾರ 67 ಸಾವಿರ ಕೋಟಿ ಹೊರೆಯನ್ನು ಹೊರೆಸಿದೆ.
ದಿನ ಬೆಳಗಾದರೆ ಸರ್ಕಾರ ಒಂದಲ್ಲ ಒಂದು ಬೆಲೆ ಹೆಚ್ಚಳ ಎಂಬ ಕೊಡುಗೆಗಳನ್ನು ನೀಡುತ್ತಿದೆ. ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ ಎಂದರು.
ಸಮಾಜದಲ್ಲಿ ಅನ್ಯಾಯ ನಡೆಯುತ್ತಿದೆ. ಧರ್ಮಾಧರಿತವಾಗಿ ಹೊಡೆದಾಳಾಗುತ್ತಿದೆ. ಅದರ ವಿರುದ್ಧ ಧ್ವನಿ ಎತ್ತುವಂತೆ ಇಂದು ಮಠಾೀಶರು ಸಮಾವೇಶದಲ್ಲಿ ತಾವು ಹೇಳಿದ್ದಾರೆ ತಿಳಿಸಿದರು. ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಯಾರು ಮೌನವಾಗಿರಬಾರದು, ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ಕರೆ ನೀಡಿದ್ದರು.
ಮುಂದಿನ ಚುನಾವಣೆಗೆ ಪೂರ್ವ ತಯಾರಿಯಾಗಿ ಆರು ತಿಂಗಳ ಮೊದಲೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಪ್ರಕಟಿಸಲಾಗುವುದು. ಅದರಲ್ಲಿ ಎಲ್ಲಾ ವರ್ಗ ಹಾಗೂ ಸಮಾಜಗಳಿಗೆ ಬೆಂಬಲ ನೀಡಲಾಗುವುದು. ಈ ಮೊದಲಿನ ಚುನಾವಣೆಯಲ್ಲಿ ಪ್ರಣಾಳಿಕೆಯ ಮೂಲಕ ಕಾಂಗ್ರೆಸ್ 170 ಭರವಸೆಗಳನ್ನು ನೀಡಿತ್ತು, ಅವುಗಳಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ 165ನ್ನು ಈಡೇರಿಸಿದೆ. ಕಾಂಗ್ರೆಸ್ ಕೊಟ್ಟ ಭರವಸೆ ಈಡೇರಿಸಿದೆ. ಬಿಜೆಪಿ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ಎಂದರು.
ವಿಧಾನ ಪರಿಷತ್ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಹುಬ್ಬಳ್ಳಿಯಲ್ಲಿ ಕಲ್ಲಂಗಡಿ ಹಣ್ಣು ವ್ಯಾಪಾರಿ ಮೇಲೆ ರಣಹೇಡಿಗಳು ದೌರ್ಜನ್ಯವೆಸಗಿದ್ದಾರೆ. ಯುವ ಕಾಂಗ್ರೆಸ್ ಪದಾಕಾರಿಗಳು ಅವರಿಗೆ ಬೆಂಬಲ ನೀಡಿದ್ದಾರೆ ಎಂದರು. ಈ ಮೊದಲು ಸಣ್ಣ ಪ್ರಮಾಣದ ಬೆಲೆ ಏರಿಕೆಯಾಗಿದ್ದಾಗ ಸ್ಮೃತಿ ಇರಾನಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಕೊರಳಿಗೆ ತರಕಾರಿ ಹಾರ ಹಾಕಿಕೊಂಡು ಪ್ರತಿಭಟನೆ ನಡೆಸಿದ್ದರು. ಅದೇ ಸ್ಮೃತಿ ಇರಾನಿಯನ್ನು ನಿನ್ನೆ ಮಹಿಳೆಯೊಬ್ಬರು ವಿಮಾನದಲ್ಲಿ ಪ್ರಸ್ತುತ ಬೆಲೆ ಏರಿಕೆ ವಿರುದ್ಧ ಪ್ರಶ್ನಿಸಿದಾಗ ಉತ್ತರ ಹೇಳಲಾಗದೆ ಪಲಾಯನಗೈದಿದ್ದಾರೆ. ಗಡಿಪಾರು ಶಿಕ್ಷೆಗೆ ಒಳಗಾಗಿದ್ದ ಅಮಿತಾ ಶಾ ಹಿಂದಿಯನ್ನು ಬಲವಂತವಾಗಿ ಹೇರಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ಬಿಜೆಪಿ ಆಡಳಿತದಲ್ಲಿ ಎಲ್ಲಾ ವಸ್ತುಗಳ ಬೆಲೆಗಳು ತೀವ್ರವಾಗಿ ಹೆಚ್ಚಾಗಿವೆ. ಜೊತೆಗೆ ದೇಶದ ಸಾಲವೂ ಹೆಚ್ಚಾಗುತ್ತಿದೆ. ಸ್ವಾತಂತ್ರ್ಯ ನಂತರ ಎಲ್ಲಾ ಪ್ರಧಾನಿಗಳು ಸೇರಿ 52 ಸಾವಿರ ಕೋಟಿ ರೂ. ಸಾಲ ಮಾಡಿದ್ದರು, ಮೋದಿ ಪ್ರಧಾನಿಯಾದ ಮೇಲೆ ಮೂರುವರೆ ಲಕ್ಷ ಕೋಟಿ ಸಾಲ ಹೆಚ್ಚಾಗಿದೆ. ಸಾಲದ ಪ್ರಮಾಣ 152 ಪಟ್ಟು ಹೆಚ್ಚಾಗಿದೆ. ಅಂಬಾನಿ, ಅದಾನಿ ಸೇರಿ ದೊಡ್ಡ ಉದ್ಯಮಿಗಳ 10 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮೋದಿ ಸರ್ಕಾರ ಮನ್ನಾ ಮಾಡಿದೆ. ಆದರೆ ರೈತರ ಸಾಲ ಮನ್ನಾ ಮಾಡಲು ನಿರಾಕರಿಸಲಾಗುತ್ತಿದೆ. ಮೋದಿ ಆಡಳಿತದಲ್ಲಿ ಶ್ರೀಮಂತಿರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಜನಸಾಮಾನ್ಯರು ಸಂಕಷ್ಟಕ್ಕೀಡಾಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನರೇಂದ್ರ ಮೋದಿ ಮದುವೆಯಾದರೂ ಸಂಸಾರ ಮಾಡಲಿಲ್ಲ. ಹೀಗಾಗಿ ಸಂಸಾರ ಮಾಡದಿದ್ದವರಿಗೆ ಜನ ಸಾಮಾನ್ಯರ ಕಷ್ಟಗಳು ಹೇಗೆ ಅರ್ಥವಾಗಲು ಸಾಧ್ಯ ಎಂದ ಅವರು, ಬಿಜೆಪಿ ಸರ್ಕಾರ ಸಂವಿಧಾನ ಬದಲಾವಣೆ ಮಾಡಿ, ಪರಿಶಿಷ್ಟರು, ಹಿಂದುಳಿದ ವರ್ಗಗಳ ಮೀಸಲಾತಿಯನ್ನು ತೆಗೆದು ಹಾಕುವ ಹುನ್ನಾರ ನಡೆಸಿದೆ ಆರೋಪಿಸಿದರು. ಕಾಂಗ್ರೆಸ್ನ ನಾಯಕರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಲೆ ಏರಿಕೆ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada