ಪಾಂಡವರ ಅಜ್ಞಾತವಾಸದ ದಿನಗಳು ಸರಾಗವಾಗಿ ಕಳೆಯತೊಡಗಿದವು. ಹತ್ತು ತಿಂಗಳು ಕಳೆದವು.
ಒಂದು ದಿನ ಸುದೇಷ್ಣೆಯ ತಮ್ಮ ಕೀಚಕನು ಅಕ್ಕನನ್ನು ಕಾಣಲು ಬಂದನು. ಅವಳ ಬಳಿಯಲ್ಲಿದ್ದ ಹೆಂಗಸರಲ್ಲಿ ದ್ರೌಪದಿಯು ಅವನ ಕಣ್ಣಿಗೆ ಬಿದ್ದಳು. ಅವಳ ಅಪ್ರತಿಮ ಚೆಲುವಿನಿಂದ ಕೀಚಕನು ಮದನನ ಬಾಣಕ್ಕೆ ತುತ್ತಾಗಿ ಮೋಹಿತನಾದನು. ಇಷ್ಟು ಚೆಲುವಿನ ಇವಳು ಯಾರೆನ್ನಲು ರಾಣಿಯು ಅವಳು ಗಂಧರ್ವರ ಪತ್ನಿ. ಅವಳ ಮೇಲೆ ಮನಸ್ಸು ಕೊಡಬೇಡ ಎಂದಳು.
ಆದರೆ ರಾವಣನು ಸೀತೆಯನ್ನು ಮೋಹಿಸಿ ತನಗೆ ಕೆಡುಕನ್ನು ತಂದುಕೊಂಡಂತೆ ಕೀಚಕನು ದ್ರೌಪದಿಯ ಮೇಲಿನ ಆಸೆಯನ್ನು ಬಿಡದೆ ಕಂಗೆಟ್ಟನು. ಮರುದಿನ ಅವಳನ್ನು ಕಂಡು ಮಾತನಾಡಿಸಿ ತನ್ನ ಮನದಾಸೆಯನ್ನು ತೀರಿಸಬೇಕೆಂದು ಪರಿಪರಿಯಾಗಿ ಬೇಡಿಕೊಂಡ. ದ್ರೌಪದಿಯು ಸಾಕಷ್ಟು ಬುದ್ಧಿ ಹೇಳಿದಳು. ಪರಸತಿಗೆ ಆಶಿಸಿದರೆ ಪಾತಕಿಯಾಗುವೆ, ತನ್ನ ಗಂಡಂದಿರು ನಿನ್ನನ್ನು ಉಳಿಸರು, ನಿನ್ನ ರಾಜ್ಯ ಲಕ್ಷ್ಮಿ ತೊಲಗುವಳು, ಅಪಕೀರ್ತಿ ಬರುವುದು, ರಾವಣನಂತೆ ಮರಣ ಬರುವುದು ಎಂದೆಲ್ಲ ಹೇಳಿದಳು.
ಆದರೆ ಕೀಚಕನು ಕೇಳಲಿಲ್ಲ. ಬಡವರ ಕೋಪ ದವಡೆಗೆ ಮೂಲವೆಂಬಂತೆ ದ್ರೌಪದಿಯ ಮಾತುಗಳಿಂದ ಪ್ರಯೋಜನ ಆಗಲಿಲ್ಲ. ಬದಲಿಗೆ ಅವನ ಆಸೆ ಇನ್ನಷ್ಟು ಹೆಚ್ಚಾಯಿತು. ತನ್ನ ಇತರ ರಾಣಿಯರನ್ನು ನಿನಗೆ ದಾಸಿಯರನ್ನಾಗಿಸುವೆನೆಂದು ಮತ್ತೆ ಮತ್ತೆ ಬೇಡಿಕೊಂಡ. ದ್ರೌಪದಿಯು ಅವನನ್ನು ತೆಗಳಿ ಒಳಹೋದಳು.
ಮತ್ತೆ ತನ್ನ ಅಕ್ಕನನ್ನು ಕಂಡು ಕೀಚಕನು ಅವಳನ್ನು ತನಗೆ ಒಲಿಯುವಂತೆ ಮಾಡಲು ಬೇಡಿಕೊಂಡ. ಮೊದಲಿಗೆ ಬುದ್ಧಿ ಹೇಳಿದಳಾದರೂ, ಇದರಿಂದ ಉಂಟಾಗಬಹುದಾದ ಪರಿಣಾಮಗಳನ್ನು ಊಹಿಸಿ ಭಯಗೊಂಡಳಾದರೂ ತಮ್ಮನ ಮೇಲಿನ ಮೋಹದಿಂದ ಮೈ ಮರೆತಳು. ಮರುದಿನ ಕಳಿಸುವೆನೆಂದು ಸಂತವಿಟ್ಟು ಬೀಳ್ಕೊಂಡಳು.
ಆ ಬೆಳದಿಂಗಳ ರಾತ್ರಿಯನ್ನು ಬಹಳ ಕಷ್ಟಪಟ್ಟು ವಿರಹದಿಂದ ಕಳೆದ ಕೀಚಕನು ಮರುದಿನ ಬೆಳಗಾಗುವುದನ್ನೇ ಕಾಯುತ್ತಿದ್ದನು. ಸೂರ್ಯೋದಯವಾಯಿತು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada
Please follow and like us: