ಮುಂಬೈ : ನಾವು ತೆಗೆದುಕೊಂಡಿರುವ ನಿರ್ಧಾರವು ಬಾಳಾಸಾಹೇಬ್ ಅವರ ಹಿಂದುತ್ವಕ್ಕೆ ಮತ್ತು ನಮ್ಮ ಶಾಸಕರ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಬದ್ಧವಾಗಿದೆ ಎಂದು ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಏಕನಾಥ್ ಶಿಂಧೆ ಹೇಳಿದರು.
ರಾಜಭವನದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿಯಾದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಏಕನಾಥ ಶಿಂಧೆ, ‘ನಾವು ತೆಗೆದುಕೊಂಡಿರುವ ನಿರ್ಧಾರವು ಬಾಳಾಸಾಹೇಬ್ ಅವರ ಹಿಂದುತ್ವಕ್ಕೆ ಮತ್ತು ನಮ್ಮ ಶಾಸಕರ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಬದ್ಧವಾಗಿದೆ. ನಮ್ಮೊಂದಿಗೆ 50 ಶಾಸಕರು ಇದ್ದಾರೆ’ ಎಂದರು.
ಇದಕ್ಕೂ ಮುನ್ನ ಮಹಾರಾಷ್ಟ್ರದ ನೂತನ ಮುಖುಮಂತ್ರಿಯಾಗಿ ಏಕನಾಥ್ ಶಿಂಧೆ ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ದೇವೇಂದ್ರ ಫಡ್ನವೀಸ್ ಘೋಷಿಸಿದರು.
‘ನಾನು ಸರ್ಕಾರದ ಭಾಗವಾಗುವುದಿಲ್ಲ’ ಎಂದಿರುವ ಫಡ್ನವೀಸ್, ಶಿಂಧೆ ಅವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
‘ಶಿಂಧೆ ನೇತೃತ್ವದ ಸರ್ಕಾರವು ಕಳೆದ ಎರಡೂವರೆ ವರ್ಷಗಳಿಂದ ಸ್ಥಗಿತಗೊಂಡಿರುವ ಅನೇಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲಿದೆ. ಮರಾಠರು, ಒಬಿಸಿಗಳಿಗೆ ಮೀಸಲಾತಿ ನೀಡುವುದು ಮತ್ತು ಮೂಲಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸುವುದು ಹೊಸ ಸರ್ಕಾರದ ಆದ್ಯತೆಯಾಗಿದೆ’ ಎಂದು ಫಡ್ನವೀಸ್ ಹೇಳಿದರು.
‘2019ರಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿಯಿಂದ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಅಗತ್ಯ ಸಂಖ್ಯೆಗಳು ಸಿಕ್ಕವು. ನಾವು ಸರ್ಕಾರ ರಚಿಸಲು ಆಶಿಸಿದ್ದೇವು. ಆದ್ರೆ, ಶಿವಸೇನೆ ಬಾಳಾಸಾಹೇಬ್ ಅವರ ಜೀವನದುದ್ದಕ್ಕೂ ಯಾರ ವಿರುದ್ಧ ಪ್ರತಿಭಟಿಸಿದರೋ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿತು. ಈ ಮೂಲಕ
ಹಿಂದುತ್ವ ಮತ್ತು ಸಾವರ್ಕರ್ ಅವರನ್ನು ವಿರೋಧಿಸುವವರೊಂದಿಗೆ ಶಿವಸೇನೆ ಮೈತ್ರಿ ಮಾಡಿಕೊಂಡಿದೆ. ಶಿವಸೇನೆ ಜನಾದೇಶವನ್ನು ಅವಮಾನಿಸಿತು’ ಎಂದು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada