ಮುಂಬಯಿ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರನ್ನು ಒಂದು ವರ್ಷದ ಸೆರೆವಾಸದ ಬಳಿಕ ಬುಧವಾರ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಮುಂಬಯಿಯ ಆರ್ಥರ್ ರಸ್ತೆ ಜೈಲಿನಿಂದ ಹೊರಬಂದ ಅವರನ್ನು ಅವರ ಬೆಂಬಲಿಗರು ಅದ್ದೂರಿಯಾಗಿ ಸ್ವಾಗತಿಸಿದರು.
72 ವರ್ಷದ ಅನಿಲ್ ದೇಶ್ಮುಖ್ ವಿರುದ್ಧ ಸಿಬಿಐ ಭ್ರಷ್ಟಾಚಾರ ಪ್ರಕರಣ ದಾಖಲಿಸಿ ಬಂಧಿಸಿತ್ತು. ದೇಶ್ಮುಖ್ ಅವರಿಗೆ ಬಾಂಬೆ ಹೈಕೋರ್ಟ್ ಡಿ. 12ರಂದು ಜಾಮೀನು ಮಂಜೂರು ಮಾಡಿತ್ತು. ಆದರೆ ಅದನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲು ಸಮಯ ಬೇಕು ಎಂದು ಸಿಬಿಐ ಕೇಳಿದ್ದರಿಂದ 10 ದಿನಗಳ ಕಾಲ ತಮ್ಮ ಆದೇಶವನ್ನು ನ್ಯಾಯಾಧೀಶರು ಅಮಾನತಿನಲ್ಲಿ ಇರಿಸಿದ್ದರು.ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರೂ ಸಿಬಿಐಗೆ ನೆರವಾಗಿರಲಿಲ್ಲ. ಏಕೆಂದರೆ ಸುಪ್ರೀಂಕೋರ್ಟ್ ಪ್ರಸ್ತುತ ಚಳಿಗಾಲದ ರಜೆಯಲ್ಲಿದ್ದು, ಜನವರಿ ಬಳಿಕ ಮರು ಆರಂಭವಾಗಲಿದೆ. ಅದರ ನಂತರವಷ್ಟೇ ಸಿಬಿಐ ಮೇಲ್ಮನವಿ ಅರ್ಜಿ ವಿಚಾರಣೆಗೆ ಬರಲಿದೆ.ಇದಕ್ಕೂ ಮುನ್ನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೇಶ್ಮುಖ್ ಅವರಿಗೆ ಜಾಮೀನು ನೀಡಿದ್ದ ಬಾಂಬೆ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶ ಮಾಡಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು. ದೇಶ್ಮುಖ್ ಅವರನ್ನು 2021ರ ನವೆಂಬರ್ನಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು.ದೇಶ್ಮುಖ್ ಅವರಿಗೆ ಇ.ಡಿ ಪ್ರಕರಣದಲ್ಲಿ ಅಕ್ಟೋಬರ್ನಲ್ಲಿಯೇ ಜಾಮೀನು ಸಿಕ್ಕರೂ, ಸಿಬಿಐ ದಾಖಲಿಸಿದ್ದ ಭ್ರಷ್ಟಾಚಾರ ಪ್ರಕರಣದಿಂದಾಗಿ ಜೈಲಿನಲ್ಲಿಯೇ ಇರುವಂತಾಗಿತ್ತು. ಗೃಹ ಸಚಿವರಾಗಿದ್ದ ಅನಿಲ್ ದೇಶ್ಮುಖ್ ಅವರ ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು, ಕೆಲವು ಪೊಲೀಸ್ ಅಧಿಕಾರಿಗಳ ಮುಖಾಂತರ ಮುಂಬಯಿಯಲ್ಲಿನ ವಿವಿಧ ಬಾರ್ಗಳಿಂದ 4.7 ಕೋಟಿ ರೂ ಸಂಗ್ರಹಿಸಿದ್ದರು ಎಂದು ಆರೋಪಿಸಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…