ಬೆಂಗಳೂರು,ಮೇ 7- ಮುಖಮೂತಿ ನೋಡದೆ ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ಯಾರೇ ಭಾಗಿಯಾಗಿದ್ದರೂ ನಿರ್ದಾಕ್ಷಿಣ್ಯ ವಾಗಿ ವಶಕ್ಕೆ ಪಡೆದು ತನಿಖೆ ನಡೆಸಲು ಸಿಐಡಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಯಾವುದೇ ಪಕ್ಷದ ಮುಖಂಡರು ಇರಲಿ ಅಥವಾ ಇನ್ಯಾರೇ ಇರಲಿ. ದೊಡ್ಡವರು, ಸಣ್ಣವರು ಎನ್ನದೆ ಮುಖಮೂತಿ ನೋಡದೆ ವಶಕ್ಕೆ ಪಡೆಯಬೇಕು ವಿಚಾರಣೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ. ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಈಗಲೂ ಕೂಡ ಮನವಿ ಮಾಡುವುದೇನೆಂದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಥವಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಯಾರೇ ಇರಲಿ ನಿಮ್ಮ ಬಳಿ ದಾಖಲೆಗಳಿದ್ದರೆ ತನಿಖಾ ತಂಡಕ್ಕೆ ಕೊಡಬೇಕೆಂದು ಮನವಿ ಮಾಡಿದರು.
ನೇಮಕಾತಿಯಲ್ಲಿ 300 ಕೋಟಿ, ಒಂದು ಸಾವಿರ ಕೋಟಿ ಹಗರಣ ನಡೆದಿದೆ ಎಂದು ಹೇಳುವುದು ಸುಲಭ. ಇದರಲ್ಲಿ ಕಿಂಗ್ಪಿನ್ಗಳಿ ದ್ದಾರೆ. ಪ್ರಭಾವಿಗಳಿದ್ದಾರೆ ಎಂದು ಆರೋಪ ಮಾಡುವ ಬದಲು ದಾಖಲೆಗಳನ್ನು ಕೊಟ್ಟರೆ ತನಿಖೆಗೆ ಸಹಕಾರಿಯಾಗಲಿದೆ ಎಂದರು.
ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ದವರು ಈಗ ರಾಜಕೀಯ ಲಾಭ-ನಷ್ಟ ನೋಡುತ್ತಿದ್ದಾರೆ. ಇದು ಯಾರಿಗೂ ಕೂಡ ಶೋಭೆ ತರುವುದಿಲ್ಲ. ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದರೆ ಮೊದಲು ಮುಕ್ತವಾಗಿ ತನಿಖೆ ನಡೆಯಲು ಸಹಕಾರ ನೀಡಿ ಎಂದು ಜ್ಞಾನೇಂದ್ರ ಮನವಿ ಮಾಡಿದರು.
ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಅವರು, ನೋಟಿಸ್ಗೆ ಸಿಐಡಿಯವರು ನೀಡಿರುವ ಉತ್ತರ ನೀಡುವ ಬದಲು ದಿನಂಪ್ರತಿ ಪ್ರಚಾರಕ್ಕೆ ನಿಂತಿದ್ದಾರೆ. ಒಂದು ನೋಟಿಸ್ಗೆ ಉತ್ತರ ಕೊಡಲು ಆಗದವರು ಇನ್ನೊಬ್ಬರ ಮೇಲೆ ಆರೋಪ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು. ಇನ್ನೊಬ್ಬರ ಮೇಲೆ ಆರೋಪ ಮಾಡುವವರು ಸೂಕ್ತ ದಾಖಲೆಗಳನ್ನು ಕೊಡಬೇಕು. ಸಿಐಡಿಯವರು ನೋಟಿಸ್ ಕೊಟ್ಟರೆ ಉತ್ತರ ಕೊಡಲು ಪಲಾಯನ ಮಾಡುವ ಪ್ರಿಯಾಂಕ ಖರ್ಗೆ ರಾಜಕೀಯ ಲಾಭಕ್ಕಾಗಿ ಆರೋಪ ಮಾಡುವುದನ್ನು ನಿಲ್ಲಿಸಲಿ ಎಂದು ಸೂಚಿಸಿದರು.
ಪ್ರಿಯಾಂಕ ಖರ್ಗೆ ಪ್ರಚಾರ ಪ್ರಿಯರು. ಮೂರು ನೋಟಿಸ್ ನೀಡಿದರೂ ಉತ್ತರ ನೀಡುವಷ್ಟು ಸೌಜನ್ಯವಿಲ್ಲ. ದೊಡ್ಡ ದೊಡ್ಡ ಮಾತನಾಡುವವರು ನೋಟಿಸ್ಗೆ ಏಕೆ ಉತ್ತರ ಕೊಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಈ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ವರು ಪ್ರಿಯಾಂಕ ಖರ್ಗೆ ಬೆಂಬಲಿಗರು. ಆರ್.ಡಿ.ಪಾಟೀಲ ಸೇರಿದಂತೆ ಅನೇಕರು ಅವರ ಆಪ್ತರಾಗಿದ್ದಾರೆ. ತನಿಖೆಗೆ ಹೋದರೆ ನಮ್ಮ ಬುಡಕ್ಕೆ ಬರಬಹುದೆಂಬ ಕಾರಣಕ್ಕೆ ತಪ್ಪಿಸಿಕೊಳ್ಳುತ್ತಿದ್ದಾರೆ. ಮೊದಲು ನಿಮ್ಮ ಬಳಿ ದಾಖಲೆಗಳಿದ್ದರೆ ಕೊಡಿ ಇಲ್ಲದಿದ್ದರೆ ಪ್ರಚಾರ ಪಡೆದುಕೊಳ್ಳುವುದನ್ನು ನಿಲ್ಲಿಸಿ ಎಂದು ಅರಗ ವ್ಯಂಗ್ಯವಾಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada