ಮೈಸೂರು, ಸೆಪ್ಟೆಂಬರ್, 17: ಗೌರಿ-ಗಣೇಶ ಹಬ್ಬದ ಸಾಮಗ್ರಿಗಳ ಖರೀದಿ ಭಾನುವಾರ ಜೋರಾಗಿದ್ದು, ಬೆಲೆ ಏರಿಕೆ ನಡುವೆಯೂ ಸಾರ್ವಜನಿಕರು ನಗರದ ಮಾರುಕಟ್ಟೆಯಲ್ಲಿ ಹೂವು-ಹಣ್ಣು ಖರೀದಿಸಿದರು. ಹಾಗಾದರೆ ಹೂ, ಹಣ್ಣು ದರಗಳ ವಿವರವನ್ನು ಇಲ್ಲಿ ತಿಳಿಯಿರಿ.
ನಗರದ ದೇವರಾಜ ಮಾರುಕಟ್ಟೆ ಸೇರಿ ಇನ್ನಿತರ ಕಡೆಗಳಲ್ಲಿ ಜೋರಾದ ವ್ಯಾಪಾರ ವಹಿವಾಟು ನಡೆಯಿತು.
ನಗರದ ಹಲವು ಬಡಾವಣೆ, ರಸ್ತೆಬದಿಗಳಲ್ಲಿ ಗೌರಿಗಣೇಶನ ಮೂರ್ತಿಗಳು ಹಾಗೂ ಹಬ್ಬಕ್ಕೆ ಬೇಕಾದ ಹೂವು-ಬಾಳೆಕಂದು, ಗರಿಕೆ ಹಾಗೂ ಹಣ್ಣುಗಳ ಮಾರಾಟ ಭರ್ಜರಿಯಾಗಿ ನಡೆಯಿತು. ದೇವರಾಜ ಮಾರುಕಟ್ಟೆ, ಮಂಡಿ ಮಾರ್ಕೆಟ್, ಅಗ್ರಹಾರದ ವಾಣಿವಿಲಾಸ ಮಾರುಕಟ್ಟೆ, ನಂಜುಮಳಿಗೆ, ಧನ್ವಂತ್ರಿ ರಸ್ತೆ, ಸಯ್ಯಾಜಿರಾವ್ ರಸ್ತೆ, ಅಗ್ರಹಾರ, ಗಾಂಧಿ ವೃತ್ತ, ರೈಲು ನಿಲ್ದಾಣ ಸೇರಿದಂತೆ ನಗರದ ಪ್ರಮುಖ ವೃತ್ತಗಳಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿ ನಡೆಯಿತು.
ಗೌರಿ ಬಾಗಿನಕ್ಕೆ ಭಾರೀ ಡಿಮ್ಯಾಂಡ್
ಸಾಮಾನ್ಯವಾಗಿ ಗೌರಿ ಹಬ್ಬಕ್ಕೆ ಅಣ್ಣ ತಂಗಿಗೆ ಬಾಗಿನ ಕೊಡುವುದು ಸಂಪ್ರದಾಯ. ಅಲ್ಲದೆ, ಹೆಣ್ಣುಮಕ್ಕಳಿಗೆ ತವರು ಮನೆಯಿಂದ ಬಾಗಿನ ಕೊಡುತ್ತಾರೆ. ಈ ಹಿನ್ನೆಲೆಯಲ್ಲಿ ಬಾಗಿನ ಸಾಮಗ್ರಿಗೆ ಹೆಚ್ಚಿನ ಡಿಮ್ಯಾಂಡ್ ಸೃಷ್ಟಿಯಾಗಿತ್ತು. ನಗರದ ಅಗ್ರಹಾರ, ಗಾಂಧಿ ವೃತ್ತ, ಇರ್ವಿನ್ ರಸ್ತೆ, ದೇವರಾಜ ಮಾರುಕಟ್ಟೆ, ಒಲಂಪಿಯಾ ಥಿಯೇಟರ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಗೌರಿ ಗಣೇಶ ಮೂರ್ತಿಗಳ ಖರೀದಿ ಜೋರಾಗಿತ್ತು.
ಹೂ, ಹಣ್ಣುಗಳ ಬೆಲೆ ಏರಿಕೆ
ಕೆಲ ದಿನಗಳ ಹಿಂದಯಷ್ಟೇ ಕಡಿಮೆ ಇದ್ದ ಅಗತ್ಯವಸ್ತುಗಳ ಬೆಲೆಗಳು ಹಬ್ಬದ ಹಿನ್ನೆಲೆಯಲ್ಲಿ ಏರಿಕೆಯಾಗಿದ್ದವು. ಏಲಕ್ಕಿ ಬಾಳೆ ದರ ಹಬ್ಬದ ಹಿನ್ನೆಲೆಯಲ್ಲಿ ಮತ್ತಷ್ಟು ಹೆಚ್ಚಾಗಿದ್ದು, ಕೆ.ಜಿ.ಗೆ 100ರಿಂದ 120ರವರೆಗೆ ಮಾರಾಟವಾಯಿತು. ಸೇಬು, ಮೂಸಂಬಿ, ದಾಳಿಂಬೆ ಕಿತ್ತಳೆ, ಫೈನಾಪಲ್, ದ್ರಾಕ್ಷಿ, ಸೀತಾಲ ಸೇರಿದಂತೆ ಮೊದಲಾದ ಹಣ್ಣುಗಳ ಬೆಲೆ ಕನಿಷ್ಠ 30ರಿಂದ 40ರೂವರೆಗೆ ಹೆಚ್ಚಾಗಿದೆ.
Ganesh Chaturthi 2023: ಮೈಸೂರಿನಲ್ಲಿ ಪಿಒಪಿ ಗಣಪತಿ ಮೂರ್ತಿಗಳ ಕಡಿವಾಣಕ್ಕೆ ದಂಡ ಪ್ರಯೋಗ
ಸೇವಂತಿಗೆ ಮಾರಿಗೆ 80ರಿಂದ 100ರೂವರೆಗೆ ಮಾರಾಟವಾದರೆ, ಮಲ್ಲಿಗೆ, ಮರಲೆ, ಸುಗಂಧ ರಾಜ, ಕಾಕಡ, ಕನಕಾಂಬರ, ಗುಲಾಬಿ ಹೂ, ಚೆಂಡು ಹೂ, ಮೂರು ರೀತಿಯ ಬಣ್ಣದ ಗಣಗಲೆ ಹೂ ಸೇರಿದಂತೆ ಎಲ್ಲಾ ಹೂಗಳ ದರವೂ ಕೊಂಚ ಹೆಚ್ಚಾಗಿದೆ. ಆದರೆ, ತರಕಾರಿ ದರ ಹೆಚ್ಚು ಏರಿಕೆಯಾಗಿರಲಿಲ್ಲ.
ಗಮನ ಸೆಳೆದ ಬಗೆ ಬಗೆಯ ಮೂರ್ತಿಗಳು
ನಗರದಲ್ಲಿ ಬಗೆಬಗೆಯ ಗಣೇಶ ಗೌರಿ ಮೂರ್ತಿಗಳು ಗಮನ ಸೆಳೆದವು. ಸೌಮ್ಯ ಸ್ವಭಾವದ ಶಿವಲಿಂಗ ಗಣಪ, ರಾಜಸ್ತಾನಿ ಗಣಪ, ತಾಂಡವ ನೃತ್ಯದ ಕಾಲಭೈರವ ಗಣಪ, ಬೆಣ್ಣೆ ಗಣಪ, ಒಡಿಶಾ ಶೈಲಿಯ ಗಣಪ, ಮುಂಬೈನಲ್ಲಿ ಜನಪ್ರಿಯವಾಗಿರುವ “ಲಾಲ್ಬಾಗ್ ರಾಜ”, ಪೂನಾಡಿನ “ದಗಡು ಸೇಟ್” ಹೀಗೆ ಬಗೆ ಬಗೆಯ ಗಣಪಗಳು ಮಾರುಕಟ್ಟೆಯಲ್ಲಿ ಸಾರ್ವಜನಿಕರನ್ನು ಆಕರ್ಷಸಿದವು. ಗೌರಿ ಹಬ್ಬಕ್ಕಾಗಿ ಗಜಗೌರಿ, ಮಂಗಳಗೌರಿ, ಮಡಿಗೌರಿ, ಮೈಸೂರು ಗೌರಿ, ಬೆಂಗಳೂರು ಗೌರಿಯರು ತಮ್ಮದೇ ಶೈಲಿಯಲ್ಲಿ ರಾರಾಜಿಸುತ್ತಿದ್ದವು.