ಗೋಕಾಕ, ಫೆಬ್ರವರಿ 20: ಕರ್ನಾಟಕದ ಪ್ರಮುಖ ವಿಧಾನಸಭೆ ಕ್ಷೇತ್ರಗಳಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕವೂ ಒಂದು. ಐತಿಹಾಸಿಕ ಮಹತ್ವ ಹೊಂದಿರುವ ಗೋಕಾಕವು ಬೆಳಗಾವಿಯಿಂದ 70 ಕಿಮೀ ದೂರದಲ್ಲಿದೆ. ಘಟಪ್ರಭಾ ಮತ್ತು ಮಾರ್ಕಂಡೇಯ ಸಂಗಮಕ್ಕೆ ಹೊಂದಿಕೊಂಡಂತೆ ಈ ನಗರವಿದೆ.
ಬೆಳಗಾವಿ ಜಿಲ್ಲೆಯ ಪ್ರಮುಖ ನಗರವಾಗಿರುವ ಗೋಕಾಕವು ವ್ಯಾಪಾರಿ ಕೇಂದ್ರವೂ ಹೌದು.
ಗೋಕಾಕವು ನಗರವು ಒಂದು ಕಡೆ ಬೆಟ್ಟಗಳಿಂದ ಆವೃತವಾಗಿದೆ. ಇನ್ನೊಂದು ಬದಿಯಲ್ಲಿ ಕಪ್ಪು ಮಣ್ಣಿನ ವಿಶಾಲವಾದ ಬಯಲು ಹೊಂದಿದೆ. ಘಟಪ್ರಭಾ ನದಿಯ ನಗರದ ಉತ್ತರ ಭಾಗದಲ್ಲಿ ಹರಿಯುತ್ತದೆ. ಇದು ಜಲಪಾತವನ್ನು ಹೊಂದಿದೆ. ಸುತ್ತಲಿನ ಪ್ರದೇಶಗಳಲ್ಲಿ ‘ಗೋಕಾಕ ಜಲಪಾತವು ಆಕರ್ಷಣೀಯ ಸ್ಥಳವಾಗಿದೆ. ಇದರಿಂದ ಕ್ಷೇತ್ರದ ಪ್ರವಾಸೋದ್ಯಮವೂ ಹೆಚ್ಚಿದೆ. ಜಲಪಾತದ ಕೆಳಗೆ ಜಲವಿದ್ಯುತ್ ಕೇಂದ್ರವನ್ನು ನಿರ್ಮಿಸಲಾಗಿದೆ. ಈ ವಿದ್ಯೂತ್ ಅನ್ನು ಗೋಕಾಕ್ ಮಿಲ್ಸ್ಗೆ ಬಳಸಲಾತ್ತದೆ.
ಗೋಕಾಕ ಜಲಪಾತ, ಮಲ್ಲಿಕಾರ್ಜುನ ದರ್ಗಾ, ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಸಾವಳಗಿ ಶಿವಲಿಂಗ ಮಠಗಳು ಗೋಕಾಕ ಕ್ಷೇತ್ರದ ಪ್ರೇಕ್ಷಣಿಯ ಸ್ಥಳಗಳು. ಗೋಕಾಕ ಕರದಂಟು ಜಗತ್ಪ್ರಸಿದ್ಧ ಆಹಾರ ಖಾದ್ಯವಾಗಿದೆ. ಈ ಕ್ಷೇತ್ರದಲ್ಲಿ ಬಹುತೇಕ ನೀರಾವರಿ ಇದ್ದು, ಕಬ್ಬನ್ನು ಹೆಚ್ಚು ಬೆಳೆಯಲಾಗುತ್ತದೆ. ಇಲ್ಲಿನ ಹೆಚ್ಚಿನ ರೈತರು ಕಬ್ಬು, ಶೇಂಗಾ, ಹತ್ತಿ, ಹೆಸರು, ಕಡಲೆಯಂತಹ ಬೆಳೆಗಳನ್ನು ಹೆಚ್ಚು ಬೆಳೆಯುತ್ತಾರೆ.
ಗೋಕಾಕ ಕ್ಷೇತ್ರದ ರಾಜಕೀಯ ಇತಿಹಾಸ
ಗೋಕಾಕ ಕ್ಷೇತ್ರವು ರಾಜಕೀಯವಾಗಿ ಪ್ರತಿಷ್ಠಿತ ಕ್ಷೇತ್ರವಾಗಿದೆ.ಕಾಂಗ್ರೆಸ್, ಜನತಾ ಪಾರ್ಟಿ ಹಾಗೂ ಬಿಜೆಪಿ ಪಕ್ಷಗಳಿಂದ ಈ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಳೆದ ಎರಡು ದಶಕಗಳಿಂದ ಅಂದರೆ, 1999ರಿಂದ ಈ ಕ್ಷೇತ್ರದಲ್ಲಿ ಜಾರಕಿಹೊಳಿ ಕುಟುಂಬದ್ದೇ ದರ್ಬಾರು ನಡೆದಿದೆ. 1999ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ನಿಂದ ರಮೇಶ ಜಾರಕಿಹೊಳಿ ಆಯ್ಕೆಯಾದರು. ಅಲ್ಲಿಂದ ಅವರು ಕ್ಷೇತ್ರದಲ್ಲಿ ತಮ್ಮ ಪ್ರಭಾವವನ್ನು ಗಟ್ಟಿಗೊಳಿಸುತ್ತಲೇ ಹೋದರು. 1999, 2004, 2008, 2013 ಹಾಗೂ 2018ರಲ್ಲಿ ಕಾಂಗ್ರೆಸ್ನಿಂದ ಐದು ಬಾರಿ ಶಾಸಕರಾಗಿ ರಮೇಶ್ ಜಾರಕಿಹೊಳಿ ನೇಮಕಗೊಂಡರು. 2019ರಲ್ಲಿ ಕಾಂಗ್ರೆಸ್ನಿಂದ ಬಿಜೆಪಿಗೆ ಸೇರ್ಪಡೆಗೊಂಡರು. ಆ ವರ್ಷ ನಡೆದ ಚುನಾವಣೆಯಲ್ಲಿ ಮತ್ತೆ ರಮೇಶ್ ಜಾರಕಿಹೊಳಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾದರು.
ಗೋಕಾಕದಲ್ಲಿ ಜಾರಕಿಹೊಳಿ ಮನೆತನದ್ದೇ ಕಾರುಬಾರು
2008ರ ವರೆಗೂ ಗೋಕಾಕ ಕ್ಷೇತ್ರವು ಮೀಸಲು ಕ್ಷೇತ್ರವಾಗಿತ್ತು. ಆ ನಂತರ ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು. ರಮೇಶ್ ಜಾರಕಿಹೊಳಿ ಮತ್ತೆ ಆಯ್ಕೆಯಾಗುತ್ತಲೇ ಬಂದರು. ಅವರ ತಮ್ಮಂದಿರಾದ ಸತೀಶ್ ಜಾರಕಿಜೊಳಿ ( ಯಮಕನಮರಡಿ ಕಾಂಗ್ರೆಸ್ ಶಾಸಕ), ಬಾಲಚಂದ್ರ ಜಾರಕಿಹೊಳಿ (ಅರಬಾವಿ ಬಿಜೆಪಿ ಶಾಸಕ) ಹಾಗೂ ಕೊನೆಯ ಸಹೋದರ ಲಖನ್ ಜಾರಕಿಹೊಳಿ (ಎಮ್ಎಲ್ಸಿ) ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ಪ್ರಭಾವಿಗಳಾಗಿದ್ದಾರೆ. 2019 ರಲ್ಲಿ ನಡೆದ ಗೋಕಾಕ್ ವಿಧಾನಸಭೆ ಉಪಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ನಿಂದ ಲಖನ್ ಜಾರಕಿಹೊಳಿ ನಿಂತಿದ್ದರು. ಅವರು ಸುಮಾರು 30,000 ಮತಗಳ ಅಂತರದಿಂದ ಪರಾಭವಗೊಂಡರು.
ಸಿಡಿ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡ ರಮೇಶ್
ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರು ಅಶ್ಲೀಲ ಸಿಡಿ ಪ್ರಕರಣದಲ್ಲಿ ಆರೋಪಿಯಾದರು. ಅವರ ಲೈಂಗಿಕ ಹಗರಣವು ದೇಶದಾದ್ಯಂತ ಚರ್ಚೆಗೆ ಗ್ರಾಸವಾಯಿತು. ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾಗಿದ್ದ, ರಮೇಶ್ ಜಾರಕಿಹೊಳಿಗೆ ಪ್ರಭಾವ ಸಚಿವ ಸ್ಥಾನವನ್ನೇ ನೀಡಲಾಗಿತ್ತು. ಆದರೆ, ಸಿಡಿ ಪ್ರಕರಣವು ವ್ಯಾಪಕ ಟೀಕೆಗೆ ಗುರಿಯಾದ ಹಿನ್ನೆಲೆಯಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿರುವ ಅನಿವಾರ್ಯತೆ ಬಂದೊದಗಿತು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಲಕ್ಷ್ಮೀ ಹೆಬ್ಬಾಳ್ಕರ್, ಡಿಕೆಶಿ ವಿರುದ್ಧ ಜಾರಕಿಹೊಳಿ ಸಂಘರ್ಷ
ಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಜೊಳಿ ಯುದ್ಧವನ್ನೇ ಸಾರಿದ್ದಾರೆ. ಬೆಳಗಾವಿ ಗ್ರಾಮೀಣ ಭಾಗದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸೋಲಿಸಲು ಹತ್ತು ಕೋಟಿ ರೂಪಾಯಿ ಖರ್ಚು ಮಾಡಲು ತಾವು ಸಿದ್ದರಿರುವುದಾಗಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಇದು ದೊಡ್ಡ ಮಟ್ಟದ ವಿವಾದವನ್ನು ಸೃಷ್ಟಿ ಮಾಡಿದೆ. ತಮ್ಮ ಸಿಡಿ ಪ್ರಕರಣ ಬಯಲಿಗೆ ಬರಲು ಲಕ್ಷ್ಮೀ ಹಾಗೂ ಡಿಕೆಶಿಯೇ ಕಾರಣವೆಂದು ರಮೇಶ್ ಆರೋಪಿಸಿದ್ದಾರೆ. ಈ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada