ಗಾಂಧಿನಗರ: ಗುಜರಾತ್ನ ಖೇಡಾ ಜಿಲ್ಲೆಯಲ್ಲಿ ಹರಿಯಾಣದ ನುಹ್ ಜಿಲ್ಲೆಯ ಮಾದರಿಯಲ್ಲೇ ಹಿಂಸಾಚಾರ ನಡೆದಿದೆ. ಶ್ರಾವಣ ಮಾಸದ ಕೊನೆಯ ದಿನದ ಹಿನ್ನೆಲೆಯಲ್ಲಿ ಶುಕ್ರವಾರ (ಸೆಪ್ಟೆಂಬರ್ 15) ಹಿಂದುಗಳು ಶೋಭಾಯಾತ್ರೆ (Gujarat Shiv Yatra) ಕೈಗೊಳ್ಳುವ ವೇಳೆ ಮದರಸಾ (Madrasa) ಮೇಲೆ ನಿಂತು ದುಷ್ಕರ್ಮಿಗಳು ಕಲ್ಲು ತೂರಾಟ (Stone Pelting) ನಡೆಸಿದ್ದಾರೆ.
ಇದರಿಂದಾಗಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಖೇಡಾ ಜಿಲ್ಲೆಯ ಥರ್ಸಾ ಎಂಬಲ್ಲಿ ಸುಮಾರು 700-800 ಹಿಂದುಗಳು ದೇವಾಲಯದಿಂದ ಶಿವನ ಮೆರವಣಿಗೆ ಆರಂಭಿಸಿದ್ದಾರೆ. ಶಿವಯಾತ್ರೆಯು ಮದರಸಾ ಪಕ್ಕದಲ್ಲಿ ಸಾಗುವಾಗ ಏಕಾಏಕಿ ಮುಸ್ಲಿಮರು ಮದರಸಾ ಮೇಲೆ ನಿಂತು ಕಲ್ಲು ತೂರಾಟ ನಡೆಸಿದ್ದಾರೆ. ಶಿವಯಾತ್ರೆ ಮೇಲೆ ಏಕಾಏಕಿ ಕಲ್ಲು ತೂರಾಟ ಶುರುವಾದ ಕಾರಣ ಪರಿಸ್ಥಿತಿ ಹದಗೆಟ್ಟಿದೆ. ನೂರಾರು ಜನರ ಮೇಲೆ ಸತತವಾಗಿ ಕಲ್ಲುತೂರಾಟ ನಡೆದ ಕಾರಣ ಪೊಲೀಸರೂ ಪರಿಸ್ಥಿತಿಯನ್ನು ತಿಳಿಗೊಳಿಸಲು ಹರಸಾಹಸ ಪಟ್ಟಿದ್ದಾರೆ.
ಇಲ್ಲಿದೆ ಕಲ್ಲು ತೂರಾಟದ ವಿಡಿಯೊ
ಹತ್ತಾರು ಮುಸ್ಲಿಮರು ಕಲ್ಲು ತೂರಾಟ ನಡೆಸಿದ ಕಾರಣ ಮೂವರು ಪೊಲೀಸರು ಸೇರಿ ಹಲವು ಜನ ಗಾಯಗೊಂಡಿದ್ದಾರೆ. ಕಲ್ಲು ತೂರಾಟದಿಂದ ಆಕ್ರೋಶಗೊಂಡ ಹಿಂದುಗಳು ಕೂಡ ಕಲ್ಲು ತೂರಿದ್ದಾರೆ. ಇದರಿಂದಾಗಿ ಹಿಂಸಾಚಾರ ಭುಗಿಲೆದ್ದಿದ್ದು, ಈಗಲೂ ಉದ್ವಿಗ್ನ ವಾತಾವರಣ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ತಿಳಿದುಬಂದಿದೆ.
ಹರಿಯಾಣದಲ್ಲೂ ಇದೇ ರೀತಿ ಹಿಂಸೆ
ಹರಿಯಾಣದ ನುಹ್ ಜಿಲ್ಲೆ ಜುಲೈ 31ರಂದು ಹಿಂದುಗಳು ಮೆರವಣಿಗೆ ಮಾಡುವಾಗ ಕೂಡ ಕಲ್ಲು ತೂರಾಟ ನಡೆಸಲಾಗಿತ್ತು. ಇದರಿಂದ ಭುಗಿಲೆದ್ದ ಹಿಂಸಾಚಾರವು ಬೃಹತ್ ಗಲಭೆಯಾಗಿ ಮಾರ್ಪಟ್ಟು ಬೇರೆ ಜಿಲ್ಲೆಗಳಲ್ಲೂ ಹಿಂಸಾಚಾರ ನಡೆದಿತ್ತು. ಐವರು ಮೃತಪಟ್ಟಿದ್ದರು. ಹಿಂಸಾಚಾರದಲ್ಲಿ ಭಾಗಿಯಾದ 300ಕ್ಕೂ ಅಧಿಕ ಜನರ ಮನೆಗಳನ್ನು ಅಕ್ರಮವಾಗಿ ನಿರ್ಮಿಸಿದ ಆರೋಪದಲ್ಲಿ ನೆಲಸಮಗೊಳಿಸಲಾಗಿದೆ. ಹಾಗೆಯೇ, 25 ರೋಹಿಂಗ್ಯಾ ಮುಸ್ಲಿಮರನ್ನೂ ಬಂಧಿಸಲಾಗಿದೆ. ಹಲವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಹಿಂಸಾಚಾರಕ್ಕೆ ಪಿತೂರಿ ನಡೆಸಿದ ಆರೋಪದಲ್ಲಿ ಕಾಂಗ್ರೆಸ್ ಶಾಸಕ ಮಾಮನ್ ಖಾನ್ ಅವರನ್ನು ಬಂಧಿಸಲಾಗಿದೆ.