ಎಚ್. ಎಸ್. ಶ್ರೀಮತಿ ವಿಶ್ವದ ಶ್ರೇಷ್ಠ ಸ್ತ್ರೀಸಂವೇದನಾ ಚಿಂತನೆಗಳನ್ನು ಕನ್ನಡದ ಓದುಗರಿಗೆ ತಂದು ಕೊಟ್ಟಿರುವ ಮಹತ್ವದ ಬರಹಗಾರ್ತಿ.ಶ್ರೀಮತಿ 1950ರ ಫೆಬ್ರುವರಿ 25ರಂದು ಬೆಂಗಳೂರಿನ ಹೊಸಕೋಟೆಯಲ್ಲಿ ಜನಿಸಿದರು. ತಂದೆ ಎಚ್.ಕೆ. ಸೂರ್ಯನಾರಾಯಣ ಶಾಸ್ತ್ರಿ. ತಾಯಿ ಲಲಿತ.ಬೆಂಗಳೂರಿನಲ್ಲಿ ಅಧ್ಯಾಪನ ವೃತ್ತಿ ನಡೆಸಿದ ಶ್ರೀಮತಿ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಶ್ರೀಮತಿ ಅವರ ಸಾಹಿತ್ಯ ಕೃಷಿಯಲ್ಲಿ ಸ್ತ್ರೀ ಸಂವೇದನೆಗಳು ಮತ್ತು ಸ್ರೀವಾದವೇ ಪ್ರಮುಖ ವಸ್ತು. ಗೌರಿದುಃಖ, ಹೆಣ್ಣು ಹೆಂಗಸು, ಉದ್ಗಮ, ಚಹರೆ, ಸ್ತ್ರೀವಾದಿ ಸಂಶೋಧನೆ – ವಿಧಿ ವಿಧಾನಗಳು, ಸ್ತ್ರೀವಾದ ಮತ್ತು ಲೈಂಗಿಕತಾವಾದ, ಹೆಣ್ಣು ಬರಹದ ಒಳ ಬಂಡಾಯ, ಮಹಿಳೆ ದುಡಿಮೆ ಮತ್ತು ಬಿಡುವು, ಸ್ತ್ರೀವಾದ ತಾತ್ವಿಕತೆ, ಸ್ತ್ರೀವಾದ ಅನ್ವಯಿಕತೆ, ಸ್ತ್ರೀವಾದ: ಚಿಂತನೆ ಮತ್ತು ಹೋರಾಟ, ಸ್ತ್ರೀವಾದ: ಪದ ವಿವರಣ ಕೋಶ, ಸ್ತ್ರೀ ವಾದಿ ಭಾಷಾಶಾಸ್ತ್ರ ಪ್ರವೇಶಿಕೆ, ಮಹಿಳಾ ಆರ್ಥಿಕತೆ, ಹೆಣ್ಣುತನ ಎಂಬ ಕಣ್ಕಟ್ಟು, ಆಧುನಿಕ ಭಾರತದಲ್ಲಿ ಮಹಿಳೆ.ಮುಂತಾದ ಬರಹಗಳು ಇವರ ಕೃತಿಗಳಲ್ಲಿವೆ.ಶ್ರೀಮತಿ ಅವರು ವಿಶ್ವದ ಶ್ರೇಷ್ಠ ಸ್ತ್ರೀವಾದ ಚಿಂತನೆಗಳನ್ನು ಒಬ್ಬ ತಪಸ್ವಿನಿಯಂತೆ ಅಧ್ಯಯನ ನಡೆಸಿ ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ್ದಾರೆ. ಹಜಾರ್ ಚೌರಾಶಿರ್ ಮಾ – ೧೦೮೪ರ ತಾಯಿ (ಮೂಲ ಬಂಗಾಳಿ-ಮಹಾಶ್ವೇತಾದೇವಿ), ರುಡಾಲಿ (ಮೂಲ ಬಂಗಾಳಿ- ಮಹಾಶ್ವೇತಾದೇವಿ), ದ ಸೆಕೆಂಡ್ ಸೆಕ್ಸ್ – ನಾಲ್ಕು ಸಂಪುಟಗಳಲ್ಲಿ (ಮೂಲ: ಸಿಮೊನ್ ದ ಬೊವ್), ಎಲ್ಲರಿಗಾಗಿ ಸ್ತ್ರೀ ವಾದ (ಮೂಲ ಬೆಲ್ ಹುಕ್ಸ್), ಮಹಾಶ್ವೇತಾದೇವಿ ಅವರ ಕಥಾ ಸಾಹಿತ್ಯ-೧ ಮತ್ತು ೨, ಸ್ತ್ರೀವಾದ ಅಂಚಿನಿಂದ ಕೇಂದ್ರದೆಡೆಗೆ (ಬೆಲ್ ಹುಕ್ಸ್) ಮುಂತಾದವು ಇವುಗಳಲ್ಲಿವೆ. ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆಯನ್ನು ಸಂಪಾದಿಸಿದ್ದಾರೆ. ಅವರ ಚಿಂತನೆಗಳ ಮಾತುಕತೆಗಳು ವಿಡಿಯೊ ರೂಪದಲ್ಲಿ ಕೂಡಾ ಲಭ್ಯವಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: