ಬೆಂಗಳೂರು:ಎರಡು ವರ್ಷಗಳಿಂದ ಜನರನ್ನು ಕಾಡುತ್ತಿರುವ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ಸಾರ್ವತ್ರಿಕ ಆರೋಗ್ಯ ರಕ್ಷಣೆ ಗುರಿಯೊಂದಿಗೆ ದೇಶವು ಇಂದು (ಏ.30) ಆಯುಷ್ಮಾನ್ ಭಾರತ ದಿನವನ್ನು ಆಚರಿಸುತ್ತಿದೆ.
ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ವೆಚ್ಚದ ಆರೋಗ್ಯ ರಕ್ಷಣೆಯ ಅರಿವು ಮೂಡಿಸಲು ಈ ದಿನವನ್ನು ಗೊತ್ತುಪಡಿಸಲಾಗಿದೆ.
ಆರೋಗ್ಯ ಮತ್ತು ಯೋಗಕ್ಷೇಮ ಉತ್ತೇಜಿಸಲು ಬಡವರು ಮತ್ತು ಸೌಲಭ್ಯವಂಚಿತರಿಗೆ ಆರೋಗ್ಯ ವಿಮಾ ರಕ್ಷಣೆ ಖಚಿತಪಡಿಸಿಕೊಳ್ಳಲು, ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯ ಕುರಿತು ಅರಿವು ಮೂಡಿಲು ಈ ದಿನವನ್ನು ಮೀಸಲಿಡಲಾಗಿದೆ. ಇದನ್ನು ರಾಷ್ಟ್ರೀಯ ಆರೋಗ್ಯ ವಿಮಾ ಕಾರ್ಯಕ್ರಮ ಅಥವಾ ‘ಮೋದಿ ಕೇರ್’ ಎಂದೂ ಕರೆಯಲಾಗುತ್ತದೆ. ಜನರ ಅಗತ್ಯಗಳನ್ನು ಆಧರಿಸಿ ದೇಶದ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಲಭ್ಯವಾಗುವಂತೆ ಮಾಡುವ ಗುರಿಯೊಂದಿಗೆ ಸರ್ಕಾರ ‘ಆಯುಷ್ಮಾನ್ ಭಾರತ ದಿನ’ ಆಚರಿಸುತ್ತಿದೆ. ಇದಕ್ಕಾಗಿ ಪೂರಕ ಯೋಜನೆ ರೂಪಿಸಿದೆ. ಆ ಮೂಲಕ ದೇಶದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದೆ.
ಅಗತ್ಯತೆ ಏನು?: ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿಯ ಇತ್ತೀಚಿನ ಸಂಶೋಧನೆಗಳ ಪ್ರಕಾರ ಭಾರತದಲ್ಲಿ ಆರೋಗ್ಯ ವ್ಯವಸ್ಥೆಯು ಬಿಕ್ಕಟ್ಟಿನ ಸ್ಥಿತಿಯಲ್ಲಿದ್ದು, ಶೇ.86 ಗ್ರಾಮೀಣ ಪ್ರದೇಶದ ಜನರು ಹಾಗೂ ಶೇ.82 ನಗರಪ್ರದೇಶದ ಜನರು ಆರೋಗ್ಯ ವಿಮೆ ಹೊಂದಿಲ್ಲ. ಇದರ ಪರಿಣಾಮ ಅನಿರೀಕ್ಷಿತ ಘಟನೆ, ದೀರ್ಘಕಾಲೀನ ಆರೋಗ್ಯ ಸಮಸ್ಯೆಯಿಂದ ಈ ಕುಟುಂಬಗಳು ಸಾಲದ ಸುಳಿಗೆ ಸಿಲುಕಿಕೊಳ್ಳುತ್ತವೆ. ಇದಕ್ಕೆ ಪರಿಹಾರವಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ.
ಕ್ಷೇಮ ಕೇಂದ್ರಗಳ ಪಾತ್ರ ಮಹತ್ವದ್ದು: ಜನರಿಗೆ ಸಕಾಲದಲ್ಲಿ ಆರೋಗ್ಯ ಸೇವೆ ಒದಗಿಸಲು ‘ಕ್ಷೇಮ ಕೇಂದ್ರ’ಗಳು ಮಹತ್ವದ ಪಾತ್ರ ವಹಿಸುತ್ತವೆ. ಮಹಿಳೆ ಮತ್ತು ಮಕ್ಕಳ ಆರೋಗ್ಯ ರಕ್ಷಣೆ ಹಾಗೂ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಪತ್ತೆ ಮತ್ತು ಚಿಕಿತ್ಸೆಯ ಜತೆಗೆ ಅಗತ್ಯ ಔಷಧಗಳನ್ನು ಹಾಗೂ ಕೆಲ ವೈದ್ಯಕೀಯ ಪರೀಕ್ಷೆಗಳನ್ನು ಉಚಿತವಾಗಿ ಒದಗಿಸಲಿವೆ. ಆರಂಭಿಕ ಹಂತದಲ್ಲೇ ರೋಗ ಪತ್ತೆ ಹಾಗೂ ಚಿಕಿತ್ಸೆ ಮೂಲಕ ದುಬಾರಿ ಚಿಕಿತ್ಸೆಯ ಅಗತ್ಯವನ್ನು ತಗ್ಗಿಸುವ ಉದ್ದೇಶ ಹೊಂದಿವೆ. ಸಾರ್ವತ್ರಿಕ ಆರೋಗ್ಯ ರಕ್ಷಣೆ ಕಾರ್ಯರೂಪಕ್ಕೆ ತರುವ ಗುರಿಗಳಲ್ಲಿ ಪ್ರಧಾನಮಂತ್ರಿ ಜನರ ಆರೋಗ್ಯ ಯೋಜನೆಯೂ ಒಂದಾಗಿದೆ.
ಆಯುಷ್ಮಾನ್ ಭಾರತ ದಿನದ ಹಿನ್ನೆಲೆ:ಬಡ ಜನರ ಆರೋಗ್ಯ ಮತ್ತು ಕ್ಷೇಮಕ್ಕಾಗಿ ವಿಮಾ ಪ್ರಯೋಜನಗಳನ್ನು ಒದಗಿಸುವ ಮೂಲಕ ಹಣದ ಕೊರತೆಯಿಂದ ವೈದ್ಯಕೀಯ ಸೌಲಭ್ಯಗಳನ್ನು ಪಡೆಯದ ಕೋಟ್ಯಂತರ ಭಾರತೀಯರಿಗೆ ಆರೋಗ್ಯ ಪ್ರಯೋಜನಗಳನ್ನು ಒದಗಿಸಲು 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಆಯುಷ್ಮಾನ್ ಭಾರತ್’ ಯೋಜನೆ ಪ್ರಾರಂಭಿಸಿದರು. ಈ ಯೋಜನೆ ಮೂಲಕ ಭಾರತದಲ್ಲಿ ಕೋಟ್ಯಂತರ ಕುಟುಂಬಗಳಿಗೆ ಆರೋಗ್ಯ ಸೇವೆಯನ್ನು ಒದಗಿಸುವ ಗುರಿ ಹೊಂದಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: