ಯುದ್ದದ ಸಮಯದಲ್ಲಿ ಅಪಘಾತವೆಂಬುದು ನಡೆಯುವುದಿಲ್ಲ. ಹಾಗಾಗಿ ಹೆಲಿಕಾಪ್ಟರ್ ದುರಂತವು ಯುದ್ದದ ಪರಿಣಾಮವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ. ಅವರು ಉಕ್ರೇನ್ ರಾಜಧಾನಿ ಕೀವ್ನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ೧೮ ಮಂದಿ ಮೃತಪಟ್ಟ ಬಗ್ಗೆ ಸ್ವಿಟ್ಝರ್ಲೆಂಡ್ನ ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುತ್ತಿದ್ದರು.
ಸದ್ಯದ ಪರಿಸ್ಥಿತಿಯಲ್ಲಿ ಸ್ವತಂತ್ರ ಪ್ರಪಂಚವು ಯೋಚಿಸಲು ಬಳಸುವ ಸಮಯವನ್ನು ಭಯೋತ್ಪಾದಕ ರಾಜ್ಯವು ಕೊಲ್ಲಲು ಬಳಸುತ್ತಿದೆ. ರಶ್ಯಾ ಸೇನೆಯು ಮತ್ತಷ್ಟು ವ್ಯಘ್ರಗೊಂಡು ತೀವ್ರ ದಾಳಿ ನಡೆಸುವುದಕ್ಕೆ ಮೊದಲೇ ನಮ್ಮ ಮಿತ್ರರಾಷ್ಟ್ರಗಳು ನಮಗೆ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರ ಪೂರೈಸಬೇಕಿದೆ ಎಂದು ಝೆಲೆನ್ಸ್ಕಿ ಅವರು ತಿಳಿಸಿದರು. ಝೆಲೆನ್ಸ್ಕಿ ಈ ಮೂಲಕ ಜರ್ಮನಿಯ ಲೆಪಾರ್ಡ್ ಯುದ್ದ ಟ್ಯಾಂಕ್ನ ಬೇಡಿಕೆಯನ್ನು ಮಂಡಿಸಿದ್ದಾರೆ. ಮೂಲಗಳ ಪ್ರಕಾರ ಜರ್ಮನಿ ತನ್ನ ಲೆಪಾರ್ಡ್ ಟ್ಯಾಂಕ್ಗಳನ್ನು ಪೂರೈಸುವ ಕುರಿತು ಒಲ್ಲದ ಮನಸ್ಸು ಹೊಂದಿದ್ದು, ಅಮೆರಿಕಾ ತನ್ನ ಅಬ್ರಾಮ್ಸ್ ಯುದ್ದ ಟ್ಯಾಂಕ್ ಪೂರೈಸುವವರೆಗೂ ಜರ್ಮನಿ ಕೂಡ ತನ್ನ ಟ್ಯಾಂಕ್ಗಳನ್ನು ಪೂರೈಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಉಳಿದಂತೆ ಉಕ್ರೇನ್ಗೆ ಈಗಾಗಲೇ ಹಲವಾರು ಯುದ್ದ ಸಾಮಾಗ್ರಿಗಳನ್ನು ರವಾನಿಸುವ ಕುರಿತು ಯುನೈಟೆಡ್ ಕಿಂಗ್ಡಮ್ ಹೇಳಿಕೆ ನೀಡಿದೆ. ಇನ್ನು ವಿಶ್ವ ಆರ್ಥಿಕ ವೇದಿಕೆಯಲ್ಲಿ ಪಾಲ್ಗೊಂಡಿರುವ ಉಕ್ರೇನ್ನ ಪ್ರಥಮ ಮಹಿಳೆ, ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಪತ್ನಿ ಒಲೆನಾ ಝೆಲೆನ್ಸ್ಕಿ ದುರಂತ ಸುದ್ದಿ ಕೇಳುತ್ತಿದ್ದಂತೆಯೇ ವೇದಿಕೆಯಲ್ಲಿಯೇ ಕಂಬನಿ ಮಿಡಿದರು. ಆನಂತರ ಹೆಲಿಕಾಪ್ಟರ್ ದುರಂತದಲ್ಲಿ ಮಡಿದವರ ಗೌರವಾರ್ಥ ಸಮಾವೇಶದಲ್ಲಿ ೧೫ ಸೆಕೆಂಡ್ಗಳ ಮೌನ ಆಚರಿಸಲಾಯಿತು.
https://play.google.com/store/apps/details?id=com.speed.newskannada