ಬೆಳಗಾವಿ: ರಾಜ್ಯದ ಕೆಲವು ಶಾಲಾ-ಕಾಲೇಜುಗಳಲ್ಲಿ ನಡೆದಿದ್ದ ಹಿಜಾಬ್-ಕೇಸರಿ ಶಾಲು ವಿವಾದದ ಕಾರಣದಿಂದ ನೀಡಲಾಗಿದ್ದ ರಜೆ ಅವಧಿ ಮುಗಿದಿದ್ದು, ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ 9ನೇ ಹಾಗೂ 10ನೇ ತರಗತಿ ಶಾಲೆಗಳು ಸೋಮವಾರದಿಂದ ಶಾಂತಿಯುತವಾಗಿ ಪುನರಾರಂಭಗೊಂಡಿವೆ.ನಗರದ ಸರ್ದಾರ್ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆಲವು ವಿದ್ಯಾರ್ಥಿನಿಯರು ಸಮವಸ್ತ್ರದೊಂದಿಗೆ ಹಿಜಾಬ್ (ಶಿರವಸ್ತ್ರ) ಧರಿಸಿ ಬಂದಿದ್ದರು. ಅವರನ್ನು ಬಿಡುವುದಕ್ಕಾಗಿ ತಾಯಂದಿರು ಕೂಡ ಬಂದಿದ್ದರು. ನ್ಯಾಯಾಲಯವ ಮಧ್ಯಂತರ ಆದೇಶದ ಪ್ರಕಾರ ಹಿಜಾಬ್ ಧರಿಸಿ ಬರುವಂತಿಲ್ಲ ಎಂದು ಶಿಕ್ಷಕರು ತಿಳಿ ಹೇಳಿದರು. ಈ ವಿಷಯವಾಗಿ ಪೋಷಕರು ಹಾಗೂ ಶಾಲೆಯವರ ಮಧ್ಯೆ ಚರ್ಚೆ ನಡೆಯಿತು. ‘ನಾವು ನಮ್ಮ ಮಕ್ಕಳಿಗೆ ಮಾಸ್ಕ್ ಬೇಕಿದ್ದರೆ ತೆಗೆಸುತ್ತೇವೆ; ಹಿಜಾಬ್ ತೆಗೆಸುವುದಿಲ್ಲ. ಬೇಕಿದ್ದರೆ ತರಗತಿಯಲ್ಲಿ ತೆಗೆಯುತ್ತಾರೆ’ ಎಂದು ಪಟ್ಟು ಹಿಡಿದರು. ಈ ವೇಳೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.ಕೆಲವು ವಿದ್ಯಾರ್ಥಿನಿಯರನ್ನು ಗೇಟ್ನಲ್ಲೆ ತಡೆದ ಶಿಕ್ಷಕರು ಬುರ್ಕಾ ಮತ್ತು ಹಿಜಾಬ್ ತಗೆಸಿದ್ದು ಕೂಡ ಕಂಡುಬಂತು. ವಿದ್ಯಾರ್ಥಿನಿಯರಿಬ್ಬರು ಹಿಜಾಬ್ ಸಮೇತವಾಗಿಯೇ ತರಗತಿ ಕೊಠಡಿಯತ್ತ ತೆರಳಿದರು. ಕೆಲವು ವಿದ್ಯಾರ್ಥಿನಿಯರು ಶಿಕ್ಷಕರ ಸೂಚನೆ ಮೇರೆಗೆ, ಸಿಬ್ಬಂದಿ ಕೊಠಡಿಯಲ್ಲಿ ಬುರ್ಕಾ ಮತ್ತು ಹಿಜಾಬ್ ತೆಗೆದು ತರಗತಿಗೆ ಹಾಜರಾದರು ಎಂದು ಮೂಲಗಳು ತಿಳಿಸಿವೆ. ಮಾಧ್ಯಮ ಪ್ರತಿನಿಧಿಗಳು ತರಗತಿ ಕೊಠಡಿಗಳಿಗೆ ತೆರಳಲು ಪೊಲೀಸರು ಅವಕಾಶ ಕೊಡಲಿಲ್ಲ. ಆ ಶಾಲೆಯಲ್ಲಿ ಉರ್ದು ವಿಭಾಗವಿದೆ.ಈ ಶಾಲೆಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ, ಡಿಡಿಪಿಐ ಬಸವರಾಜ ನಾಲತವಾಡ ಭೇಟಿ ನೀಡಿ ಪರಿಶೀಲಿಸಿದರು. ನ್ಯಾಯಾಲಯದ ಆದೇಶ ಪಾಲಿಸುವಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರಿಗೆ ಸೂಚನೆ ನೀಡಿದರು.ನಗರದ ನ್ಯಾಯಾಲಯ ಸಮೀಪದ ಅಂಜುಮನ್ ಇ-ಇಸ್ಲಾಂ ಸಮೂಹ ಸಂಸ್ಥೆಗಳ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಹಾಜರಾಗಿದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿದ್ದರು.ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಶಾಲೆಗಳ ಬಳಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು.’ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ನ್ಯಾಯಾಲಯದ ಆದೇಶ ಪಾಲಿಸುವಂತೆ ತಿಳಿಸಲಾಗಿದೆ’ ಎಂದು ಡಿಡಿಪಿಐ ಬಸವರಾಜ ನಾಲತವಾಡ ಪ್ರತಿಕ್ರಿಯಿಸಿದರು.’ಶಾಲೆಗಳಲ್ಲಿ ಎಂದಿಗಿಂತ ಹಾಜರಾತಿ ಪ್ರಮಾಣ ಸರಾಸರಿ ಶೇ 25ರಷ್ಟು ಕಡಿಮೆ ಇತ್ತು’ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada