ಕನ್ನಡದ ಸುಮಾರು 300 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟರೊಬ್ಬರು ತಮ್ಮ ಮಗಳಿಂದಲೇ ಕಿರುಕುಳ ಅನುಭವಿಸಿದ್ದಾರೆ.
ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟ ಅಶ್ವತ್ಥನಾರಾಯಣ್ ತಮ್ಮ ಮಕ್ಕಳೊಂದಿಗೆ ವಾಸವಿದ್ದರು. ಆದರೆ ಮಕ್ಕಳಾದ ಉದಯ್ ಹಾಗೂ ಮಗಳು ವಸುಂಧರಾ ಕಳೆದ ಕೆಲವು ದಿನಗಳಿಂದ ಸರಿಯಾಗಿ ಊಟ ನೀಡದೆ, ನೀರು ನೀಡದೆ ಕಿರುಕುಳ ಕೊಟ್ಟಿದ್ದಾರೆ ಅಲ್ಲದೆ ವಿವಿಧ ಮಾತ್ರೆಗಳು, ಚುಚ್ಚುಮದ್ದುಗಳನ್ನು ನೀಡಿ ಕೊಲ್ಲಲು ಯತ್ನಿಸಿದ್ದಾರೆ ಎಂದು ಅಶ್ವತ್ಥ್ ನಾರಾಯಣ್ ಅವರು ಬಸವೇಶ್ವರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಕ್ಕಳು ತಮಗೆ ಹೇಗೆ ಕಿರುಕುಳ ನೀಡುತ್ತಿದ್ದಾರೆ ಎಂಬುದನ್ನು ದೂರಿನಲ್ಲಿ ವಿವರವಾಗಿ ಬರೆದಿರುವ ಅಶ್ವತ್ಥ್ ನಾರಾಯಣ್, ತಮಗೆ ಮನೆಗೆ ಹೋಗಲು ಇಷ್ಟವಿಲ್ಲ ನನ್ನನ್ನು ಯಾವುದಾದರೂ ವೃದ್ಧಾಶ್ರಮಕ್ಕೆ ಸೇರಿಸಿ ಎಂದು ಪೊಲೀಸರ ಬಳಿ ಅಂಗಲಾಚಿಕೊಂಡಿದ್ದಾರೆ.
ಅಶ್ವತ್ಥ್ ನಾರಾಯಣ್ಗೆ ಮೂವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದು, ವಸುಂಧರಾಗೆ ಮದುವೆ ಮಾಡಿಕೊಟ್ಟಿದ್ದಾರೆ ಆದರೆ ಆಕೆ ಪ್ರಸ್ತುತ ತಂದೆಯ ಮನೆಯಲ್ಲಿಯೇ ವಾಸವಿದ್ದು, ಸಹೋದರ ಉದಯ್ಕುಮಾರ್ ಜೊತೆ ಸೇರಿಕೊಂಡು ತಂದೆಗೆ ಕಿರುಕುಳ ನೀಡುತ್ತಿದ್ದಾರಂತೆ.
ಅಶ್ವತ್ಥ್ ನಾರಾಯಣ್ ಅವರಿಗೆ ಸರಿಯಾಗಿ ಊಟ ಸಿಗದ ಕಾರಣ ಅವರು ನೆರೆ-ಹೊರೆಯವರ ಬಳಿ ಊಟ ಕೇಳಿ ಪಡೆದು ತಿಂದ ದಿನಗಳೂ ಇವೆಯೆಂದು ಸ್ವತಃ ಅವರೇ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಸಹಾಯ ಮಾಡಿದ ನೆರೆ-ಹೊರೆಯವರ ಮೇಲೂ ಅಶ್ವತ್ಥ್ ನಾರಾಯಣ್ ಮಕ್ಕಳು ಗಲಾಟೆ ಮಾಡಿದ್ದಾರೆ. ಹಾಗಾಗಿ ರಾತ್ರೋರಾತ್ರಿ ಮನೆ ಬಿಟ್ಟು ಬಂದು ಬಸವೇಶ್ವರ ನಗರ ಪೊಲೀಸ್ ಠಾಣೆ ತಲುಪಿ ಮಕ್ಕಳ ವಿರುದ್ಧ ದೂರು ದಾಖಲಾಗಿದ್ದಾರೆ ಅಶ್ವತ್ಥ್ ನಾರಾಯಣ್.
ಪತ್ನಿಯ ಬಗ್ಗೆಯೂ ದೂರಿರುವ ಅಶ್ವತ್ಥ್ ನಾರಾಯಣ್, ಪತ್ನಿಯು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ತಾನು ನಟಿಸಿ ಹಣ ಸಂಪಾದಿಸಿ ಬೆಂಗಳೂರಿನಲ್ಲಿ ಸೈಟು ಖರೀದಿಸಿ ಮನೆ ಕಟ್ಟಿದ್ದೇನೆ, ಹೆಣ್ಣು ಮಕ್ಕಳ ಮದುವೆ ಮಾಡಿದ್ದೇನೆ. ಆದರೆ ಮಕ್ಕಳು, ಹೆಂಡತಿ ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಊಟದಲ್ಲಿ ಮಾತ್ರೆಗಳನ್ನು ಬೆರೆಸಿ ಕೊಲ್ಲಲು ನೋಡುತ್ತಿದ್ದಾರೆ ಹಾಗಾಗಿ ನನ್ನನ್ನು ವೃದ್ಧಾಶ್ರಮಕ್ಕೆ ಸೇರಿಸಿ ಎಂದು ಅಶ್ವತ್ಥ್ ನಾರಾಯಣ್ ಮನವಿ ಮಾಡಿದ್ದಾರೆ.
ಅಶ್ವತ್ಥ್ ನಾರಾಯಣ್ ಅವರು ಡಾ.ರಾಜ್ಕುಮಾರ್ ಸೇರಿದಂತೆ ಅನೇಕ ಸ್ಟಾರ್ ನಟರೊಂದಿಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
source: