ಕನ್ನಡ ಧ್ವಜ ಸುಟ್ಟವರ ವಿರುದ್ಧ ನಟ ಶಿವರಾಜ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದು, ಕನ್ನಡ ಧ್ವಜವನ್ನು ಸುಟ್ಟವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
”ನಮ್ಮ ನಾಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಲಿ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ.
ಜೈ ಕನ್ನಡ. ಜೈ ಕರ್ನಾಟಕ” ಎಂದು ಶಿವರಾಜ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಟ್ವೀಟ್ ಅನ್ನು ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಬೆಳಗಾವಿ ಪೊಲೀಸರಿಗೆ ಟ್ಯಾಗ್ ಮಾಡುವ ಮೂಲಕ ಒತ್ತಾಯ ಮಾಡಿದ್ದಾರೆ ಶಿವಣ್ಣ.
ಟ್ವೀಟ್ಗೆ ಡಾ ರಾಜ್ಕುಮಾರ್ ಅವರು ಒಂದು ಕೈಯಲ್ಲಿ ಕನ್ನಡದ ಧ್ವಜ ಹಿಡಿದ ಚಿತ್ರ ಹಾಗೂ ಮತ್ತೊಂದು ಕೈಯಲ್ಲಿ, ”ಆಳ್ ಕನ್ನಡ ತಾಯ್, ಬಾಳ್ ಕನ್ನಡ ತಾಯ್” ಎಂಬ ಸಾಲು ಬರೆದಿರುವ ಪ್ಲಕಾರ್ಡ್ ಹಿಡಿದಿರುವ ಚಿತ್ರವನ್ನು ಲಗತ್ತಿಸಿದ್ದಾರೆ. ಶಿವರಾಜ್ ಕುಮಾರ್ ಅವರ ಈ ಟ್ವೀಟ್ ಅನ್ನು ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ. ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
ಶಿವರಾಜ್ ಕುಮಾರ್ ಮಾತ್ರವೇ ಅಲ್ಲದೆ ನಟ ಜಗ್ಗೇಶ್ ಸಹ ಇಂದು ಬೆಳಿಗ್ಗೆ ಇದೇ ವಿಷಯವಾಗಿ ಟ್ವೀಟ್ ಮಾಡಿದ್ದರು. ”ಕನ್ನಡ ಬಾವುಟ ಅಪಮಾನಿಸಿದವರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ. ಹಾಗೂ ಕನ್ನಡಪರ ಈ ವಿಷಯಕ್ಕೆ ಹೋರಾಟ ಮಾಡಿದ ಕನ್ನಡ ಸೈನಿಕರ ದಯಮಾಡಿ ಬಿಡುಗಡೆಗೊಳಿಸಿ” ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಟ್ವೀಟ್ ಮಾಡಿ ಒತ್ತಾಯ ಮಾಡಿದ್ದರು.
ಘಟನೆ ಹಿನ್ನೆಲೆ
ಕನ್ನಡಪರ ಹೋರಾಟಗಾರರು ಎಂಇಎಸ್ ಮುಖಂಡ ದೀಪಕ್ ದಳವಿಗೆ ಡಿಸೆಂಬರ್ 13 ರಂದು ಘೇರಾವ್ ಹಾಕಿ ಮುಖಕ್ಕೆ ಮಸಿ ಬಳಿದರು. ಇದನ್ನು ಖಂಡಿಸಿ ಎಂಇಎಸ್ನವರು ಪ್ರತಿಭಟನಾ ರ್ಯಾಲಿ ಮಾಡಿ ತಿಲಕ್ವಾಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ದೂರು ದಾಖಲಿಸಿದರು. ಪೊಲೀಸರು ಅಂತೆಯೇ ದೂರು ಸ್ವೀಕರಿಸಿ, ಕನ್ನಡಪರ ಹೋರಾಟಗಾರ ಸಂಪತ್ಕುಮಾರ್ ಹಾಗೂ ಇನ್ನಿಬ್ಬರನ್ನು ಬಂಧಿಸಿದ್ದಾರೆ.
ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದಿದ್ದನ್ನು ಖಂಡಿಸಿ ಎಂಇಎಸ್ನ ಕೆಲವರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಪ್ರತಿಭಟನೆ ಮಾಡಿದ್ದು, ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕೆಲವು ಎಂಇಎಸ್ ಬೆಂಬಲಿಗರು, ”ಈಗ ಕನ್ನಡ ಧ್ವಜಕ್ಕೆ ಬೆಂಕಿ ಇಡಲಾಗಿದೆ, ಮುಂದೆ ಕನ್ನಡಿಗರ ಮನೆಗೆ ಬೆಂಕಿ ಇಡುತ್ತೇವೆ” ಎಂದು ಬರೆದು ಕೊಂಡಿದ್ದಾರೆ.