ತ. ಸು. ಶಾಮರಾಯರ ‘ಮೂರು ತಲೆಮಾರು’ಮೊನ್ನೆ ಟಿ. ಎಸ್. ವೆಂಕಣ್ಣಯ್ಯನವರನ್ನು ಅವರ ಸ್ಮರಣೆ ದಿನದಂದು ಅವರ ಕುರಿತು ಪ್ರಸ್ತಾಪಿಸಿದ್ದೆ.ಅವರ ಕುರಿತು ಎಷ್ಟು ಚಿಂತಿಸಿದರೂ, ಓಹ್ ಅವರ ಎತ್ತರದ ಆಳದ ಕುರಿತು ಇನ್ನಷ್ಟು ಅರಸಬೇಕು ಅನಿಸುತ್ತದೆ. ಈ ನಿಟ್ಟಿನಲ್ಲಿ ವೆಂಕಣ್ಣಯ್ಯನವರ ಕಿರಿಯ ಸಹೋದರ ತ. ಸು. ಶಾಮರಾಯರ ‘ಮೂರು ತಲೆಮಾರು’ ಅಮೂಲ್ಯ ಆಸರೆ.’ಮೂರು ತಲೆಮಾರು’ ತ. ಸು ಶಾಮರಾಯರು ಹೇಳಿರುವ ಅವರ ವಂಶದ ಮೂರು ತಲೆಮಾರುಗಳ ಚರಿತ್ರೆ. ಮೊದಲನೆಯ ತಲೆಮಾರಿನ ಬಗ್ಗೆ ಅವರು ಕೇಳಿದ್ದನ್ನೂ, ಎರಡನೇ ತಲೆಮಾರಿನ ಕುರಿತಾಗಿ ನೋಡಿದ್ದನ್ನೂ, ಮೂರನೆಯ ತಲೆಮಾರಿನ ಜೊತೆ ಅನುಭವಿಸಿದ್ದನ್ನೂ ಯಾವುದೇ ಅಲಂಕಾರಿಕತೆ ಇಲ್ಲದಂತೆ ಆತ್ಮೀಯವಾಗಿ ನಿವೇದಿಸಿದ್ದಾರೆ.ಇಡೀ ಪುಸ್ತಕವನ್ನು ಓದಿದಾಗ, ನಮ್ಮ ಭಾರತದಲ್ಲಿ ನಮ್ಮದು ಎನ್ನುವ ಸಿರಿ ಸಂಪತ್ತು ಏನಾದರೂ ಇದ್ದರೆ, ಅದು ಇಲ್ಲಿ ಕಾಣಬರುವ ಸಜ್ಜನಿಕೆ, ಸರಳತೆ ಮತ್ತು ಸಚ್ಚಾರಿತ್ರ್ಯವುಳ್ಳ ಇಂತಹ ತಲೆಮಾರುಗಳು, ನಾವು ನಡೆದಾಡುತ್ತಿರುವ ಈ ನೆಲದಲ್ಲಿ ನಡೆದಾಡಿದ್ದರು ಎನ್ನುವುದೇ ಆಗಿದೆ. ಜೀವನವನ್ನೆಲ್ಲ ಹಲವು ರೀತಿಯ ತಪ್ಪುಗಳಲ್ಲೇ, ನಿಷ್ಠುರತೆಯ ಲಕ್ಷಣಗಳಲ್ಲೇ ಸಾಗಿಸುವ ನಮ್ಮಂತಹ ಹೃದಯಗಳಲ್ಲೂ ಆಗಾಗ ಸದ್ಭಾವ ಮೂಡಿ ಮರೆಯಾಗುತ್ತದಲ್ಲ, ಅದು ಹೇಗೆ ತಾನೇ ಇದ್ದೀತು ಎಂದು ಕೆಲವೊಮ್ಮೆ ಅಚ್ಚರಿ ಹುಟ್ಟುವಂತಹ ಸಂಗತಿಗಳಿಗೆ ‘ಮೂರು ತಲೆಮಾರು’ಗಳಂತಹ ತಲೆಮಾರುಗಳು ಒಂದಷ್ಟು ಬೆಳಕು ಚೆಲ್ಲುತ್ತವೆ. ನಮ್ಮಲ್ಲಿ ಅಪರೂಪಕ್ಕೊಮ್ಮೆ ಉದಿಸುವ ಸದ್ಭಾವಗಳು ಒಂದು ಶತಮಾನ ಮತ್ತು ಅದಕ್ಕೂ ಹಿಂದೆ, ಹಲವಾರು ತಲೆಮಾರುಗಳಲ್ಲಿನ ಬಹಳಷ್ಟು ಪುಣ್ಯ ಜೀವಿಗಳಲ್ಲಿ, ಅವರ ನಿತ್ಯ ಬದುಕಿನ ಬೆಳಕೇ ಆಗಿತ್ತು ಎಂದು ಕಾಣಬರುತ್ತದೆ. ಈ ಶ್ರೇಷ್ಠ ಬದುಕುಗಳ ಸುಮನೋಹರತೆಯನ್ನು ಆಸ್ವಾದಿಸುವಾಗ, ನಮಗೂ ಅಂತಹ ಬದುಕು ಬೇಕು ಎಂಬ ಆಶಯ ಸ್ಫುರಿಸುತ್ತದೆ. ಹಾಗಾಗುತ್ತದೋ ಇಲ್ಲವೋ ಬಹುಶಃ ಅದು ಭಗವಂತನ ಕೃಪೆ. ಆದರೆ ಏನೇನನ್ನೋ ವಾಂಛಿಸುವ ನಮ್ಮ ಬದುಕಿನಲ್ಲಿ ಸಹಾ, ಇಂತಹ ಆಶಯವಾದರೂ ಕಿಂಚಿತ್ತು ಮೂಡಿತಲ್ಲ ಎಂಬಂತಹ ಧನ್ಯತೆ ಮೂಡುತ್ತದೆ.ಮೂರು ತಲೆಮಾರುಗಳು ಕೃತಿ ಒಂದು ರೀತಿಯಲ್ಲಿ ಇಬ್ಬರು ವೆಂಕಣ್ಣಯ್ಯ ಮತ್ತು ಒಬ್ಬರು ಸುಬ್ಬಣ್ಣನವರನ್ನು ಕೇಂದ್ರಬಿಂದುವಾಗಿ ಮಾಡಿಕೊಂಡು, ವಿವಿಧ ಕಾಲಘಟ್ಟಗಳಲ್ಲಿನ ಅತ್ಯಮೂಲ್ಯ ಬದುಕುಗಳನ್ನು ನಮಗೆ ಕಾಣಿಸಿಕೊಡುತ್ತದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: