ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಆದ್ಯತೆಯನ್ನು ನೀಡಬೇಕು; ಮನಃಸಂತೋಷವಿಲ್ಲ ಎಂದಾದರೆ, ಜೀವನದಲ್ಲಿ ಉತ್ಸಾಹವೇ ಕುಂದಿಹೋಗುತ್ತದೆ.
ಹೊಸ ವರ್ಷ ಬಂತೆಂದರೆ ಅನೇಕರು ಹೊಸ ಹೊಸ ನಿರ್ಣಯಗಳ ಪಟ್ಟಿಯನ್ನೇ ಮಾಡುತ್ತಾರೆ. ಅವುಗಳಲ್ಲಿ ‘ಫಿಟ್ನೆಸ್ ಗೋಲ್’, ಆರ್ಥಿಕ ವಿಚಾರದ ಗುರಿಗಳು – ಹೀಗೆ ಅನೇಕ ಗುರಿಗಳನ್ನು ಇಟ್ಟುಕೊಳ್ಳಲಾಗುತ್ತದೆ.
ಕೆಲವರು ತಮ್ಮ ಗುರಿಗಳನ್ನು ಸಾಧಿಸುವಲ್ಲಿ ಸಫಲರಾದರೂ, ಇನ್ನೊಂದಷ್ಟು ಜನರು ಹೊಸ ವರ್ಷ ಆರಂಭವಾಗಿ ಹತ್ತು-ಹದಿನೈದು ದಿನಗಳೊಳಗೇ ಅವನ್ನು ಮರೆತುಬಿಡುತ್ತಾರೆ. ಆಮೇಲೆ ಆ ಕುರಿತು ಹಾಸ್ಯರೂಪದ ಕಮೆಂಟ್ಗಳೂ ಬರುತ್ತವೆ! ಒಂದಷ್ಟು ತಿಂಗಳುಗಳ ಬಳಿಕ ತಮ್ಮ ನಿರ್ಣಯಗಳು ಏನಿದ್ದುವು ಎಂಬುದೂ ಮರೆತು ಹೋಗಿರುತ್ತದೆ. ಆದರೆ ಇಷ್ಟೆಲ್ಲದರ ನಡುವೆ ಇನ್ನೊಂದು ಸಣ್ಣ ಅಂದರೆ, ಇತರೆ ಇಷ್ಟೆಲ್ಲಾ ವಿಚಾರಗಳ ಕುರಿತು ನಾವು ಯೋಚನೆ, ಯೋಜನೆಗಳನ್ನು ಮಾಡಿದರೂ ಮೂಲಭೂತವಾದ ಒಂದು ವಿಚಾರವನ್ನು ಎಲ್ಲೋ ಬದಿಗೊತ್ತಿರುತ್ತೇವೆ.
ಸಾಧಾರಣವಾಗಿ ‘ಯಾಕೆ’ ಎನ್ನುವ ಪ್ರಶ್ನೆಗಳ ಸರಮಾಲೆಯನ್ನು ಕೇಳಿದಾಗ ವ್ಯಕ್ತಿಗಳು ತಲುಪುವಂತಹ ಉತ್ತರ ಅದು! ಉದಾಹರಣೆಗೆ, ‘ವಿದ್ಯಾರ್ಜನೆ ಯಾಕೆ ಮಾಡುವುದು?’ ಎಂದು ಕೇಳಿದರೆ, ಆಗ ಸಿಗುವ ಉತ್ತರ ‘ಉತ್ತಮ ಕೆಲಸವನ್ನು ಗಿಟ್ಟಿಸಿಕೊಳ್ಳಲು’ ಎಂದು. ‘ಉತ್ತಮ ಕೆಲಸ ಯಾಕೆ ಬೇಕು?’ ಎಂದು ಕೇಳಿದರೆ, ‘ಹೆಚ್ಚಿನ ಹಣ ಸಂಪಾದಿಸಲು’ ಎಂದು ಪ್ರತಿಕ್ರಿಯೆ ಬರುತ್ತದೆ. ‘ಯಾಕೆ ಹೆಚ್ಚಿನ ಹಣ ಸಂಪಾದಿಸಬೇಕು?’ ಎಂದರೆ, ‘ಮನೆ, ವಾಹನ, ಸಂಪತ್ತು ಮುಂತಾದುವುಗಳನ್ನು ನಮ್ಮದಾಗಿಸಿಕೊಳ್ಳಲು’ ಎಂದಾಗುತ್ತದೆ! ‘ಅದರ ಅಗತ್ಯ ಯಾಕೆ ಇದೆ?’ ಎಂದು ಕೇಳಿದರೆ, ‘ಸಂತೋಷವಾಗಿರಲು’ ಎಂಬ ಉತ್ತರ ಸಿಗುತ್ತದೆ.
ಈ ಪ್ರಶ್ನಾಸರಣಿಯಲ್ಲಿ ಅರ್ಥವಾಗುವುದೇನೆಂದರೆ, ಅನೇಕರು ‘ಸಂತೋಷ’ಕ್ಕಾಗಿ ಇಷ್ಟೆಲ್ಲಾ ವಿಷಯಗಳ ಅಗತ್ಯವಿದೆ ಎಂಬ ಮನೋಧರ್ಮದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಖುಷಿಯಾಗಿರಲು ಅಥವಾ ಜೀವನದಲ್ಲಿ ಆನಂದವನ್ನು ಕಂಡುಕೊಳ್ಳಲು ಇಷ್ಟೆಲ್ಲಾ ನಿಯಮಗಳನ್ನು ಹಾಕಿಕೊಂಡವರು ಯಾರು? ಮತ್ತು ನಾವು ಯಾಕೆ ಸಂತೋಷವನ್ನು ಕೊನೆಯ ಭಾಗವಾಗಿ ಇಟ್ಟುಕೊಂಡಿದ್ದೇವೆ ಎಂಬುವುದು ಅನೇಕರು ಇವತ್ತು ಕೇಳಿಕೊಳ್ಳಬೇಕಾದ ಪ್ರಶ್ನೆ!
ಇಡೀ ಹಗಲು-ರಾತ್ರಿ ಕೆಲಸ ಮಾಡಿ, ಜೀವನದಲ್ಲಿ ನೆಮ್ಮದಿ ಹಾಗೂ ಸಂತೋಷವಿಲ್ಲದಿದ್ದರೆ, ಹತ್ತಿಯ ಹಾಸಿಗೆಯೂ ಮುಳ್ಳಿನ ಹಾಸಿಗೆಯಂತೆಯೇ ಭಾಸವಾಗುತ್ತದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: