ವೃತ್ತಿಯಲ್ಲಿ ವೈದ್ಯರಾದ ಡಾ. ಎಚ್. ಎಸ್. ಅನುಪಮಾ ಕನ್ನಡ ಸಾಹಿತ್ಯ ಲೋಕದ ಹೆಸರಾಂತ ಬರಹಗಾರ್ತಿ.
ಫೆಬ್ರುವರಿ 6 ಅನುಪಮಾ ಅವರ ಜನ್ಮದಿನ. ಅನುಪಮಾ ಶಿಕ್ಷಕ ವೃತ್ತಿಯ, ಸಾಂಪ್ರದಾಯಿಕ ಮನಃಸ್ಥಿತಿಯ ತಾಯ್ತಂದೆಯರ ಮಗಳಾಗಿ ಹುಟ್ಟಿದರು. ತಂದೆಯ ಊರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆಬ್ಬಾಗಿಲು. ತಾಯಿ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕಣಕಟ್ಟೆಯವರು. ಅವರಿಬ್ಬರು ಪ್ರೌಢಶಾಲೆಯಲ್ಲಿ ಶಿಕ್ಷಕ, ಶಿಕ್ಷಕಿಯರಾಗಿ ಕೆಲಸ ಮಾಡುತ್ತ ವರ್ಗಾವಣೆಗೊಳಗಾಗುತ್ತ ಇದ್ದದರಿಂದ ಇವರ ವಿದ್ಯಾಭ್ಯಾಸ ಮೂರ್ನಾಲ್ಕು ಜಿಲ್ಲೆಗಳ ಹಳ್ಳಿಗಳಲ್ಲಿ ಆಯಿತು. ಯಾವುದೋ ಒಂದು ಊರಿನ, ಒಂದು ಜಾತಿಯ ಕೇರಿಯಲ್ಲಿ ತಾನು ಬೆಳೆಯಲಿಲ್ಲ ಎನ್ನುವುದು ಬಾಲ್ಯಕಾಲ ತಮಗಿತ್ತ ಕೊಡುಗೆಯೆಂದೇ ಅನುಪಮಾ ಭಾವಿಸಿದ್ದಾರೆ. ಅನುಪಮಾ ಮನೆಗೆ ತಂದೆಯವರು ತರುತ್ತಿದ್ದ ಪತ್ರಿಕೆ ನಿಯತಕಾಲಿಕಗಳನ್ನೆಲ್ಲ ಓದುತ್ತಿದ್ದರು. ಲಂಕೇಶ್ ಪತ್ರಿಕೆ ಓದುವಾಗ ಲಂಕೇಶರ ಬರಹದ ರೀತಿ ಬಹಳ ಮೆಚ್ಚುಗೆಯಾಗುತ್ತಿತ್ತು. ಏಳನೇ ತರಗತಿಯಲ್ಲಿರುವಾಗ ಇವರ ಮನೆಯ ಪ್ರೀತಿಯ ಮೊಲ ಶೆಲ್ಲಿಯು ನಾಯಿ ಬಾಯಿಗೆ ತುತ್ತಾದಾಗ ದುಃಖದಿಂದ ಬರೆದ ಪದ್ಯ ‘ವನಿತಾ’ ಪತ್ರಿಕೆಯಲ್ಲಿ ಪ್ರಕಟಗೊಂಡು ಐದು ರೂಪಾಯಿ ಬಹುಮಾನದ ಸಂಭಾವನೆ ಸಂದಿತ್ತು! ನಂತರ ಪದ್ಯ ಬರೆಬರೆದು ಯಾರಿಗೂ ತೋರಿಸದೇ ಬಚ್ಚಿಟ್ಟುಕೊಂಡು ಡೈರಿ ತುಂಬಿಸುತ್ತ ಹೋದರು. ಅಂದಿನ ದಿನಗಳಲ್ಲಿ ಊರಿನಲ್ಲಿ ಕಂಡ ಹೆಣ್ಣುಮಕ್ಕಳ ದಾರುಣ ಪರಿಸ್ಥಿತಿಯ ಬದುಕು ಇವರ ಮೇಲೆ ಅಪಾರ ಪ್ರಭಾವ ಬೀರಿತ್ತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: