ಕೆ. ಎಂ. ಮುನ್ಷಿ ಅವರು ವಿದ್ವಾಂಸರು, ರಾಜಕಾರಣಿ, ವಕೀಲ, ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ಶಿಕ್ಷಣತಜ್ಞರು ಮತ್ತು ಭಾರತೀಯ ವಿದ್ಯಾಭವನದ ಸ್ಥಾಪಕರು. ಕನ್ನ್ಹೈಯಲಾಲ್ ಮನೆಕ್ಲಾಲ್ ಮುನ್ಷಿ ಅವರು ಗುಜರಾತಿನ ಬರೂಚ್ನಲ್ಲಿ 1887ರ ಡಿಸೆಂಬರ್ 30ರಂದು ಜನಿಸಿದರು. ಬಡೋದೆಯಲ್ಲಿ ಶಿಕ್ಷಣ ಮುಗಿಸಿದ ಬಳಿಕ ವಕೀಲರಾದರು (1913). ಭುಲಾಭಾಯಿ ದೇಸಾಯಿಯವರ ಕೈಕೆಳಗೆ ವಕೀಲ ವೃತ್ತಿಯನ್ನು ಇವರು ಆರಂಭಿಸಿದ ಸ್ವಲ್ಪಕಾಲದಲ್ಲೇ ಒಂದನೆಯ ಮಹಾಯುದ್ಧ ಆರಂಭವಾಯಿತು. ಯುದ್ಧ ಮುಗಿಯುವ ವೇಳೆಗೆ ಇವರು ತಮ್ಮ ವೃತ್ತಿಯಲ್ಲಿ ಪ್ರಸಿದ್ಧರಾದರು. ಹಿಂದೂ ಕಾನೂನಿನಲ್ಲಿ ಮುನ್ಷಿಯವರು ವಿಶೇಷ ಜ್ಞಾನ ಪಡೆದಿದ್ದರಲ್ಲದೆ ಕಾನೂನಿನ ಇತರ ಕ್ಷೇತ್ರಗಳಲ್ಲೂ ಪರಿಣಿತರಾಗಿದ್ದರು. ಇವರು ರಚಿಸಿದ ಹಲವು ಪ್ರತಿವಾದಗಳು ಅತ್ಯಂತ ತರ್ಕಬದ್ಧವಾದ ಸಾಹಿತ್ಯಕೃತಿಗಳೆಂದು ಹೆಸರಾಗಿವೆ. ಯಾವುದೇ ವ್ಯಾಜ್ಯದ ಯಾವುದೇ ಪಕ್ಷದ ವಕೀಲಿಯನ್ನಾದರೂ ಇವರು ಅತ್ಯಂತ ಸಮರ್ಥವಾಗಿ ನಿರ್ವಹಿಸಬಲ್ಲವರಾಗಿದ್ದರು. ಎದುರು ಪಕ್ಷದ ವಕೀಲರೊಂದಿಗೆ ಹಾಗೂ ನ್ಯಾಯಮೂರ್ತಿಗಳೊಂದಿಗೆ ಇವರು ನಡೆಸುತ್ತಿದ್ದ ಸಂವಾದಗಳು ರಸಭರಿತವಾದ ಚತುರೋಕ್ತಿಗಳು ಎನಿಸಿದ್ದವು.ಮುನ್ಷಿಯವರು ಮಹಾತ್ಮ ಗಾಂಧಿಯವರ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಹಲವಾರು ಬಾರಿ ಸೆರೆಮನೆ ಶಿಕ್ಷೆ ಅನುಭವಿಸಿದರು. 1937ರಲ್ಲಿ ಭಾರತದ ಹಲವು ಪ್ರಾಂತ್ಯಗಳಲ್ಲಿ ವಿಧಾನಸಭೆಗಳಿಗೆ ಕಾಂಗ್ರೆಸ್ ಸ್ಪರ್ಧಿಸಿದಾಗ ಮುನ್ಷಿಯವರು ಅಂದಿನ ಮುಂಬಯಿ ಪ್ರಾಂತ್ಯದ ವಿಧಾನಸಭೆಗೆ ಆಯ್ಕೆಯಾದರಲ್ಲದೆ ಅಲ್ಲಿಯ ಕಾಂಗ್ರೆಸ್ ಸರ್ಕಾರದಲ್ಲಿ ಗೃಹಮಂತ್ರಿಯಾದರು. 1940ರಲ್ಲಿ ತಮ್ಮ ಪಕ್ಷದ ಇತರ ಮಂತ್ರಿಗಳೊಂದಿಗೆ ಇವರೂ ರಾಜೀನಾಮೆ ನೀಡಿ ಹೊರಬಂದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಇವರು ದೇಶದ ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಗಮನಾರ್ಹವಾದ ಕೆಲಸ ಮಾಡಿದರು. ಭಾಷೆ ಮುಂತಾದ ಹಲವು ವಿಚಾರಗಳಲ್ಲಿ ಉತ್ತರ ದಕ್ಷಿಣ ಭಾರತದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾದಾಗ ಮುನ್ಷಿಯವರು ಸಾಮರಸ್ಯ ಕುದುರಿಸಲು ಯತ್ನಿಸಿದರು. ಕೇಂದ್ರ ಪ್ರಾಬಲ್ಯವುಳ್ಳ ಒಕ್ಕೂಟದ ರಚನೆಗಾಗಿ ಇವರು ವಾದಿಸಿದರೆಂದು ಹೇಳಲಾಗಿದೆ. ರಾಷ್ಟ್ರಪತಿಯನ್ನು ಲೋಕಸಭೆಯಿಂದ ಮಾತ್ರ ಆಯ್ಕೆಮಾಡಲಾಗದೆಂದು ಅವರ ಚುನಾವಣೆಯ ಕ್ಷೇತ್ರ ಇನ್ನೂ ವ್ಯಾಪಕವಾಗಿರಬೇಕೆಂದು ವಾದಿಸಿದವರ ಪೈಕಿ ಮುನ್ಷಿಯವರೂ ಒಬ್ಬರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: