ಹುಬ್ಬಳ್ಳಿ ಏಪ್ರಿಲ್ 19: ಕಳೆದ ಕೆಲ ದಿನಗಳಿಂದ ಭಾರೀ ಸುದ್ದಿಯಲ್ಲಿರುವ ಹಳೇ ಹುಬ್ಬಳ್ಳಿ ಗಲಭೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹುಬ್ಬಳ್ಳಿಯಲ್ಲಿ ವಿವಾದಾತ್ಮಕ ಪೋಸ್ಟ್ ಗೆ ಸಂಬಂಧಿಸಿದಂತೆ ನಡೆದಿರುವ ಗಲಾಟೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ.
ಜೊತೆಗೆ ಈ ಗಲಭೆಯಲ್ಲಿ ವಿಡಿಯೋದಲ್ಲಿ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಕಾಣಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ.
ಪೊಲೀಸ್ ವಾಹನದ ಮೇಲೆ ಹತ್ತಿ ಪ್ರಚೋದನಾತ್ಮಕ ಭಾಷಣ ಮಾಡಿದ್ದ ಮೌಲ್ವಿ ಜತೆ ಅಲ್ತಾಫ್ ಹಳ್ಳೂರ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಗಲಭೆ ಹಿಂದೆ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಗಲಭೆ ವೇಳೆ ತಾವು ಸ್ಥಳದಲ್ಲಿ ಕಾಣಿಸಿಕೊಂಡ ಬಗ್ಗೆ ಅವರು ಸ್ಪಷ್ಟನೆ ಕೂಡ ನೀಡಿದ್ದಾರೆ. ಹುಬ್ಬಳ್ಳಿ ಗಲಭೆಯಲ್ಲಿ ಹಿಂದೂ ಸಂಘಟನೆಗಳ ಕೈವಾಡವಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಲ್ತಾಫ್ ಹಳ್ಳೂರ, ‘ನಾನು ಪ್ರಚೋದನೆ ಮಾಡುತ್ತಿರಲಿಲ್ಲ, ನಮ್ಮ ಜನರನ್ನ ಸಮಾಧಾನ ಮಾಡುತ್ತಿದ್ದೆ. ಎತ್ತರದಲ್ಲಿ ನಿಂತು ಮಾತನಾಡಿದ್ರೆ ಜನರಿಗೆ ನನ್ನ ಧ್ವನಿ ಕೇಳುತ್ತೆ ಅನ್ನೊ ಕಾರಣಕ್ಕೆ ಪೊಲೀಸ್ ವಾಹನ ಏರಿದ್ದೆ. ಗಲಭೆಯಲ್ಲಿ ಪಾಲ್ಗೊಂಡಿದ್ದ ಹಲವರು ಸ್ಥಳೀಯರಲ್ಲ ಎಂದ ಕೈ ನಾಯಕ’ ಸ್ಪಷ್ಟನೆ ನೀಡಿದ್ದಾರೆ.
‘ನನಗೆ ಎಲ್ಲರ ಮುಖ ನೆನಪಿದೆ. ಪ್ರತಿಭಟನೆಯಲ್ಲಿದ್ದ 10-20ಜನ ಮಾತ್ರ ನಂಗೆ ಗೊತ್ತು. ಕಪ್ಪು ಬಟ್ಟೆ ಕಟ್ಟಿಕೊಂಡು ಕಲ್ಲು ಎಸೆದವರು ಸ್ಥಳೀಯರಲ್ಲ. ಗಲಭೆಯಲ್ಲಿ ಹಿಂದೂ ಸಂಘಟನೆಗಳ ಕೈವಾಡವಿದೆ’ ಎಂದು ಅಲ್ತಾಫ್ ಹಳ್ಳೂರ ಆರೋಪಿಸಿದ್ದಾರೆ. ಜೊತೆಗೆ ಗಲಭೆ ವೇಳೆ ಜೈ ಶ್ರೀರಾಮ ಎಂದು ಕೆಲಜನ ಕೂಗಿದರು. ಕೂಗುತ್ತ ಓಡಿಹೋಗಿದ್ದನ್ನ ನಾನು ನೋಡಿದ್ದೇನೆ. ನನ್ನ ಎದುರು ಬರುತ್ತಿದ್ದ ಕಲ್ಲುಗಳು ಮಾತ್ರವಲ್ದೆ, ಹಿಂದಿನಿಂದಲೂ ಕಲ್ಲು ಬರ್ತಾ ಇದ್ವು. ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದೇನೆ ಎಂದಿದ್ದಾರೆ.
ಆರೋಪಿ ಅಭಿಷೇಕ್ ಹಿರೇಮಠ ವಾಟ್ಸಪ್ನಲ್ಲಿ ಎಡಿಟ್ ಮಾಡಿದ ಪ್ರಚೋದನಕಾರಿ ಪೋಸ್ಟರ್ ಹಾಕಿದ್ದರಿಂದ ಹುಬ್ಬಳ್ಳಿಯಲ್ಲಿ ಗಲಭೆ ಉಂಟಾಗಿತ್ತು. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಆಸ್ಪತ್ರೆ, ಆಂಜನೇಯ ದೇವಾಲಯದ ಮೇಲೆ ಕಲ್ಲು ತೂರಲಾಗಿತ್ತು.
ಅಭಿಷೇಕ್ ಹಿರೇಮಠ ಎಂಬಾತ ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ ಎಡಿಟ್ ಮಾಡಿದ ಪೋಸ್ಟರ್ ಸ್ಟೇಟಸ್ ಹಾಕಿಕೊಂಡಿದ್ದ. ತಲೆ ಕೆಟ್ಟರೆ ಇಲ್ಲೂ ಭಗವಾಧ್ವಜ ಹಾರಿಸುವೆ. ಜೈ ಶ್ರೀರಾಮ್, ಹಿಂದೂ ಸಾಮ್ರಾಟ್ ಎಂದು ಬರೆದುಕೊಂಡಿದ್ದ. ಈ ಪೋಸ್ಟರ್ ಕುರಿತು ಹುಬ್ಬಳ್ಳಿ ಅಂಜುಮನ್ ಸಮಿತಿಗೆ ಮಾಹಿತಿ ಬಂದ ಬಳಿಕ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂದೆ ಒಂದು ಸಮುದಾಯದವರು ಜಮಾವಣೆಗೊಂಡರು. ಆರೋಪಿ ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದರು. ಆರೋಪಿಯ ವಿರುದ್ಧ ದೂರು ನೀಡಿದರು. ಹೆಚ್ಚು ಜನರು ಜಮಾವಣೆಗೊಳ್ಳುತ್ತಿದ್ದಂತೆ ಪೊಲೀಸರ ಜೊತೆ ವಾಗ್ವಾದ ನಡೆದಿತ್ತು. ಬಳಿಕ ಆಸ್ಪತ್ರೆ, ಆಂಜನೇಯ ದೇಗುಲದ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಪೊಲೀಸರ ಮೇಲೆ ಸಹ ಕಲ್ಲು ತೂರಾಟ ನಡೆಸಿದ್ದು, 10ಕ್ಕೂ ಅಧಿಕ ಸಿಬ್ಬಂದಿ ಗಾಯಗೊಂಡರು. ಶನಿವಾರ ರಾತ್ರಿಯೇ ಸ್ಟೇಟಸ್ ಹಾಕಿದ್ದ ಆರೋಪಿ ಅಭಿಷೇಕ್ ಹಿರೇಮಠ ಬಂಧಿಸಿದ ಪೊಲೀಸರು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದರು. ಸೋಮವಾರ ಆರೋಪಿಯನ್ನು ನ್ಯಾಯಾಲಯದ ಮುಂದೆ ಬಿಗಿ ಭದ್ರತೆಯಲ್ಲಿ ಹಾಜರುಪಡಿಸಲಾಯಿತು.
ಅಭಿಷೇಕ್ ಹಿರೇಮಠ ಪೋಷಕರಿಗೆ ಸಹ ಪೊಲೀಸ್ ಭದ್ರತೆ ನೀಡಲಾಗಿದೆ. ಅವರನ್ನು ಸುರಕ್ಷಿತ ಸ್ಥಳಕ್ಕೆ ಪೊಲೀಸರು ಕಳುಹಿಸಿದ್ದಾರೆ. ಹುಬ್ಬಳ್ಳಿಯ ಬ್ಯಾಹಟ್ಟಿಯಲ್ಲಿ ಅಭಿಷೇಕ್ ವಾಸವಾಗಿದ್ದ. ಶನಿವಾರ ರಾತ್ರಿ ಕಲ್ಲು ತೂರಾಟ ನಡೆಸಿದ ಸಂಬಂಧ ಆರೋಪಿಗಳನ್ನು ಬಂಧಿಸಲು 8 ತಂಡಗಳನ್ನು ಪೊಲೀಸರು ರಚನೆ ಮಾಡಿದ್ದಾರೆ. ಆದರೆ ಸಿಸಿಟಿವಿ ಕ್ಯಾಮರಾಗಳು ಕೈ ಕೊಟ್ಟಿವೆ. 48 ಸಿಸಿಟಿವಿ ಕ್ಯಾಮರಾಗಳ ಪೈಕಿ 21 ಮಾತ್ರ ಕಾರ್ಯ ನಿರ್ವಹಣೆ ಮಾಡುತ್ತಿತ್ತು. ಇದರಿಂದಾಗಿ ಆರೋಪಿಗಳನ್ನು ಹುಡುಕುವುದು ಸವಾಲಾಗಿದೆ.
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳು ಮಾತ್ರವಲ್ಲ ಸಾಮಾಜಿಕ ಜಾಲತಾಣಗಳನ್ನು ಸಹ ಹುಡುಕಾಟ ನಡೆಸುತ್ತಿದ್ದಾರೆ. ಗಲಭೆ ಬಗ್ಗೆ ಪ್ರಚೋದನಾಕಾರಿ ಪೋಸ್ಟ್ ಹಾಕುವವರ ಮೇಲೆ ಸಹ ಕಣ್ಣಿಟ್ಟಿದ್ದಾರೆ. ಗಲಭೆಯ ಫೋಟೋ, ವಿಡಿಯೋ ಹಾಕಿ ಪ್ರಚೋದನಾಕಾರಿ ಬರಹ ಬರೆಯುತ್ತಿರುವವರ ಮೇಲೆ ಸಹ ಪೊಲೀಸರು ಕಣ್ಣಿಟ್ಟಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada