ಗುರುವಾರ, ಫೆಬ್ರವರಿ 9ರಿಂದ ನಾಗ್ಪುರದಲ್ಲಿ ಆರಂಭವಾಗೊಂಡಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಮೊದಲ ದಿನದಂದು ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅತ್ಯುತ್ತಮ ಬೌಲಿಂಗ್ ನೆರವಿನಿಂಧ ಪ್ರವಾಸಿ ತಂಡದ ವಿರುದ್ಧ ಆತಿಥೇಯ ತಂಡ ಪ್ರಾಬಲ್ಯ ಸಾಧಿಸಿದೆ.
ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಂದು ಆಲ್ರೌಂಡರ್ ರವೀಂದ್ರ ಜಡೇಜಾ ಐದು ವಿಕೆಟ್ ಗೊಂಚಲು ಪಡೆದು, ಟೆಸ್ಟ್ ಕ್ರಿಕೆಟ್ಗೆ ಅತ್ಯುತ್ತಮವಾಗಿ ಪುನರಾಗಮನ ಮಾಡಿದರೆ, ಆಫ್ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೂರು ವಿಕೆಟ್ ಪಡೆದು ಮಿಂಚಿದರು.
ಮೊದಲ ಟೆಸ್ಟ್ನ 1ನೇ ದಿನದಂದು ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಮೇಲುಗೈ ಸಾಧಿಸಿದ್ದರೂ, ಫೀಲ್ಡಿಂಗ್ ವಿಭಾಗದಲ್ಲಿ ಸುಧಾರಿಸಬೇಕಾದ್ದು ತುಂಬಾ ಇದೆ. ಏಕೆಂದರೆ, ಮಾಜಿ ನಾಯಕ ವಿರಾಟ್ ಕೊಹ್ಲಿ ಎರಡು ಕ್ಯಾಚ್ಗಳನ್ನು ಕೈಬಿಟ್ಟರು. ಕೇತ್ರ ರಕ್ಷಣೆಯಲ್ಲಿ ಅತ್ಯಂತ ಚುರುಕಾಗಿರುವ ಕೊಹ್ಲಿಯೇ ಸ್ಲಿಪ್ನಲ್ಲಿ ಜೀವದಾನ ನೀಡುತ್ತಿರುವುದು ತಂಡಕ್ಕೆ ದುಬಾರಿಯಾಗುತ್ತಿದೆ.
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಮೊದಲಿಗೆ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ಗೆ ದಿನದ 16ನೇ ಓವರ್ನಲ್ಲಿ ಜೀವದಾನ ನೀಡಿದರು. ಆ ಓವರ್ನ ಮೊದಲ ಎಸೆತದಲ್ಲಿ ಸ್ಟೀವ್ ಸ್ಮಿತ್ ಫುಲ್ಟಾಸ್ ಎಸೆತದ ವಿರುದ್ಧ ಡ್ರೈವ್ ಮಾಡಲು ಪ್ರಯತ್ನಿಸಿದರು, ಆದರೆ ಬ್ಯಾಟ್ ಅಂಚಿಗೆ ಸವರಿ ಸ್ಲಿಪ್ ಕಡೆ ಹೋಯಿತು. ಮೊದಲ ಸ್ಲಿಪ್ನಲ್ಲಿ ನಿಂತಿದ್ದ ಕೊಹ್ಲಿ ತಮ್ಮ ಬಲಗೈ ಚಾಚಿದರೂ ಚೆಂಡನ್ನು ಹಿಡಿಯಲು ಸಾಧ್ಯವಾಗಲಿಲ್ಲ.
ನಂತರ ಎರಡನೇ ಸೆಷನ್ನಲ್ಲಿ ಆಸೀಸ್ನ ಮತ್ತೊಬ್ಬ ಬ್ಯಾಟರ್ ಪೀಟರ್ ಹ್ಯಾಂಡ್ಸ್ಕಾಂಬ್ ಅವರು ರವೀಂದ್ರ ಜಡೇಜಾ ಅವರ ಬೌಲಿಂಗ್ನಲ್ಲಿ ಎಡ್ಜ್ ಮಾಡಿದರು. ವಿಕೆಟ್ಕೀಪರ್ ಕೆಎಸ್ ಭರತ್ ಅವರ ಕೈಗವಸುಗಳಿಗೆ ಬಡಿದ ನಂತರ ಬಾಲ್ ಮೊದಲ ಸ್ಲಿಪ್ ಕಡೆ ಚಿಮ್ಮಿತು. ಮತ್ತೆ ಅದೇ ಸ್ಲಿಪ್ಸ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿಗೆ ಚೆಂಡನ್ನು ಹಿಡಿಯಲು ಸಾಧ್ಯವಾಗಲಿಲ್ಲ.
ಈ ವೇಳೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮಾರ್ಕ್ ವಾ ಅವರು ಕಾಮೆಂಟರಿ ಮಾಡುವಾಗ, “ನಿಮ್ಮ ಕಾಲುಗಳು ತ್ವರಿತವಾಗಿ ಚಲಿಸಲು ಸಾಕಷ್ಟು ಹತ್ತಿರವಾಗಿರಬೇಕು.” ಎಂದು ಸಲಹೆ ನೀಡಿದರು.
“ವಿರಾಟ್ ಕೊಹ್ಲಿ ಅವರ ಸ್ಥಾನದಲ್ಲಿ ತುಂಬಾ ಮೇಲೆ ನಿಂತಿದ್ದರು. ಸ್ಪಿನ್ ಬೌಲಿಂಗ್ ಮಾಡುವಾಗ ಸ್ವಲ್ಪ ಮೈ ಬಗ್ಗಿಸಬೇಕು. ವಿರಾಟ್ ಕೊಹ್ಲಿ ಚೆನ್ನಾಗಿ ಕ್ಯಾಚ್ ತೆಗೆದುಕೊಳ್ಳಬಹುದುತ್ತು. ಆದರೆ, ಆತ ಅದನ್ನು ನಿರೀಕ್ಷಿಸಿರಲಿಲ್ಲ,” ಎಂದು ಮಾರ್ಕ್ ವಾ ತಿಳಿಸಿದರು.
ಅಂತಿಮವಾಗಿ ಸ್ಟೀವ್ ಸ್ಮಿತ್ 37 ರನ್ ಗಳಿಸಿ ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರೆ, ಪೀಟರ್ ಹ್ಯಾಂಡ್ಸ್ಕಾಂಬ್ 31 ರನ್ ಗಳಿಸಿ ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಔಟಾದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು ಭಾರತದ ಬೌಲರ್ಗಳು 177 ರನ್ಗಳಿಗೆ ಆಲೌಟ್ ಮಾಡಿದರು.
ರವೀಂದ್ರ ಜಡೇಜಾ 22 ಓವರ್ಗಳಲ್ಲಿ 47 ರನ್ ನೀಡಿ ಪ್ರಮುಖ 5 ವಿಕೆಟ್ ಪಡೆದು ಮಿಂಚಿದರು. ಇದು ಅವರ 11ನೇ ಐದು ವಿಕೆಟ್ ಗೊಂಚಲಾಗಿದೆ. ಇದೇ ವೇಳೆ, ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 15.5 ಓವರ್ಗಳಲ್ಲಿ 42 ರನ್ ನೀಡಿ 3 ವಿಕೆಟ್ ಕಬಳಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ವೇಗದ 450 ವಿಕೆಟ್ಗಳನ್ನು ಪೂರೈಸಿದರು.
177 ರನ್ಗಳಿಗೆ ಪ್ರತ್ಯುತ್ತರವಾಗಿ, ಭಾರತ ತಂಡ ಒಂದು ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿದೆ. ನಾಯಕ ರೋಹಿತ್ ಶರ್ಮಾ 56 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡರೆ, ರವಿಚಂದ್ರನ್ ಅಶ್ವಿನ್ 5 ರನ್ ಗಳಿಸಿ ಇನ್ನೂ ಕ್ರೀಸ್ನಲ್ಲಿದ್ದಾರೆ. ಮೊದಲ ಇನ್ನಿಂಗ್ಸ್ ಮುನ್ನಡೆಗೆ ಆತಿಥೇಯ ತಂಡ ಇನ್ನೂ 100 ರನ್ ಗಳಿಸಬೇಕಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada