ಆಡಿರೋ ಮಾತು, ಕಳೆದು ಹೋಗಿರೋ ಸಮಯ ಮತ್ತೆ ವಾಪಸ್ ಬರಲ್ಲ ಅನ್ನೋ ಮಾತಿದೆ. ತಮ್ಮ ಹೇಳಿಕೆಗೆ ಸಚಿವ ಅಶ್ವತ್ಥ್ ನಾರಾಯಣ್, ವಿಷಾದ ವ್ಯಕ್ತಪಡಿಸಿದ್ರೂ ವಿಪಕ್ಷ ಕಾಂಗ್ರೆಸ್ ಮಾತ್ರ ತಣ್ಣಗಾಗಿಲ್ಲ. ಮೈಸೂರಿನಲ್ಲಿ ಮಂತ್ರಿಗಳ ವಿರುದ್ಧ ಕೈಪಡೆ ನಿನ್ನೆ ಪ್ರತಿಭಟಿಸಿದೆ.
ಪ್ರತಿಕೃತಿ ಧಹಿಸಿ ಆಕ್ರೋಶ ಹೊರಹಾಕಿದೆ. ಅತ್ತ ಸಿದ್ದರಾಮಯ್ಯ ಕೂಡ ಸಾಲು ಸಾಲು ಪ್ರಶ್ನೆಗಳ ಮೂಲಕ ಅಶ್ವತ್ಥ್ ನಾರಾಯಣ್ ಮತ್ತು ರಾಜ್ಯ ಸರ್ಕಾರಕ್ಕೆ ತಿವಿದಿದ್ದಾರೆ.
ಮಂಡ್ಯದ ಸಾತನೂರಿನಲ್ಲಿ ಸಚಿವ ಸಿ.ಎನ್ ಅಶ್ವತ್ಥ್ ನಾರಾಯಣ್, ಆಡಿರೋ ಮಾತು ಕಾಂಗ್ರೆಸ್ ಕಾರ್ಯಕರ್ತರನ್ನ ಬೀದಿಗೆ ಬರುವಂತೆ ಮಾಡಿದೆ. ಸಿದ್ದರಾಮಯ್ಯ ಬಗ್ಗೆ ಅಶ್ವತ್ಥ್ ನಾರಾಯಣ್ ವಿವಾದಾತ್ಮಕ ಹೇಳಿಕೆ ಖಂಡಿಸಿ, ಮೈಸೂರಿನಲ್ಲಿ ಯೂತ್ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಮೈಸೂರಿನ ಜೆಎಲ್ಬಿ ರಸ್ತೆ ಬಳಿ ಪ್ರತಿಕೃತಿ ದಹಿಸಿ, ನರಹಂತಕ ನಾರಾಯಣ ಅಂತ ಬೋರ್ಡ್ಗಳನ್ನ ಪ್ರದರ್ಶಿಸಿದ್ರು. ಅಶ್ವತ್ಥ್ ನಾರಾಯಣ್ ವಿರುದ್ಧ ಧಿಕ್ಕಾರ ಕೂಗಿ ಕೈ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ರು. ಸಚಿವ ಅಶ್ವತ್ಥ್ ನಾರಾಯಣ್ ಹೊಡಿ ಬಡಿ ಮಾತಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯರೇ ಕೆಂಡಕಾರಿದ್ದಾರೆ. ಬಿಜೆಪಿಯಿಂದ ಹಿಡಿದು ಆರ್ಎಸ್ಎಸ್ ವಿರುದ್ಧವೂ ಗುಡುಗಿಬಿಟ್ಟಿದ್ದಾರೆ.. ರಾಜ್ಯ ಸರ್ಕಾರಕ್ಕೆ ಸಾಲು ಸಾಲು ಪ್ರಶ್ನೆಗಳನ್ನ ಕೇಳಿ ಪೆಟ್ಟು ಕೊಟ್ಟಿದ್ದಾರೆ.
RSS, ಬಿಜೆಪಿಯದ್ದು ಹೊಡಿ, ಬಡಿ ಸಂಸ್ಕೃತಿ ಎಂದು ಕೆಂಡ
ಮಾತು ಆಡಿದ್ದು, ಅಶ್ವತ್ಥ್ ನಾರಾಯಣ್.. ಹೊಡೀಬೇಕು ಎಂದಿದ್ದು ಅಶ್ವತ್ಥ್ ನಾರಾಯಣ್. ಆದ್ರೆ ಸಿದ್ದರಾಮಯ್ಯ ಮಾತ್ರ ನೇರವಾಗಿ ಬಿಜೆಪಿ, ಆರ್ಎಸ್ಎಸ್ ವಿರುದ್ಧವೇ ಗುಡುಗಿದ್ದಾರೆ. ಇವುಗಳೇ ಅಶ್ವತ್ಥ್ ನಾರಾಯಣ್ ಮೂಲಕ ಹೇಳಿಸಿದ್ದಾರೆ. ಕಡಿ, ಹಿಡಿ, ಹೊಡಿ, ಬಡಿ ಕೊಲೆ ಮಾಡುವ ಸಂಸ್ಕೃತಿ ಇವರದ್ದು ಎಂದು ಆಕ್ರೋಶ ಹೊರಹಾಕಿದ್ದಾರೆ.
ಮಂತ್ರಿ ಆದವರು ಮುಗಿಸಿ ಅಂದ್ರೆ ಏನು ಅರ್ಥ..?
ಇಷ್ಟೇ ಅಲ್ಲ, ಈ ರೀತಿ ಮನಸ್ಥಿತಿ ಇದ್ರೆ ಪ್ರಜಾಪ್ರಭುತ್ವ ಉಳಿಯುತ್ತಾ? ಚುನಾವಣೆಗಾಗಿಯೇ ಹೀಗೆಲ್ಲಾ ಮಾತಾಡ್ತಾರಾ ಎಂದು ಪ್ರಶ್ನಿಸಿದ್ರು. ಕೂಡಲೇ ಸುಮೋಟೋ ಕೇಸ್ ಹಾಕ್ಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ರು. ಇಷ್ಟೆಲ್ಲಾ ವಿವಾದವಾಗ್ತಿದ್ದಂತೆ ಸಚಿವ ಅಶ್ವತ್ಥ್ ನಾರಾಯಣ್, ವಿಷಾದ ವ್ಯಕ್ತಪಡಿಸಿದ್ದಾರೆ. ಅವರಿಗೂ, ನನಗೂ ವೈಯಕ್ತಿಕವಾಗಿ ಏನೂ ಇಲ್ಲ. ಆಗ ಯುದ್ಧ ನಡೆಯುತ್ತಿತ್ತು, ಈಗ ಚುನಾವಣೆ ನಡೀತಿದೆ. ನಾನು ಚುನಾವಣೆಯಲ್ಲಿ ಸೋಲಿಸುವ ಅರ್ಥದಲ್ಲಿ ಹೇಳಿದ್ದೇನೆ ಅನ್ನೋ ಮೂಲಕ ವಿವಾದಕ್ಕೆ ಸ್ಪಷ್ಟನೆ ನೀಡಿದರು.
ಒಟ್ಟಾರೆ, ಪ್ರಚಾರದ ಹಬ್ಬ ಮತ್ತು ಚುನಾವಣೆ ಘೋಷಣೆ ಹತ್ತಿರವಾಗ್ತಿದ್ದಂತೆ, ನಾಯಕರ ಮಾತು ಎಲ್ಲೇ ಮೀರುತ್ತಿದೆ. ವಾದ, ವಾಗ್ದಾದ, ಏಟು ಎದುರೇಟು ನಡುವೆ ಸಚಿವ ಅಶ್ವತ್ಥ್ ನಾರಾಯಣ್, ನಾಲಿಗೆ ಹರಿಬಿಟ್ಟಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗ್ಬಿಟ್ಟಿದೆ.. ಈಗ ವಿಷಾದ ವ್ಯಕ್ತಪಡಿಸಿದ್ರೂ ಮಾತು ಆಡಿದ್ರೆ ಹೋಯ್ತು, ಮುತ್ತು ಉದುರಿದ್ರೆ ಹೋಯ್ತು ಅನ್ನೋದನ್ನ ರಾಜಕೀಯ ನಾಯಕರು ಅರ್ಥಮಾಡಿಕೊಳ್ಳಬೇಕಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada