ಬೆಂಗಳೂರು: 2023ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಚುನಾವಣೆ ವರ್ಷಕ್ಕೂ ಹಿಂದಿನ ವರ್ಷವಾದ 2022ರಲ್ಲಿ ಕರ್ನಾಟಕ ಬಹಳಷ್ಟು ಪ್ರಮುಖ ರಾಜಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಯಿತು. ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್, ಪ್ರಾದೇಶಿಕ ಪಕ್ಷ ಜೆಡಿಎಸ್ ಚುನಾವಣೆ ಹಿನ್ನೆಲೆ ಹಲವು ಕಾರ್ಯಕ್ರಮಗಳನ್ನು ಸಂಘಟಿಸಿದವು. ಎಲ್ಲ ಪಕ್ಷಗಳಲ್ಲೂ ವಿವಿಧ ನೇಮಕ, ಬದಲಾವಣೆ ಕೂಡ ಆಗಿವೆ. ಹಲವರು ಪಕ್ಷಾಂತರ ಮಾಡಿದ್ದು, ತಮ್ಮ ಪಕ್ಷ ಬಿಟ್ಟು, ಬೇರೆ ಪಕ್ಷಕ್ಕೆ ಜಿಗಿದಿದ್ದಾರೆ.
ಇನ್ನು, ಕಾಂಗ್ರೆಸ್ ಎರಡು ಹಂತದಲ್ಲಿ ಮೇಕೆದಾಟು ಪಾದಯಾತ್ರೆ, ಭಾರತ್ ಜೋಡೋ ಯಾತ್ರೆ, ಸಿದ್ದರಾಮೋತ್ಸವದ ಮೂಲಕ ಶಕ್ತಿ ಪ್ರದರ್ಶನ ಮಾಡಿದರೆ, ಬಿಜೆಪಿ ಸತತವಾಗಿ ಜನಸಂಕಲ್ಪ ಯಾತ್ರೆಗಳನ್ನು ಸಂಘಟಿಸಿ ಮುಂದಿನ ಚುನಾವಣೆಗೆ ತಯಾರಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳಿಗೂ ಸೆಡ್ಡು ಹೊಡೆದಿರುವ ಜೆಡಿಎಸ್ ಜನತಾ ಜಲಧಾರೆ, ಪಂಚರತ್ನ ಯಾತ್ರೆ ಮೂಲಕ ರಾಜ್ಯದಲ್ಲಿ ಧೂಳೆಬ್ಬಿಸುತ್ತಿದೆ. ಅದರಂತೆ ಈ ವರ್ಷ ನಡೆದ ಪ್ರಮುಖ ರಾಜಕೀಯ ವಿದ್ಯಮಾನಗಳನ್ನು ಗಮನಿಸುವುದಾದರೆ..ಕಾಂಗ್ರೆಸ್ನಿಂದ ಮೇಕೆದಾಟು ಪಾದಯಾತ್ರೆ2022ರ ಆರಂಭದಲ್ಲಿಯೇ ಮೇಕೆದಾಟು ಬಳಿ ಆಣೆಕಟ್ಟು ನಿರ್ಮಾಣಕ್ಕೆ ಆಗ್ರಹಿಸಿ ಕರ್ನಾಟಕ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸಿದರು. ರಾಮನಗರ ಜಿಲ್ಲೆಯ ಮೇಕೆದಾಟು ಸಂಗಮ ಬಳಿಯಿಂದ ಜನವರಿ 9 ರಿಂದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಆರಂಭಿಸಿತ್ತು. ಮೊದಲು ಒಂದೇ ಹಂತದಲ್ಲಿ ಪಾದಯಾತ್ರೆ ನಿಗದಿಯಾಗಿತ್ತು. ಆದರೆ, ಕೊರೊನಾ ಹಿನ್ನೆಲೆ ಜನವರಿ 13ರಂದು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಬಳಿಕ ಫೆಬ್ರವರಿ 27 ರಿಂದ ಎರಡನೇ ಹಂತದ ಮೇಕೆದಾಟು ಪಾದಯಾತ್ರೆಯನ್ನು ಆರಂಭಿಸಿ, ಮಾರ್ಚ್ 3 ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತ್ಯವಾಗಿತ್ತು. ವರ್ಷದ ಆರಂಭದಲ್ಲಿಯೇ ಮೇಕೆದಾಟು ಪಾದಯಾತ್ರೆಯ ಮೂಲಕ ಕಾಂಗ್ರೆಸ್ ಶಕ್ತಿಪ್ರದರ್ಶನ ನಡೆಸಿತ್ತು.