ಬೆಂಗಳೂರು, ಏ. 11: ದೇಶದ ಗಡಿ ದಾಟಿ ಕನ್ನಡದ ಸಿನಿಮಾದ ಟ್ರೆಂಡ್ ಶುರುವಾಗಿದೆ. ಕೆಜಿಎಫ್ ಚಾಫ್ಟರ್ – 2 ಸಿನಿಮಾ ಜ್ವರ ಎಲ್ಲೆಡೆ ಹಬ್ಬಿದೆ. ಏಪ್ರಿಲ್ 14 ರಂದು ಕರ್ನಾಟಕ ಸೇರಿ ನಾನಾ ಭಾಷೆಗಳಲ್ಲಿ ಕೆಜಿಎಫ್ -2 ಸಿನಿಮಾ ಬರೋಬ್ಬರಿ 7500 ಥೀಯೇಟರ್ಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ.
ಇಂತಹ ಸಂಭ್ರಮದ ಕಾಲದಲ್ಲೇ ಬಿಡುಗಡೆಗೆ ಕಂಟಕ ಎದುರಾಗಿದೆ.
ಕೆಜಿಎಫ್ – 2 ಸಿನಿಮಾ ಬಿಡುಗಡೆಗೆ ತಡೆ ಕೋರಿ ಕಲ್ಯಾಣ ಕರ್ನಾಟಕ ವೇದಿಕೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ಕಲ್ಯಾಣ ಕರ್ನಾಟಕ ವೇದಿಕೆ ಸಂಸ್ಥಾಪಕ ಅಶೋಕ್ ಕುಮಾರ್ ಅಲಿಯಾಸ್ ದುಮ್ಮೇನಹಳ್ಳಿ ಅಶೋಕ್ ಕುಮಾರ್, ಅಖಂಡ ಕರ್ನಾಟಕ ಜನಜಾಗೃತಿ ವೇದಿಕೆ, ಸುರೇಶ್, ರೈತ ಮಾತ್ತು ಕಾರ್ಮಿಕರ ರಕ್ಷಣಾ ವೇದಿಕೆ ವತಿಯಿಂದ ಸಿನಿಮಾ ತಡೆ ಕೋರಿ ಸಿಟಿ ಸಿವಿಲ್ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.
ಕೆಜಿಎಫ್ ಸಿನಿಮಾಗೆ ಸಾಮಾಜಿಕ ಬದ್ಧತೆ ಇಲ್ಲ. ಕೇವಲ ಚಾಕು- ಚೂರಿ ಸಂಸ್ಕೃತಿ ತೋರಿಸಿದ್ದಾರೆ. ಕ್ರೌರ್ಯವನ್ನು ಮೆರೆಸಿದ್ದಾರೆ. ಇಂತಹ ಸಿನಿಮಾಗಳ ಬಿಡುಗಡೆಯಿಂದ ಸಾಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಚಿತ್ರದಲ್ಲಿರುವ ಕ್ರೌರ್ಯ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೆನ್ಸಾರ್ ಬೋರ್ಡ್ಗೆ ದೂರು ಸಲ್ಲಿಸಿದ್ದೆವು. ನಮ್ಮ ಮನವಿ ಅಂಗೀಕರಿಸಿಲ್ಲ. ಬದಲಿಗೆ ಕ್ರೌರ್ಯ ಇರುವ ಸಿನಿಮಾಗೆ ಯುಎ ಸರ್ಟಿಫಿಕೇಟ್ ನೀಡಿ ಬಿಡುಗಡೆಗೆ ಅನುಮತಿ ನೀಡಿದೆ. ಚಲನ ಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟರೂ ಪ್ರಯೋಜನ ಆಗಿಲ್ಲ. ಹೀಗಾಗಿ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ. ನಾಳೆ ನಮ್ಮ ಅರ್ಜಿಯ ವಿಚಾರಣೆ ಇದೆ ಎಂದು ಅರ್ಜಿದಾರ ಅಶೋಕ್ ಕುಮಾರ್ ತಿಳಿಸಿದ್ದಾರೆ.
ಕೆಜಿಎಫ್ ಸಿನಿಮಾ ಕನ್ನಡದ್ದು. ಈ ಹಿಂದೆ ಕ್ರೌರ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಿನಿಮಾಗಳು ಬಂದಿವೆ. ಅವಾಗ ಇಲ್ಲದ ಕ್ರೌರ್ಯ ಕೆಜಿಎಫ್ನಲ್ಲಿ ಕಾಣಿಸಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಶೋಕ್ ಕುಮಾರ್, ಈ ಹಿಂದೆ ಆಗಿದ್ದು ಹೋಯಿತು. ನಮ್ಮ ಗಮನಕ್ಕೆ ಬಂದರೆ ಇನ್ಮುಂದೆ ಎಲ್ಲಾ ಕ್ರೌರ್ಯ ಸಿನಿಮಾಗಳ ವಿರುದ್ಧ ಕಾನೂನು ಸಮರ ಸಾರುತ್ತೇವೆ. ಈ ಮೂಲಕವೇ ಪಾಠ ಕಲಿಸುತ್ತೇವೆ. ಕೆಜಿಎಫ್ ಚಿತ್ರ ಬಿಡುಗಡೆಗೆ ನಮ್ಮ ತಕಾರರು ಇಲ್ಲ.
ಕನ್ನಡದ ಸಿನಿಮಾ ಹೊರ ದೇಶಗಳಲ್ಲಿ ಬಿಡುಗಡೆ ಆಗುತ್ತಿದೆ ಎಂದ್ರೆ ನಮಗೂ ಖುಷಿಯೇ. ಆದ್ರೆ ಸಿನಿಮಾದಲ್ಲಿನ ಕ್ರೌರ್ಯಕ್ಕೆ ಕತ್ತರಿ ಹಾಕಲಿ. ಗನ್ನಲ್ಲಿ ಸಿಗರೇಟ್ ಅಂಟಿಸಿಕೊಳ್ಳುವ ದೃಶ್ಯವಿದೆ. ಅದನ್ನು ನೋಡಿದ ಮಕ್ಕಳ ಮನಸ್ಥಿತಿ ಏನಾಗಬೇಕು. ಅಪರಾಧಕ್ಕೆ ಪ್ರೇರಣೆ ನೀಡಿದಂತಾಗುತ್ತದೆ. ಇಂತಹ ಕ್ರೌರ್ಯವನ್ನು ಸಿನಿಮಾದಲ್ಲಿ ವಿಜೃಂಭಣೆ ಮಾಡಿರುವುದಕ್ಕೆ ನಮ್ಮ ತಕರಾರಿದೆ. ನ್ಯಾಯಾಲಯದ ಮೊರೆ ಹೋಗಿದ್ದೇವೆ. ನ್ಯಾಯಾಲಯದಲ್ಲಿ ಈ ಸಿನಿಮಾಗೆ ತಡೆ ಸಿಗುತ್ತದೆ ಎಂಬ ಭರವಸೆ ಇದೆ ಎಂದು ಅವರು ತಿಳಿಸಿದ್ದಾರೆ.
ಕೆಜಿಎಫ್ ಸಿನಿಮಾಗೆ ತಡೆ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ನಿರ್ಮಾಪಕ ವಿಜಯ್ ಕಿರಗುಂದೂರು ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಎದುರುದಾರರನ್ನಾಗಿ ಉಲ್ಲೇಖಿಸಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada