ಡಾ. ಕೆ. ರಘುನಾಥ್ ಮತ್ತು ಡಾ. ಗಿರಿಜಾ ಶಾಸ್ತ್ರಿ ದಂಪತಿಗಳು ಮುಂಬೈ ನೆಲದಲ್ಲಿ ಅಪಾರವಾದ ಕನ್ನಡ ಸಾಹಿತ್ಯ ಸೇವೆ ಮಾಡುತ್ತಾ ಬಂದಿದ್ದಾರೆ.ಮಾರ್ಚ್ 3 ರಘುನಾಥ್ ಕೃಷ್ಣಮಾಚಾರ್ ಅವರ ಜನ್ಮದಿನ. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಹಾಗೂ ಮುಂಬೈ ವಿ.ವಿ.ಯಿಂದ ಎಂಫಿಲ್ ಮತ್ತು ಪಿಎಚ್.ಡಿ ಪದವಿ ಪಡೆದರು. ಅರವಿಂದ ನಾಡಕರ್ಣಿ ಅವರ ಕಾವ್ಯ – ಒಂದು ಅಧ್ಯಯನ’ ಅವರ ಎಂಫಿಲ್ ಪ್ರಬಂಧ. ‘ಕನ್ನಡ ನವ್ಯ ಸಾಹಿತ್ಯದಲ್ಲಿ ನಗರ ಪ್ರಜ್ಞೆ’ ಅವರ ಸಂಶೋಧನ ಮಹಾಪ್ರಬಂಧ.ಡಾ. ಕೆ. ರಘುನಾಥ್ ಅವರು ಮುಂಬೈನ ಝುನ್ ಝುನ್ ವಾಲಾ ಕಾಲೇಜಿನಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ ಹಾಗೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರು ಮುಂಬೈನ ಕಲ್ಯಾಣ ಕನ್ನಡ ಸಾಹಿತ್ಯ ಕೇಂದ್ರ, ಮುಂಬೆಳಕು ಕನ್ನಡ ಬಳಗದ ಸ್ಥಾಪಕರು.ಡಾ. ರಘುನಾಥ್ ವಿಮರ್ಶಕರಾಗಿ ಹೆಸರಾಗಿದ್ದಾರೆ. ಮಹಾರಾಷ್ಟ್ರ ಸರಕಾರದ ಮಾಧ್ಯಮಿಕ ಹಾಗೂ ಉಚ್ಚ ಮಾಧ್ಯಮಿಕ ಶಿಕ್ಷಣ ಮಂಡಳಿ ಪುಣೆ ಇಲ್ಲಿ ಪಠ್ಯಪುಸ್ತಕ ಮಂಡಳದ ಸಂಪಾದಕರಾಗಿ, ಮುಂಬಯಿ ವಿಶ್ವವಿದ್ಯಾಲಯದ, ಕನ್ನಡ ಅಭ್ಯಾಸ ಮಂಡಳಿಯ ಸದಸ್ಯರಾಗಿ ಇವರ ಸೇವೆ ಸಂದಿದೆ. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಎಂಫಿಲ್ ಪಿಎಚ್ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ಇವರ ಸೇವೆ ಸಲ್ಲುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು, ಅವರ ವಿಮರ್ಶಾ ಕೃತಿಯನ್ನು ಪ್ರಕಟಿಸಿದೆ. ಅವರು ರಾಷ್ಟ್ರಮಟ್ಟದ ಅನೇಕ ಸಮ್ಮೇಳನಗಳಲ್ಲಿ ವಿದ್ವತ್ಪೂರ್ಣ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅನೇಕ ನಿಯತಕಾಲಿಕಗಳು ಮತ್ತು ಅಂತರಜಾಲ ಪತ್ರಿಕೆಗಳಲ್ಲಿ ಇವರ ವಿಮರ್ಶಾತ್ಮಕ ಬರಹಗಳು ಪ್ರಕಟಗೊಂಡಿವೆ. ‘ಅವಲೋಕನ’ ಮತ್ತು ‘ಕನ್ನಡದ ಕನ್ನಡಿಯಲ್ಲಿ’ ಮುಂತಾದವು ಇವರ ಕೃತಿಗಳಲ್ಲಿ ಸೇರಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: