ಅವರು ನಟಿಸಿದ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಯಶಸ್ಸು ಕಾಣುತ್ತಿವೆ. ‘ಶೇರ್ಷಾ’, ‘ಭೂಲ್ ಭುಲಯ್ಯ 2’ ಹಾಗೂ ‘ಜುಗ್ಜುಗ್ ಜಿಯೋ’ ಸಿನಿಮಾದಿಂದ ಅವರಿಗೆ ಹ್ಯಾಟ್ರಿಕ್ ಗೆಲುವು ಸಿಕ್ಕಿದೆ. ‘ಜುಗ್ಜುಗ್ ಜಿಯೋ’ ಚಿತ್ರ ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಸಿದೆ. ಈ ಸಿನಿಮಾದ ಪ್ರಚಾರದ ಸಲುವಾಗಿ ಅವರು ಅನೇಕ ಕಡೆಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಇನ್ನೊಮ್ಮೆ ನಮ್ಮ ಮನೆಗೆ ಬರಬೇಡ’ ಎಂದು ಅವರು ವ್ಯಕ್ತಿಯೊಬ್ಬರಿಗೆ ಖಡಕ್ ಆಗಿ ಎಚ್ಚರಿಕೆ ನೀಡಿದ ಪ್ರಸಂಗವನ್ನು ಈಗ ನೆನಪು ಮಾಡಿಕೊಂಡಿದ್ದಾರೆ. ಆ ಘಟನೆಯು ತುಂಬ ಭಯಾನಕವಾಗಿತ್ತು ಎಂದು ಕಿಯಾರಾ ಅಡ್ವಾಣಿ ಅವರು ಹೇಳಿದ್ದಾರೆ.
ಕಿಯಾರಾ ಅಡ್ವಾಣಿ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಸೌತ್ ಸಿನಿಮಾಗಳಲ್ಲೂ ನಟಿಸಿರುವ ಅವರನ್ನು ಕಂಡರೆ ಕೋಟ್ಯಂತರ ಮಂದಿಗೆ ಅಚ್ಚುಮೆಚ್ಚು. ಹಾಗಂತ ಅಭಿಮಾನದ ಉನ್ಮಾದದಲ್ಲಿ ಏನು ಬೇಕಾದರೂ ಮಾಡಲು ಸಾಧ್ಯವಿಲ್ಲ. ಮುಂಬೈನಲ್ಲಿ ವ್ಯಕ್ತಿಯೊಬ್ಬ ಕಿಯಾರಾ ಅಡ್ವಾಣಿ ಅವರ ಮನೆಗೆ ಏಕಾಏಕಿ ಎಂಟ್ರಿ ನೀಡಿದ್ದ. ಆ ಘಟನೆಯನ್ನು ಅವರು ಈಗ ವಿವರಿಸಿದ್ದಾರೆ.
ಮುಂಬೈನ ಅಪಾರ್ಟ್ಮೆಂಟ್ ಒಂದರ ಮೇಲಿನ ಫ್ಲೋರ್ನಲ್ಲಿ ಕಿಯಾರಾ ಅಡ್ವಾಣಿ ವಾಸವಾಗಿದ್ದಾರೆ. ಆ ಫ್ಲೋರ್ ತುಂಬ ಎತ್ತರದಲ್ಲಿದೆ. ಅವರನ್ನು ಹುಡುಕಿಕೊಂಡು ಬಂದ ಅಭಿಮಾನಿಯು ಲಿಫ್ಟ್ ಬಳಸುವ ಬದಲು ಎಲ್ಲ ಮೆಟ್ಟಿಲುಗಳನ್ನು ಹತ್ತಿದ್ದ. ಅದರಿಂದ ಆತ ಸಿಕ್ಕಾಪಟ್ಟೆ ಬಳಲಿ, ಮೈತುಂಬ ಬೆವರುತ್ತಿದ್ದ. ಅಂಥ ಸ್ಥಿತಿಯಲ್ಲಿ ಕಿಯಾರಾ ಮನೆಯ ಬಾಗಿಲು ಬಡಿದಿದ್ದ. ಅದನ್ನು ಕಂಡು ಕಿಯಾರಾ ಅಡ್ವಾಣಿ ಅವರಿಗೆ ಭಯವಾಗಿತ್ತು.
‘ಯಾಕೆ ಹೀಗೆ ಮಾಡಿದೆ?’ ಎಂದು ಅವರು ಅಭಿಮಾನಿಗೆ ಕೇಳಿದಾಗ, ‘ನೀವೆಂದರೆ ನನಗೆ ಎಷ್ಟು ಇಷ್ಟ ಅಂತ ತೋರಿಸಲು ಹೀಗೆ ಮಾಡಿದೆ’ ಎಂದು ಆತ ಉತ್ತರಿಸಿದ್ದ. ‘ಇನ್ನೊಮ್ಮೆ ನಮ್ಮ ಮನೆಗೆ ಬರಬೇಡ’ ಎಂದು ವಾರ್ನಿಂಗ್ ನೀಡಿ ಆತನನ್ನು ಕಳಿಸಿದ್ದ ಘಟನೆಯನ್ನು ಕಿಯಾರಾ ಅಡ್ವಾಣಿ ಈಗ ನೆನಪಿಸಿಕೊಂಡಿದ್ದಾರೆ.
‘ಆತ ಒಳ್ಳೆಯ ವ್ಯಕ್ತಿ ಆಗಿದ್ದ’ ಎಂದು ಕೂಡ ಕಿಯಾರಾ ಅಡ್ವಾಣಿ ಹೇಳಿದ್ದಾರೆ. ಸದ್ಯ ಅವರ ಕೈಯಲ್ಲಿ ಹಲವು ಆಫರ್ಗಳಿವೆ. ರಾಮ್ ಚರಣ್ ಅವರ ಮುಂದಿನ ಚಿತ್ರಕ್ಕೆ ಅವರು ನಾಯಕಿ ಆಗಿದ್ದಾರೆ. ಸಿದ್ದಾರ್ಥ್ ಮಲ್ಹೋತ್ರಾ ಜೊತೆಗಿನ ಲವ್ ಮತ್ತು ಬ್ರೇಕಪ್ ಗಾಸಿಪ್ನ ಕಾರಣದಿಂದಲೂ ಅವರು ಇತ್ತೀಚೆಗೆ ಹೆಚ್ಚು ಸುದ್ದಿ ಆಗಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada