ಕನಕಪುರ: ನಾರಾಯಣಪುರ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿರುವ ತೆರಿಗೆ ಹಣವನ್ನು ಸರ್ಕಾರಕ್ಕೆ ಜಮೆ ಮಾಡದೆ ಕರ ವಸೂಲಿಗಾರ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಇತ್ತೀಚೆಗೆ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದರು.ತಾಲ್ಲೂಕಿನ ಕಸಬಾ ಹೋಬಳಿಯ ನಾರಾಯಣಪುರ ಪಂಚಾಯಿತಿಯಲ್ಲಿ ಕರ ವಸೂಲಿಗಾರನಾಗಿರುವ ವೈರಮುಡಿ ಎಂಬುವರು ಸಾರ್ವಜನಿಕರ ತೆರಿಗೆ ಹಣವನ್ನು ಸರ್ಕಾರಕ್ಕೆ ಕಟ್ಟದೆ ವಂಚಿಸಿದ್ದಾರೆ ಎಂದು ದೂರಿದರು.ತೆರಿಗೆ ಹಣ ದುರ್ಬಳಕೆ ಸಂಬಂಧ ವೈರಮುಡಿ ವಿರುದ್ಧ ತನಿಖೆ ನಡೆಸಬೇಕೆಂದು ಇತ್ತೀಚೆಗೆ ನಡೆದ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ನಿರ್ಣಯಕೈಗೊಂಡಿದ್ದರು. ಈ ಸುದ್ದಿ ತಿಳಿದ ತಕ್ಷಣ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಕರ ವಸೂಲಿಗಾರನನ್ನು ಸೇವೆಯಿಂದ ಅಮಾನತುಗೊಳಿಸಬೇಕು. ತನಿಖೆ ನಡೆಸಿ ಹಣವನ್ನು ಅವರಿಂದ ಕಟ್ಟಿಸಬೇಕೆಂದು ಒತ್ತಾಯಿಸಿದರು.ವೈರಮುಡಿ ಎರಡು ರಸೀದಿ ಪುಸ್ತಕ ಇಟ್ಟುಕೊಂಡಿದ್ದಾರೆ. ರೈತರೊಬ್ಬರಿಂದ ₹2,400 ತೆರಿಗೆ ಪಡೆದು ಸರ್ಕಾರಕ್ಕೆ ₹400 ಮಾತ್ರ ಕಟ್ಟಿದ್ದಾರೆ. ಇದೇ ರೀತಿ ನೂರಾರು ರೈತರಿಂದ ಹಣ ಪಡೆದು ವಂಚಿಸಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ನೀಡಿದರು.ಪಿಡಿಒ ಆಶಾ ಮಾತನಾಡಿ, ‘ಕರ ವಸೂಲಿಗಾರ ವೈರಮುಡಿ ಹಣ ದುರ್ಬಳಕೆ ಮಾಡಿಕೊಂಡಿರುವ ಸಂಬಂಧ ಈಗಾಗಲೇ ಎಸ್ಡಿಎ ರಮೇಶ್ ಅವರು ಇಲಾಖೆಯ ಅಧಿಕಾರಿಗಳಿಗೆ ದೂರು ಕೊಟ್ಟಿದ್ದಾರೆ. ಗ್ರಾಮಸ್ಥರು ನೀಡಿರುವ ದೂರನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada