25 ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ನಿರೀಕ್ಷೆ ಮಾಡಿದ್ದಕ್ಕಿಂತ ಕಮ್ಮಿ ಸೀಟು ಬಂದಿದ್ದರೆ, ಕಾಂಗ್ರೆಸ್ಸಿಗೆ ನಿರೀಕ್ಷೆಗಿಂತ ಹೆಚ್ಚು ಸೀಟುಗಳು ಬಂದಿದ್ದವು. ಆದರೂ, ಕಾಂಗ್ರೆಸ್ಸಿನಲ್ಲಿ ಆಂತರಿಕ ಕಿತ್ತಾಟ, ಪರಸ್ಪರ ದೋಷಾರೂಪಣೆಗೆ ಫುಲ್ ಸ್ಟಾಪ್ ಬೀಳುತ್ತಿಲ್ಲ.
ಕಾಂಗ್ರೆಸ್ಸಿನಲ್ಲಿ ಎಷ್ಟು ಬಣಗಳಿವೆ ಎಂದು ಕೇಳಿದರೆ ಯಾವ ಕಾಂಗ್ರೆಸ್ಸಿಗರೂ ಬಹಿರಂಗವಾಗಿ ಸತ್ಯ ಹೇಳಲಾರರು. ಆದರೂ, ಬಿಜೆಪಿಯವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮೂಲೆಗುಂಪು ಮಾಡಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳುತ್ತಲೇ ಬರುತ್ತಿದೆ.
ವಿಧಾನ ಪರಿಷತ್ತಿನ ರಿಸಲ್ಟ್ ಶ್ರೇಯಸ್ಸು ಯಾರಿಗೆ ಸಲ್ಲಬೇಕು ಎಂದಾಗ ಎಲ್ಲರೂ ನನ್ನದೂ ಇರಲಿ ಎಂದು ಹೇಳುವುದು ಸ್ವಾಭಾವಿಕ. ಹಾಗಾಗಿಯೇ, ಇಲ್ಲಿ ಮತ್ತೆ ಕಾಂಗ್ರೆಸ್ಸಿನಲ್ಲಿ ಇದೆ ಎಂದು ಹೇಳಲಾಗುತ್ತಿರುವ ಎರಡೂ, ಮೂರೋ ಬಣಗಳಲ್ಲಿ ಗೆಲುವು ಯಾರಿಂದಾಗಿ ಎನ್ನುವ ಚರ್ಚೆ ಕೆಪಿಸಿಸಿ ಪಡಸಾಲೆಯಲ್ಲಿ ಜೋರಾಗಿ ನಡೆಯುತ್ತಿದೆ.
ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಎಷ್ಟು ಬಣಗಳಿವೆಯೋ, ಆದರೆ ಕೋಲಾರ ಕಾಂಗ್ರೆಸ್ಸಿನಲ್ಲಿ ಎರಡು ಬಣಗಳು ಇರುವುದು ಅತ್ಯಂತ ಸ್ಪಷ್ಟ ಮತ್ತು ಜಗಜ್ಜಾಹೀರು. ಈಗ, ಕೋಲಾರದಲ್ಲಿ ಕಾಂಗ್ರೆಸ್ ಗೆದ್ದಿದ್ದರೂ ಕೂಡಾ, ಜಿಲ್ಲೆಯ ರಾಜಕೀಯ ವಿಚಾರ ಪಕ್ಷದಲ್ಲಿ ವೈಮನಸ್ಸಿನ ಗೂಡಾಗಿ ಕೂತಿದೆ.