ಕೊರೊನಾದ ಕರಿಛಾಯೆಯ ನಡುವೆಯು ಮರಳುಗಾಡಿನಲ್ಲಿ ನಡೆದ 13 ನೇ ಆವೃತಿಯ ಇಂಡಿಯನ್ ಪ್ರೀಮಿಯರ್ ಯಶಸ್ವಿಯಾಗಿ ಕೊನೆಗೊಂಡಿದೆ. ಈ ಸಲದ ಕಪ್ ಯಾರಿಗೆ ಎಂದು ಕಳೆದ ಒಂದುವರೆ ತಿಂಗಳಿನಿಂದ ಕಾದು ಕುಳಿತ್ತಿದ್ದ ಕ್ರಿಕೆಟ್ ಪ್ರಿಯರಿಗೆ ಕಡೆಗೂ ಉತ್ತರ ಸಿಕ್ಕಿದೆ. ಮರಳು ನಾಡಿನ ಮಹಾ ಐಪಿಎಲ್ ಯುದ್ಧದಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಕಿರೀಟ ಧರಿಸಿದೆ. ಅರಬ್ ನಾಡಿನಲ್ಲಿ ಅಬ್ಬರಿಸಿದ ಬಿಗ್ ಹಿಟ್ಟರ್ ಪಡೆ ಕೊಲ್ಲಿ ಕದನವನ್ನು ಗೆದ್ದು ಬೀಗಿದೆ. ಕೊಲ್ಲಿ ರಾಷ್ಟ್ರದಲ್ಲಿ ನಡೆದ ಈ ಬಾರಿಯ ಐಪಿಎಲ್ ಕದನದಲ್ಲಿ ಕನ್ನಡಿಗರು ಕಮಾಲ್ ಮಾಡಿದ್ದಾರೆ. ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿದ ಕರುನಾಡಿನ ಕ್ರಿಕೆಟ್ ಖಲಿಗಳು ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಐಪಿಎಲ್ನಲ್ಲಿ ಈ ಬಾರಿ ಕನ್ನಡಿಗರ ಅರ್ಭಟ ಜೋರಾಗಿಯೆ ಇತ್ತು. ಕೆಎಲ್ ರಾಹುಲ್, ಮಯಾಂಕ್ ಅರ್ಗವಾಲ್, ದೇವದತ್ ಪಡಿಕ್ಕಲ್ ಮತ್ತು ಮನೀಶ್ ಪಾಂಡೆ ಮಾತ್ರವಲ್ಲದೇ ಯುವ ವೇಗಿ ಪ್ರಸಿದ್ಧ ಕೃಷ್ಣ ಕೂಡ ಹೊಸ ಭಾಷ್ಯ ಬರೆದಿದ್ದಾರೆ.
13 ನೇ ಆವೃತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕರ್ನಾಟಕದ ಕೆ.ಎಲ್ ರಾಹುಲ್ ಹೊಸ ಚರಿತ್ರೆ ಸೃಷ್ಠಿಸಿದ್ದಾರೆ. ಟೂರ್ನಿಯುದ್ದಕ್ಕೂ ರನ್ ಪ್ರವಾಹ ಹರಿಸಿದ ರಾಹುಲ್ ಈ ಭಾರಿಯ ಆ್ಯರೆಂಜ್ ಕ್ಯಾಪ್ ಅನ್ನು ತನ್ನದಾಗಿಸಿಕೊಂಡಿದ್ದಾರೆ. 14 ಪಂದ್ಯವನ್ನಾಡಿರುವ ರಾಹುಲ್ ಒಂದು ಶತಕ ಹಾಗೂ 5 ಅರ್ಧ ಶತಕದ ನೆರವಿನಿಂದ 670 ರನ್ ಸಿಡಿಸಿದ್ದಾರೆ. ಈ ಮೂಲಕ ಈ ಭಾರಿಯ ಟೂರ್ನಿಯ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡಿದ್ದಾರೆ. ನಾಯಕತ್ವದ ಹೊಸ ಜವಾಬ್ದಾರಿಯೊಂದಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕಣಕ್ಕಿಳಿದ ರಾಹುಲ್ ತಂಡವನ್ನು ದ್ವಿತೀಯ ಸುತ್ತಿನಲ್ಲಿ ಯಶಸ್ವಿಯಾಗಿ ನಿಭಾಹಿಸಿದ್ರು. ಮೈದಾನದಲ್ಲಿ ಕೂಲ್ ಆಗಿ ತಂಡವನ್ನು ಮುನ್ನಡೆಸಿದ್ದ ರಾಹುಲ್, ಧೋನಿಯ ನಂತರ ಭಾರತ ತಂಡಕ್ಕೆ ತಕ್ಕ ಉತ್ತರಾಧಿಕಾರಿ ಎನ್ನುವುದನ್ನು ನಿರೂಪಿಸಿದ್ದಾರೆ. ರಾಹುಲ್ ಸಾಧನೆಗೆ ಹಿರಿಯ ಆಟಗಾರರು ಕೂಡ ಅಭಿಮಾನದ ಮಾತುಳಗಳನ್ನಾಡಿದ್ದಾರೆ. ಈ ಭಾರಿಯ ಟೂರ್ನಿಯಲ್ಲಿ ರಾಹುಲ್ ನೀಡಿರುವ ಉತ್ತಮ ಪ್ರದರ್ಶನವನ್ನ ಗಮನಿಸಿದ ಭಾರತದ ರಾಷ್ಟ್ರೀಯ ತಂಡದ ಆಯ್ಕೆಗಾರರು, ನವೆಂಬರ್ 27 ರಿಂದ ಕಾಂಗರುಗಳ ನಾಡಿನಲ್ಲಿ ಆರಂಭವಾಗುವ ಏಕದಿನ ಪಂದ್ಯದಲ್ಲಿ ಕನ್ನಡಿಗನಿಗೆ ಉಪನಾಯಕ ಪಟ್ಟ ನೀಡಿದೆ.
ಈ ಬಾರಿಯ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬ್ಯಾಟಿಂಗ್ ಗೆ ಕನ್ನಡಿಗ ದೇವದತ್ತ್ ಪಡಿಕ್ಕಲ್ ಮತ್ತಷ್ಟು ಬಲ ತುಂಬಿದ್ರು. ಸನ್ ರೈಸರ್ಸ್ ಹೈದ್ರಬಾದ್ ವಿರುದ್ಧದ ಪಂದ್ಯದ ಮೂಲಕ ವಿಶ್ವದ ಶ್ರೀಮಂತ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಪಡಿಕ್ಕಲ್ ಪಾದಾರ್ಪಣೆ ಮಾಡಿದರು. ದೇವದ್ದತ್ ಪಡಿಕ್ಕಲ್ ಪಾದಾರ್ಪಣೆ ಪಂದ್ಯದಲ್ಲೇ ಅರ್ಧ ಶತಕ ಸಿಡಿಸುವ ಮೂಲಕ ಪಾದಾರ್ಪಣೆಯನ್ನು ಸ್ಮರಣೀಯ ಗೊಳಿಸಿದ್ರು. 20 ರ ಹರೆಯದ ಪಡಿಕ್ಕಲ್ ಕೊಲ್ಲಿ ಕದನದಲ್ಲಿ ಧೂಳೆಬ್ಬಿಸಿದ್ರು. ಈ ಬಾರಿ ಟೂರ್ನಿಯಲ್ಲಿ ಆಡಿರುವ 15 ಪಂದ್ಯಗಳಲ್ಲಿ ಪಡಿಕ್ಕಲ್ 473 ಚಚ್ಚಿದ್ರು. ಈ ಮೂಲಕ ಈ ಭಾರಿಯ ಟೂರ್ನಿಯಲ್ಲಿ ಆರ್.ಸಿ.ಬಿ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡ್ರು. ಅಲ್ಲದೆ 13 ನೇ ಆವೃತಿಯ ಐಪಿಎಲ್ ನಲ್ಲಿ ಅತೀ ಹೆಚ್ಚು ರನ್ ಸಿಡಿಸಿರುವ ಪಟ್ಟಿಯಲ್ಲಿ ಕೂಡ ಸ್ಥಾನ ಪಡೆದುಕೊಂಡ್ರು. ಪ್ರಥಮ ಟೂರ್ನಿಯಲ್ಲೇ ಹಲವು ಪ್ರಥಮಗಳಿಗೆ ಹೊಳಪು ತುಂಬಿದ ಪಡಿಕ್ಕಲ್ ಈ ಭಾರಿಯ ಐಪಿಎಲ್ ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಅಂತರಾಷ್ಟ್ರೀಯ ಪಂದ್ಯವನ್ನಾಡುವ ಮೊದಲು ಐಪಿಎಲ್ ನಲ್ಲಿ ಅತೀ ಹೆಚ್ಚು ಅರ್ಧ ಶತಕ ಸಿಡಿಸಿರುವ ಭಾರತದ ಮೊದಲ ಆಟಗಾರ ಎಂಬ ಹಿರಿಮೆಗೂ ಪಡಿಕ್ಕಲ್ ಪಾತ್ರರಾಗಿದ್ದಾರೆ. ಪಡಿಕ್ಕಲ್ ಐಪಿಎಲ್ ನಲ್ಲಿ ಒಟ್ಟು 5 ಅರ್ಧ ಶತಕ ಸಿಡಿಸಿದ್ದಾರೆ. ಈ ಭಾರಿಯ ಟೂರ್ನಿಯಲ್ಲಿ ಪಡಿಕ್ಕಲ್ 51 ಬೌಂಡರಿ ಹಾಗೂ 8 ಸಿಕ್ಸರ್ಸ್ ಕೂಡ ಕನ್ನಡಿಗನ ಬ್ಯಾಟ್ ನಿಂದ ಹರಿದು ಬಂದಿದೆ. ಐಪಿಎಲ್ನಲ್ಲಿ ಮೊದಲ ಆವೃತ್ತಿಯಲ್ಲೇ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡದೇ ಹೆಚ್ಚು ರನ್ಗಳಿಸಿದ ಭಾರತದ ಪ್ರಥಮ ಬ್ಯಾಟ್ಸ್ಮನ್ ಎಂಬ ಶ್ರೇಯಸ್ಸಸು ಕೂಡ ಪಡಿಕ್ಕಲ್ ಅವರದ್ದು. ದೇವದತ್ತ್ ಪಡಿಕ್ಕಲ್ ವಿರಾಟ್ ಪಡೆಯ ಬ್ಯಾಟಿಂಗ್ ಶಕ್ತಿಯಾಗಿ ಹೊರಹೊಮ್ಮಿದ್ದಾರೆ.
ಸನ್ ರೈಸರ್ಸ್ ಹೈದ್ರಬಾದ್ ತಂಡವು ಈ ಬಾರಿಯ ಪ್ಲೇ ಆಫ್ ಗೆ ಎಂಟ್ರಿಕೊಡುವಲ್ಲಿ ಕನ್ನಡಿಗ ಮನೀಶ್ ಪಾಂಡೆ ಕೊಟ್ಟ ಕೊಡುಗೆ ಅಪಾರವಾಗಿತ್ತು. ಸನ್ ರೈಸರ್ಸ್ ಹೈದ್ರಬಾದ್ ತಂಡದ ಪ್ರಮುಖ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡಿದ್ದ ಪಾಂಡೆ ಟ್ರಂಪ್ ಕಾರ್ಡ್ ಆಟಗಾರನಾಗಿಯು ಗುರುತಿಸಿಕೊಂಡಿದ್ರು. ಈ ಭಾರಿಯ ಟೂರ್ನಿಯಲ್ಲಿ ಹದಿನಾರು ಪಂದ್ಯವನ್ನಾಡಿರುವ ಪಾಂಡೆ 3 ಅರ್ಧ ಶತಕದ ನೆರವಿನಿಂದ 425 ರನ್ ಬಾರಿಸಿದ್ದಾರೆ. ಪಾಂಡೆ ಬ್ಯಾಟ್ ನಿಂದ 35 ಬೌಂಡರಿ ಹಾಗೂ 18 ಸಿಕ್ಸರ್ ಮೂಡಿ ಬಂದಿದೆ. ಲೀಗ್ ನ ಕಡೆಯ ಪಂದ್ಯಗಳಲ್ಲಿ ಮನೀಶ್ ಪಾಂಡೆ ದರ್ಬಾರ್ ನಡೆಸಿದ ಕಾರಣ ಹೈದ್ರಬಾದ್ ತಂಡವು ಪ್ಲೇ ಆಫ್ ಗೆ ಲಗ್ಗೆ ಇಡಲು ಸಾಧ್ಯವಾಯಿತು. ಸನ್ ರೈಸರ್ಸ್ ಹೈದ್ರಬಾದ್ ತಂಡವು ಟೂರ್ನಿಯಲ್ಲಿ ತೃತೀಯ ಸ್ಥಾನವನ್ನ ಪಡೆಯುವಲ್ಲಿ ಪಾಂಡೆ ಕೊಡುಗೆ ಅಪಾರವಾಗಿತ್ತು.
ಮರಳುನಾಡಿನ ಮಹಾಯುದ್ಧದಲ್ಲಿ ಯುವ ವೇಗಿ ಪ್ರಸಿದ್ಧಕೃಷ್ಣ ತಮಗೆ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸುವಲ್ಲಿ ಸಫಲರಾಗಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿದ ಈ ಯುವ ವೇಗಿ ಕೃಷ್ಣ ಆಡಿರುವ 6 ಪಂದ್ಯಗಳ ಪೈಕಿ 4 ವಿಕೆಟ್ ಕಬಳಿಸಿದ್ದಾರೆ.ಅದರಲ್ಲೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 29 ರನ್ ನೀಡಿ ಪ್ರಮುಖ ಮೂರು ಕಬಳಿಸಿದ್ದು ಈ ಬಾರಿಯ ಟೂರ್ನಿಯ ಬೆಸ್ಟ್ ಬೌಲಿಂಗ್ ಎಕಾನೆಮಿ ಆಗಿದೆ.ಒಟ್ಟಿನಲ್ಲಿ ಈ ಕೊಲ್ಲಿ ಕದನದಲ್ಲಿ ಧೂಳೆಬ್ಬಿಸಿದ ಪ್ರಸಿದ್ಧ ಕೃಷ್ಣ ಅವರ ವೇಗದ ಬೌಲಿಂಗ್ ಗೆ ಆಸೀಸ್ ತಂಡದ ಮಾಜಿ ಘಾತಕ ವೇಗಿ ಬ್ರೆಟ್ ಲೀ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಸಿದ್ಧ ಕೃಷ್ಣ ಹೆಚ್ಚು ವಿಕೆಟ್ ಪಡೆಯಲು ಸಾಧ್ಯವಾಗಿಲ್ಲವಾದ್ರು,ಎದರಾಳಿ ತಂಡದ ರನ್ ವೇಗಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದ್ರು.
ಜೂನಿಯರ್ ಗ್ರೇಟ್ ವಾಲ್ ಎಂದೆನಿಸಿಕೊಂಡಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ಈ ಭಾರಿಯ ಐಪಿಎಲ್ ನಲ್ಲಿ ಮೋಡಿ ಮಾಡಿದ್ದಾರೆ. ಅಲ್ಲದೇ ಈ ಭಾರಿಯ ಟೂರ್ನಿಯಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹಿರಿಮೆಗೂ ಮಯಾಂಕ್ ಪಾತ್ರರಾಗಿದ್ದಾರೆ. ಪಂಜಾಬ್ ಪರ ಪ್ರಚಂಡ ಬ್ಯಾಟಿಂಗ್ ನಡೆಸಿದ ಅಗರ್ವಾಲ್ ಸದ್ದು ಗದ್ದವಿಲ್ಲದ ಅಂಗಳದಲ್ಲಿ ಬೌಂಡರಿ-ಸಿಕ್ಸರ್ ಗಳ ಪಟಾಕಿ ಸಿಡಿಸಿದ್ರು. 11 ಪಂದ್ಯವನ್ನಾಡಿರುವ ಅಗರ್ವಾಲ್ 38.54 ರನ್ ಗಳ ಸರಾಸರಿಯಲ್ಲಿ 424 ರನ್ ಸಿಡಿಸಿದ್ದಾರೆ. ಅಗರ್ವಾಲ್ ಇನ್ನಿಂಗ್ಸ್ ನರಲ್ಲಿ ಒಂದು ಶತಕ ಹಾಗೂ ಎರಡು ಅರ್ಧ ಶತಕ ಸೇರಿವೆ. ಐಪಿಎಲ್ ಮೂಲಕ ಭಾರತದ ರಾಷ್ಟ್ರೀಯ ತಂಡದ ಆಯ್ಕೆಗಾರರ ಗಮನಸೆಳೆಯುವಲ್ಲಿ ಕೂಡ ಅಗರ್ವಲ್ ಯಶ ಕಂಡಿದ್ದಾರೆ.
ಇನ್ನೂ ಯುವ ಪ್ರತಿಭೆಗಳು ಕೊಲ್ಲಿ ರಾಷ್ಟ್ರದಲ್ಲಿ ಕಮಾಲ್ ಮಾಡಿದ್ರೆ ಹಿರಿಯ ಆಟಗಾರ ರಾಬಿನ್ ಉತ್ತಪ್ಪ ವೈಫಲ್ಯ ಅನುಭವಿಸಿದ್ರು. ಕಳೆದ ಹಲವು ವರ್ಷಗಳಿಂದ ಭಾರತದ ರಾಷ್ಟ್ರೀಯ ತಂಡದಲ್ಲಿ ಅವಕಾಶ ಗಿಟ್ಟಿಸಕೊಳ್ಳಲು ವಂಚಿತರಾಗಿದ್ದ ಉತ್ತಪ್ಪ ಈ ಬಾರಿಯ ಟೂರ್ನಿಯಲ್ಲಿ ಅಬ್ಬರಿತ್ತಾರೆ ಎಂಬ ನಂಬಿಕೆ ಇತ್ತು. ಆದರೆ ಉತ್ತಪ್ಪ ಉತ್ತಮವಾಗಿ ಬ್ಯಾಟ್ ಬೀಸುವಲ್ಲಿ ವಿಫಲರಾದ್ರು. ಉತ್ತಪ್ಪ ಈ ಬಾರಿ ಆಡಿರುವ 12 ಪಂದ್ಯಗಳ ಪೈಕಿ ಕೇವಲ 196 ರನ್ ಗಳಿಸಲಷ್ಟೇ ಶಕ್ತರಾದ್ರು. ಉತ್ತಪ್ಪ ಬ್ಯಾಟ್ ನಿಂದ ಈ ಭಾರಿ ಒಂದೇ ಒಂದು ಅರ್ಧಶತಕ ಕೂಡ ಬಂದಿಲ್ಲ.. ಈ ಭಾರಿಯ ಟೂರ್ನಿಯಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದ ಉತ್ತಪ್ಪ ಅವರ ಗರಿಷ್ಠ ಸ್ಕೋರ್ 41 ಆಗಿವೆ.
13 ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ರಾಜ್ಯದ ನಾಲ್ವರು 400 ಕ್ಕಿಂತ ಅಧಿಕ ರನ್ ಸಿಡಿಸಿರುವ ಸಾಧನೆ ಮಾಡಿದ್ದಾರೆ. ಕರ್ನಾಟಕದ ರಾಹುಲ್, ಅಗರ್ವಾಲ್, ದೇವದ್ದತ್ತ್ ಪಡಿಕ್ಕಲ್ ಹಾಗೂ ಮನೀಶ್ ಪಾಂಡೆ ಅವರು ಈ ಭಾರಿಯ ಟೂರ್ನಿಯಲ್ಲಿ 400ರಕ್ಕೂ ಅಧಿಕ ರನ್ ಬಾರಿಸಿರುವ ಸಾಧನೆ ಮಾಡಿದ್ದಾರೆ. ರಾಹುಲ್ 670 ಸಿಡಿಸಿದ್ರೆ, ಪಡಿಕ್ಕಲ್ 473 ರನ್ ಸಿಡಿಸಿದ್ದಾರೆ. ಇನ್ನೂ ಅಗರ್ವಾಲ್ 424 ಚಚ್ಚಿದ್ರೆ, ಪಾಂಡೆ ಬ್ಯಾಟ್ ನಿಂದ 425 ರನ್ ಹರಿದು ಬಂದಿವೆ.
ಒಟ್ಟಿನಲ್ಲಿ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದ್ದ ಈ 13 ನೇ ಆವೃತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕರ್ನಾಟಕದ ಹಲವು ಉದಯೋನ್ಮುಖ ಪ್ರತಿಭೆಗಳು ಮಿಂಚು ಹರಿಸಿದ್ದಾರೆ. ಐಪಿಎಲ್ ಪ್ರದರ್ಶನದ ಮೂಲಕ ಭಾರತ ತಂಡದ ಕದ ತಟ್ಟಿದ್ದಾರೆ. ಅಂತರಾಷ್ಟ್ರಿಯ ಮಟ್ಟದ ಸ್ಟಾರ್ ಆಟಗಾರರು ನಾಚುಂವತೆ ಪ್ರದರ್ಶನ ನೀಡಿದ ಇವರ ಸಾಧನೆಗೆ ನಿಜಕ್ಕೂ ಮೆಚ್ಚಲೇ ಬೇಕಾಗಿದ್ದೆ.
ಇದನ್ನ ಓದಿ:ಹೊಸ ಚಿತ್ರದ ಟೀಸರ್ ರಿಲೀಸ್ ಮಾಡಿದ ಶಿವಣ್ಣ..!