ಕಲ್ಯಾಣ ಕರ್ನಾಟಕದ ಉತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿ ಸರ್ಕಾರದ ಇದುವರೆಗಿನ ಸಾಧನೆ ಮತ್ತು ಪಂಚ ಗ್ಯಾರಂಟಿಯ ಬಗ್ಗೆ ಮಾತನ್ನಾಡಿದ್ದಾರೆ. ಅದರ ಆಯ್ದ ಅಂಶ ಈ ರೀತಿಯಿದೆ:
ಶಕ್ತಿ ಯೋಜನೆ:
ರಾಜ್ಯದಾದ್ಯಂತ 4 ಸಾರಿಗೆ ನಿಗಮದ ಬಸ್ಸುಗಳಲ್ಲಿ ರಾಜ್ಯದೊಳಗೆ ಮಹಿಳೆಯರಿಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಪ್ರಯಾಣ ಒದಗಿಸುವ “ಶಕ್ತಿ” ಯೋಜನೆಯಡಿ ಪ್ರತಿ ದಿನ 50 ರಿಂದ 60 ಲಕ್ಷ ಜನ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆಯುತ್ತಿದ್ದು, ವಾರ್ಷಿಕವಾಗಿ ಸರ್ಕಾರವು ಇದಕ್ಕಾಗಿ 4,000 ಕೋಟಿ ರೂ.
ವೆಚ್ಚ ಮಾಡಲಿದೆ.
ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಸಪ್ಟೆಂಬರ್ 5ರ ವರೆಗೆ ದಿನನಿತ್ಯ 6.75 ಲಕ್ಷದಂತೆ 587.36 ಲಕ್ಷ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ. ಪ್ರಯಾಣದ ವೆಚ್ಚದ ಪೈಕಿ 93.48 ಕೋಟಿ ರೂ. ನಿಗಮಕ್ಕೆ ಸರ್ಕಾರ ಭರಿಸಿದೆ. ಇದರಿಂದ ಕೆ.ಕೆ.ಆರ್.ಟಿ.ಸಿ. ನಿಗಮಕ್ಕೂ “ಆರ್ಥಿಕ ಶಕ್ತಿ” ಬಂದಿದೆ.
ಶಕ್ತಿ ಯೋಜನೆ ಪರಿಣಾಮ ಪ್ರಯಾಣಿಕರ ದಟ್ಟಣೆ ಹೆಚ್ಚಿದ ಪ್ರದೇಶದಲ್ಲಿ ದೇವಸ್ಥಾನ, ಯಾತ್ರಿಕ, ಪ್ರವಾಸಿ ಸ್ಥಾನಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು ಹೊಸದಾಗಿ 203 ಅನುಸೂಚಿಗಳಲ್ಲಿ ಬಸ್ಸು ಓಡಿಸಲಾಗುತ್ತಿದೆ. ಶಕ್ತಿ ಯೋಜನೆ ಪರಿಣಾಮ ಚಾಲ್ತಿಯಲಿದ್ದ 4,028 ಅನುಸೂಚಿಗಳನ್ನು 4,231ಕ್ಕೆ ಮತ್ತು ಸರತಿಗಳನ್ನು 22,214 ರಿಂದ 24,173ಕ್ಕೆ ಪರಿಷ್ಕರಿಸಿದೆ. ಇದರಿಂದ ಸಾರಿಗೆ ಪ್ರಯಾಣ ಸಹ ವಿಸ್ತಾರಗೊಂಡಿದೆ.
Shakti Yojana: ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಮಾತ್ರವಲ್ಲ ಪುರುಷ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಳ, ಸಿಎಂ ಮೆಚ್ಚುಗೆ
ಅನ್ನಭಾಗ್ಯ:
ಹಸಿವು ಮುಕ್ತ ಕರ್ನಾಟಕ್ಕಾಗಿ “ಅನ್ನ ಭಾಗ್ಯ” ಯೋಜನೆಯಡಿ 10 ಕೆ.ಜಿ. ಆಹಾರ ಧಾನ್ಯ ನೀಡಲು ಘೋಷಿಸಲಾಗಿದ್ದು, ರಾಜ್ಯದ 4.42 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಇದಕ್ಕಾಗಿ ವಾರ್ಷಿಕ 10 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ ಕಾರಣ, ಜುಲೈ-2023 ಮಾಹೆಯಿಂದಲೆ 5 ಕೆ.ಜಿ ಅಕ್ಕಿಯ ಬದಲು ಪ್ರತಿ ಕೆ.ಜಿ.ಗೆ 34 ರೂ. ಗಳಂತೆ ತಲಾ ಸದಸ್ಯರಿಗೆ 170 ರೂ. ಗಳನ್ನು ಡಿ.ಬಿ.ಟಿ. ಮೂಲಕ ಹಣ ಪಾವತಿಸಲಾಗುತ್ತಿದೆ.
ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಆಗಸ್ಟ್-2023 ಮಾಹೆಗೆ 20,44,691 ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳ 76,54,686 ಫಲಾನುಭವಿಗಳು ಇದಕ್ಕಾಗಿ ಅರ್ಹರಿದ್ದು, 124.92 ಕೋಟಿ ರೂ.ಗಳ ಪೈಕಿ 119.50 ಕೋಟಿ ರೂ. ಪಾವತಿಸಿದೆ. ಉಳಿದವರಿಗೆ ಪಾವತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ರಾಜ್ಯದಲ್ಲಿ ಈ ವರೆಗೆ 1.04 ಕೋಟಿ ಕುಟುಂಬಗಳ 3.70 ಕೋಟಿ ಸದಸ್ಯರಿಗೆ 606 ಕೋಟಿಗೂ ಹೆಚ್ಚು ರೂ. ಗಳನ್ನು ನೇರ ನಗದು ವ್ಯವಸ್ಥೆಯ ಮೂಲಕ ವರ್ಗಾವಣೆ ಮಾಡಲಾಗಿದೆ.
ಗೃಹ ಜ್ಯೋತಿ:
“ಉಚಿತ ಬೆಳಕು, ಸುಸ್ಥಿರ ಬದುಕು” ಘೋಷವಾಕ್ಯದ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ “ಗೃಹ ಜ್ಯೋತಿ”ಯೋಜನೆಯಡಿ ರಾಜ್ಯದಾದ್ಯಂತ 2.14 ಕೋಟಿ ವಿದ್ಯುತ್ ಗ್ರಾಹಕರು ಲಾಭ ಪಡೆಯಲಿದ್ದು, ಆಗಸ್ಟ್ 28ರ ವರೆಗೆ ಕಲ್ಯಾಣ ಕರ್ನಾಟಕ ಭಾಗದ ಜೆಸ್ಕಾಂ ವ್ಯಾಪ್ತಿಯಲ್ಲಿ 20,38,245 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 18,80,286 ಗ್ರಾಹಕರು ಯೋಜನೆಯ ಲಾಭ ಪಡೆದಿದ್ದಾರೆ.
ಒಟ್ಟು ರಾಜ್ಯದಲ್ಲಿ ಆಗಸ್ಟ್ ತಿಂಗಳಲ್ಲಿ 1.31 ಕೋಟಿ ಗ್ರಾಹಕರುಗಳು ಶೂನ್ಯ ವಿದ್ಯುತ್ ಬಿಲ್ ಸೌಲಭ್ಯವನ್ನು ಪಡೆದಿರುತ್ತಾರೆ. ಇದಕ್ಕಾಗಿ ಎಲ್ಲಾ ಎಸ್ಕಾಂಗಳಿಗೆ ಒಟ್ಟು 661 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ.
ಗೃಹ ಲಕ್ಷ್ಮಿ:
ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಕುಟುಂಬದ ಯಜಮಾನಿಗೆ ಮಾಸಿಕ 2,000 ರೂ. ಒದಗಿಸುವ “ಗೃಹ ಲಕ್ಷ್ಮಿ” ಯೋಜನೆಯಡಿ ರಾಜ್ಯದ 1.28 ಕೋಟಿ ಜನ ಮಹಿಳೆಯರು ಇದರ ಫಲಾನುಭವಿಗಳಾಗಲಿದ್ದಾರೆ. ವಾರ್ಷಿಕವಾಗಿ ಇದಕ್ಕೆ ಸರ್ಕಾರವು 30 ಸಾವಿರ ಕೋಟಿ ರೂ. ವೆಚ್ಚ ಮಾಡಲಿದೆ.
ಈ ಯೋಜನೆಯಡಿ ಕಲಬುರಗಿ ವಿಭಾಗದ 7 ಜಿಲ್ಲೆಗಳಲ್ಲಿ ಆಗಸ್ಟ್-2023ರ ಮಾಹೆಯ ಅಂತ್ಯದ ವರೆಗೆ ನೊಂದಾಯಿಸಿದ 20,89,653 ಫಲಾನುಭವಿಗಳ ಪೈಕಿ 19,44,015 ಮಹಿಳೆಯರಿಗೆ ತಲಾ 2,000 ರೂ. ಹಣ ಡಿ.ಬಿ.ಟಿ. ಮೂಲಕ ಪಾವತಿಸಿದೆ. ಇನ್ನುಳಿದವರಿಗೆ ಹಣ ಪಾವತಿ ಪ್ರಗತಿಯಲ್ಲಿದೆ. ರಾಜ್ಯದಲ್ಲಿ ಒಟ್ಟು ಈಗಾಗಲೇ 1.13 ಕೋಟಿ ಕುಟುಂಬಗಳ ಯಜಮಾನಿಯರು ನೋಂದಾಯಿಸಿಕೊಂಡಿದ್ದಾರೆ.
ಕುಟುಂಬಗಳ ಯಜಮಾನಿಯರಿಗೆ ಏಕಕಾಲದಲ್ಲಿ ತಲಾ 2000 ರೂಗಳಂತೆ ಈವರೆವಿಗೂ ಒಟ್ಟು ರೂ. 1,436 ಕೋಟಿಗಳನ್ನು ಜಮೆ ಮಾಡಲಾಗಿರುತ್ತದೆ. ಇದೊಂದೇ ಯೋಜನೆಗೆ ನಾವು 30 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ವಿನಿಯೋಗಿಸುತ್ತಿದ್ದೇವೆ.