ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ಕೆಲವು ದಿನಗಳ ಬಳಿಕ, ಅಂದರೆ ಇತ್ತೀಚೆಗಷ್ಟೇ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಿರ್ಮಾಪಕರೊಬ್ಬರು ನೀಡಿದ್ದ ಮುಂಗಡ ಹಣವನ್ನು ಹಿಂದಿರುಗಿಸಿದ್ದು ದೊಡ್ಡ ಸುದ್ದಿಯಾಗಿತ್ತು.
ಮಾತ್ರವಲ್ಲ, ‘ಇದು ದೊಡ್ಮನೆಯವರ ದೊಡ್ಡತನ’ ಎಂದು ಅಭಿಮಾನಿವೃಂದ ಅಶ್ವಿನಿ ಅವರ ಈ ಕೆಲಸವನ್ನು ಕೊಂಡಾಡಿತ್ತು.
ಪುನೀತ್ ಅವರ ಮುಂದಿನ ಚಿತ್ರಕ್ಕೆ ಮುಂಗಡವಾಗಿ ನೀಡಲಾಗಿದ್ದ ಹಣವನ್ನು ಹಿಂದಿರುಗಿಸಿದ್ದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದರೆ, ಮತ್ತೊಂದೆಡೆ ಆ ನಿರ್ಮಾಪಕ ಯಾರು ಎಂಬ ಕುತೂಹಲ ಹಲವರಲ್ಲಿ ಹುಟ್ಟಿತ್ತು. ಆದರೆ ಇದೀಗ ಆ ಕುತೂಹಲ ತಣಿಸುವಂಥ ವಿಷಯ ಬಹಿರಂಗಗೊಂಡಿದೆ.
ಪುನೀತ್ ಅವರು ತಾವು ಅಭಿನಯಿಸಲು ಮುಂಗಡ ಪಡೆದಿದ್ದ ಸಿನಿಮಾಗಳ ವಿವರವನ್ನು ಡೈರಿಯಲ್ಲಿ ಬರೆದಿಟ್ಟಿದ್ದರು. ಇತ್ತೀಚೆಗೆ ಆ ಡೈರಿಯನ್ನು ಓದಿದ ಅಶ್ವಿನಿಯವರಿಗೆ ಒಂದಷ್ಟು ಸಿನಿಮಾಗಳಿಗೆ ಮುಂಗಡ ಪಡೆದಿರುವುದು ತಿಳಿಯಿತು. ಆ ಪೈಕಿ ಒಂದು ಸಿನಿಮಾಗೆ ಅಪ್ಪು 2.5 ಕೋಟಿ ರೂಪಾಯಿ ಅಡ್ವಾನ್ಸ್ ಪಡೆದಿದ್ದರು. ವಿಷಯ ಗೊತ್ತಾದ ತಕ್ಷಣ ಸಂಬಂಧಪಟ್ಟ ನಿರ್ಮಾಪಕರಿಗೆ ಕರೆ ಮಾಡಿದ ಅಶ್ವಿನಿ, ಮುಂಗಡ ಹಣ ವಾಪಸ್ ಪಡೆದುಕೊಂಡು ಹೋಗಲು ಆಹ್ವಾನಿಸಿ, ಮರಳಿಸಿದ್ದರು.
ಹೀಗೆ ಪುನೀತ್ ಪತ್ನಿ ಕಡೆಯಿಂದ ಮುಂಗಡ ಹಣ ಹಿಂಪಡೆದ ನಿರ್ಮಾಪಕ ಬೇರಾರೂ ಅಲ್ಲ, ಉಮಾಪತಿ. ಇವರು ‘ಹೆಬ್ಬುಲಿ’, ‘ರಾಬರ್ಟ್’, ‘ಮದಗಜ’ ಮುಂತಾದ ಸಿನಿಮಾಗಳನ್ನು ನಿರ್ಮಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: