ಕುಮಾರವ್ಯಾಸ ಹದಿನೈದನೆಯ ಶತಮಾನದ ಉತ್ತರಾರ್ಧದಲ್ಲಿದ್ದು, ಜನಪ್ರಿಯ ಗದುಗಿನ ಭಾರತವನ್ನು ಬರೆದ ಕವಿ. ಈತ ಕನ್ನಡ ಸಾಹಿತ್ಯದ ಉನ್ನತೋನ್ನತ ಕವಿ. ಕುಮಾರವ್ಯಾಸ ಎಂಬ ಪದ ಈಗ ಇವನ ಹೆಸರು ಎಂಬಂತೆ ಬಳಕೆಯಲ್ಲಿದೆ. ದಿಟ್ಟದಲ್ಲಿ ಇದು ಕವಿಯ ಹೆಸರೂ ಅಲ್ಲ, ಕಾವ್ಯನಾಮವೂ ಅಲ್ಲ; ಪ್ರಾಯಶಃ ಮೊದಲಲ್ಲಿ ಬಿರುದಾಗಿ ಬಂದದ್ದು. ಕವಿ ತನ್ನನ್ನು ತಾನು ಕುಮಾರವ್ಯಾಸ ಎಂದು ಕರೆದುಕೊಂಡಿದ್ದರೆ ಅದನ್ನು ನಾವು ಕಾವ್ಯನಾಮ ಎನ್ನಬೇಕು; ಹಿರಿಯರು ಅಭಿಮಾನಿಗಳು ಅವನನ್ನು ಈ ಹೆಸರಿನಿಂದ ಹೊಗಳಿದರೆಂದು ತಿಳಿದೆವಾದರೆ ಅದು ಒಂದು ಬಿರುದು ಎನ್ನಬೇಕಾಗುತ್ತದೆ.
ಕುಮಾರವ್ಯಾಸ ಎಂದು ಹೆಸರಾಗಿರುವ ಈ ಕವಿಯ ವಾಡಿಕೆಯ ಹೆಸರು ಏನಾಗಿತ್ತು ಎಂದು ಖಂಡಿತವಾಗಿ ಹೇಳುವಂತಿಲ್ಲ. ನಾರಣಪ್ಪ ಎಂದಿತ್ತು ಎಂದು ಪ್ರತೀತಿ. ಕವಿ ಗದುಗಿನ ವೀರನಾರಾಯಣದೇವರ ಉಪಾಸಕ: ಆ ದೇವರನ್ನು ತನ್ನ ಕಾವ್ಯದಲ್ಲಿ ನಾರಾಯಣ, ನಾರಯಣ, ನಾರಣ ಎಂದು ಕರೆದಿದ್ದಾನೆ. ಇದರ ಆಧಾರದ ಮೇಲೋ ಇಲ್ಲ ಪೂರ್ವದಿಂದ ಹಾಗೆಂದು ಬಂದದ್ದರಿಂದಲೋ ಜನ ಎಂದೋ ಇವನ ಹೆಸರು ನಾರಣಪ್ಪ ಎಂದು ನಿರ್ಧರಿಸಿದರು. ಈಗ ನಾವು ಈ ಭಾರತ ಗದುಗಿನ ನಾರಣಪ್ಪ ಬರೆದದ್ದು ಎಂದು ಹೇಳುತ್ತೇವೆ. ಇದರಲ್ಲಿ ತಪ್ಪೇನೂ ಇಲ್ಲ; ಆದರೆ ಇದಕ್ಕೆ ಸರಿಯಾದ ಆಧಾರ ಇಲ್ಲ ಎನ್ನುವುದು ನೆನಪಿನಲ್ಲಿರಬೇಕು. ಸ್ಥಳೀಯ ಪ್ರತೀತಿಯಂತೆ ಕುಮಾರವ್ಯಾಸ ಗದುಗಿನ ಬಳಿಯ ಕೋಳಿವಾಡದ ಕರಣಿಕರ ವಂಶಸ್ಥ. ಕೋಳಿವಾಡದ ಈ ಮನೆತನದವರ ಇತಿಹಾಸದಿಂದ ಮಾಧವ ಎಂಬ ಹಿರಿಯರೊಬ್ಬರ ಮಗ ಲಕ್ಷ್ಮಣ ಎಂಬಾತ ವಿಜಯನಗರದ ಅರಸರಲ್ಲಿ ಮಂತ್ರಿಯಾಗಿದ್ದನೆಂದೂ ಅವನ ಐದು ಜನ ಗಂಡುಮಕ್ಕಳಲ್ಲಿ ಹಿರಿಯವ ವೀರನಾರಾಯಣ ಎಂದೂ ತಿಳಿಯುತ್ತದೆ. ವಿಜಯನಗರದ ಅರಸರಲ್ಲಿ ಲಕ್ಷ್ಮಣ ಎಂಬ ಹೆಸರ ಮಂತ್ರಿ ಒಬ್ಬ ಇದ್ದದ್ದು ಒಂದನೆಯ ದೇವಾರಾಯನಲ್ಲಿ. ಅರಸ ತೀರಿಕೊಂಡ ಮೇಲೆ ಮಂತ್ರಿ ತನ್ನ ಉಂಬಳಿಯ ಕೋಳಿವಾಡಕ್ಕೆ ಬಂದನಂತೆ.
ಕುಮಾರವ್ಯಾಸನ ಭಾರತ ಧರ್ಮರಾಜನ ಪಟ್ಟಾಭಿಷೇಕದಿಂದ ಮುಗಿಯುತ್ತದೆ. ಕೃಷ್ಣದೇವರಾಯನ ಆಸ್ಧಾನದ ತಿಮ್ಮಣ ಕವಿ ಇದರ ಕಥೆಯನ್ನು ಮುಂದುವರಿಸಿ ಇನ್ನೆಂಟು ಪರ್ವಗಳನ್ನು ರಚಿಸಿದ್ದಾನೆ. ಆ ಕಾವ್ಯದ ಪೀಠಿಕೆಯಲ್ಲಿ ಆತ ಮೊದಲು ಕುಮಾರವ್ಯಾಸನ ಕಾವ್ಯವನ್ನು ಪೂರ್ತಿ ಮಾಡು ಎಂದು ಅರಸ ಅಪ್ಪಣೆ ಮಾಡಿದ್ದಾಗಿ ಹೇಳಿದ್ದಾನೆ. ಕೃಷ್ಣದೇವರಾಯನ ಕಾಲ 1509-20. ಈ ಮಾತಿನ ಆಧಾರದ ಮೇಲೆ ರೈಸ್ ಮತ್ತು ಕಿಟ್ಟೆಲರು ಕುಮಾರವ್ಯಾಸ ಸುಮಾರು 1500ರ ಕಾಲಕ್ಕೆ ಜೀವಿಸಿದ್ದಿರಬಹುದೆಂದು ಊಹಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: