ಬೆಂಗಳೂರು, ಏ.8-ಪೆಟ್ರೋಲ್, ಡೀಸೆಲ್ , ಅಡುಗೆ ಅನಿಲ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆಯ ನಿರಂತರ ಏರಿಕೆ ವಿರೋಧಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ಜೆಡಿಎಸ್ ನಗರದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿತು.
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಕಾರ್ಯಾಧ್ಯಕ್ಷ ಎನ್.ಎಂ. ನಭಿ, ಶಾಸಕರಾದ ರಮೇಶ್ಗೌಡ, ರವೀಂದ್ರ ಶ್ರೀಕಂಠಯ್ಯ, ತಿಪ್ಪೇಸ್ವಾಮಿ, ನಿಸರ್ಗ ನಾರಾಯಣಸ್ವಾಮಿ, ಮಾಜಿ ಶಾಸಕರಾದ ಕೃಷ್ಣಪ್ಪ, ಎಂ.ಕೃಷ್ಣಪ್ಪ, ಟಿ.ಎ.ಶರವಣ ಸೇರಿದಂತೆ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಕಾರ್ಯಕರ್ತರು ಪಾಲ್ಗೊಂಡು ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ನಂತರ ತೈಲ ಬೆಲೆ ನಿರಂತರ ಏರಿಕೆಯಾಗುತ್ತಿದೆ. ಪ್ರತಿದಿನ ಮಾರುಕಟ್ಟೆಯ ಶೇರು ದರದ ಏರಿಕೆ ಮಾದರಿಯಲ್ಲಿ ಪೆಟ್ರೋಲï, ಡೀಸೆಲ್ ದರ ಏರಿಕೆಯಾಗಿ ಜನರಿಗೆ ಹೊರೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 112 ರೂ.ನಷ್ಟು ಆಗಿದೆ ಎಂದರು.
ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ಅನ್ನು ಉಚಿತವಾಗಿ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ, ಗ್ಯಾಸ್ ಸಿಲಿಂಡರ್ ಬೆಲೆ ಸಾವಿರ ರೂ. ಆಗಿದೆ. ನಿತ್ಯ ಕೂಲಿ ಮಾಡಿ ಜೀವನ ಮಾಡುವ, ಶ್ರಮಿಕರು, ಕಾರ್ಮಿಕರು, ರೈತರ ಕುಟುಂಬಗಳು ಇಷ್ಟು ಹಣ ಕೊಟ್ಟು ಖರೀದಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ದವಸ-ಧಾನ್ಯಗಳು, ಹಣ್ಣು-ಹಂಪಲುಗಳ ಬೆಲೆಯೂ ಏರಿಕೆ ಆಗುತ್ತಿದೆ. ರಾಜ್ಯ ಸರ್ಕಾರ 5 ಲಕ್ಷ ಕೋಟಿ ರೂ. ಸಾಲದ ಹೊರೆಯನ್ನು ನಾಡಿದ ಜನರ ಮೇಲೆ ಹೊರಿಸಿದೆ ಎಂದು ಆರೋಪಿಸಿದರು. ಸಿಮೆಂಟ್, ಕಬ್ಬಿಣದ ದರ ಹೆಚ್ಚಳವಾಗಿದ್ದು, ಬಡವರು ಹೇಗೆ ಮನೆ ಕಟ್ಟಲು ಸಾಧ್ಯ? ಈ ನಡುವೆ ವಿದ್ಯುತ್ ದರವನ್ನು ಸರ್ಕಾರ ಏರಿಕೆ ಮಾಡಿದ್ದು, ಹಾಲಿನ ದರ ಏರಿಕೆ ಮಾಡುವ ಚಿಂತನೆ ನಡೆಸುತ್ತಿದೆ ಎಂದು ಹೇಳಿದರು.
ಜನರ ಭಾವನೆ ಬೇರೆಡೆಗೆ ಸೆಳೆಯಲು ಧರ್ಮಗಳ ನಡುವೆ ಸಂಘರ್ಷದ ವಾತಾವರಣ ನಿರ್ಮಿಸಲಾಗಿದೆ. ಅಣ್ಣ-ತಮ್ಮಂದಿರ ರೀತಿ ಇದ್ದ ರಾಜ್ಯದಲ್ಲಿ ಬೆಂಕಿಯ ಅಲೆ ಸೃಷ್ಟಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ಹಿಜಾಬ್ ಪ್ರಾರಂಭಿಕ ಹಂತದಲ್ಲಿ ನಿಲ್ಲಿಸಬಹುದಿತ್ತು. ಆದರೆ, ಜಾಣ ಮೌನಕ್ಕೆ ತೆರಳಿತ್ತು. ಈಗ ಅಲ್ಖೈದಾ ಬೆಂಬಲ ವಿಚಾರ ತನಿಖೆಗೆ ಆದೇಶ ಮಾಡುತ್ತಾರೆ. ಹಿಜಾಬ್ ಸಮಸ್ಯೆಯನ್ನು ಆರಂಭದಲ್ಲಿ ನಿರ್ವಹಣೆ ಮಾಡಿದ್ದರೆ ಈ ರೀತಿ ಸಮಸ್ಯೆ ಆಗ್ತಿರಲಿಲ್ಲ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಬೆಲೆ ಏರಿಕೆ ಬಗ್ಗೆ ಏಕೆ ಮËನಕ್ಕೆ ಶರಣಾಗಿದ್ದಾರೆ ಪ್ರಶ್ನಿಸಿದ ಅವರು, ತಿನ್ನುವ ಆಹಾರದ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ತಿಳಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada