ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಗ್ಯುದ್ಧ ತಾರಕಕ್ಕೇರಿದೆ. ಲಕ್ಷ್ಮೀ ಹೆಬ್ಬಾಳ್ಕರ್ಗೆ ಟಕ್ಕರ್ ಕೊಡಲು ಸಾಹುಕಾರ್ ಸಜ್ಜಾಗಿದ್ರೆ ಅದು ಬೆಂಕಿ ಜೊತೆ ಸರಸವಾಡಿದಂತೆ ಎಂದು ಹೆಬ್ಬಾಳ್ಕರ್ ಸವಾಲಿಗೆ ಸವಾಲು ಹಾಕುತ್ತಿದ್ದಾರೆ.
ಕಾಂಗ್ರೆಸ್ ಕಾರ್ಯಕ್ರಮವನ್ನು ವಿರೋಧಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಶಿವಾಜಿ ಪ್ರತಿಮೆ ಅನಾವರಣ ರಾಜ್ಯ ಸರ್ಕಾರದ ವತಿಯಿಂದಲೇ ನಡೆಯಬೇಕು ಎಂದು ಪಟ್ಟು ಹಿಡಿದಿದ್ದಾರೆ. ಮಾರ್ಚ್ 5ರ ಕಾರ್ಯಕ್ರಮದ ವಿರುದ್ಧ ಪ್ರತಿಭಟಿಸುವುದು ಶತಸಿದ್ಧ ಎಂದು ಸಾಹುಕಾರ್ ಗುಡುಗಿದ್ದಾರೆ. ಪ್ರೋಟೋಕಾಲ್ ಪ್ರಕಾರವೇ ಶಿವಾಜಿ ಪ್ರತಿಮೆಯ ಲೋಕಾರ್ಪಣೆ ಕಾರ್ಯಕ್ರಮ ಮಾಡುತ್ತೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಪಟ್ಟು ಹಿಡಿದಿದ್ದಾರೆ.
ರಮೇಶ್ ಜಾರಕಿಹೊಳಿ ಅವರ ರಾಜಕೀಯದ ರಣತಂತ್ರಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಫೇಸ್ಬುಕ್ನಲ್ಲಿ ನ್ಯೂಸ್ ಫಸ್ಟ್ನಲ್ಲಿ ಪ್ರಸಾರವಾದ ವಿಡಿಯೋ ಶೇರ್ ಮಾಡಿರುವ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ. ರಾಜಹಂಸಗಡ್ ಕೋಟೆಯ ಅಭಿವೃದ್ಧಿ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯ ಸ್ಥಾಪನೆ ಸಮಸ್ತ ಭಾರತೀಯ ಇಚ್ಚೆಯಾಗಿದೆ. ಇದನ್ನು ವಿರೋಧಿಸಿದರೆ ಬೆಂಕಿಯ ಜತೆ ಸರಸವಾಡಿದಂತೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರು ಪ್ರಜ್ಞೆವುಳ್ಳವರಿದ್ದಾರೆ, ಈ ಭಾಗದ ಶಾಸಕರ ಹಕ್ಕುಚ್ಯುತಿ ಮಾಡುತ್ತಿರುವುದನ್ನು ಗಮನಿಸುತ್ತಿದ್ದಾರೆ. ಕಾಲಾಯ ತಸ್ಮೈ ನಮಃ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸವಾಲು ಹಾಕಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada