ಲಾಲ್ ಬಹಾದ್ದೂರರು ಮೊಘಲ್ಸಾರಾಯ್ನಲ್ಲಿ 1904ರ ಅಕ್ಟೋಬರ್ 2ರಂದು ಜನಿಸಿದರು. 1921ರಲ್ಲಿ ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ಓದನ್ನು ಅರ್ಧದಲ್ಲೇ ಬಿಟ್ಟರು. 1926ರಲ್ಲಿ ಇವರಿಗೆ ಶಾಸ್ತ್ರಿ ಎಂಬ ಬಿರುದು ಕಾಶಿ ವಿದ್ಯಾಪೀಠದಿಂದ ಸಂದಿತು. ಒಟ್ಟು 9 ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಕಾರಾಗೃಹವಾಸ ಅನುಭವಿಸಿದ ಶಾಸ್ತ್ರೀಜಿ ಸತ್ಯಾಗ್ರಹ ಚಳುವಳಿ ಪ್ರಾರಂಭವಾದ ನಂತರ 1946ರವರೆಗೂ ಜೈಲು ಶಿಕ್ಷೆ ಅನುಭವಿಸಿದರು.
ಸ್ವಾತಂತ್ರ್ಯಾನಂತರದಲ್ಲಿ ಗೋವಿಂದ ವಲ್ಲಭ ಪಂತ್ ಅವರ ಸರಕಾರದಲ್ಲಿ ಪೋಲಿಸ್ ಖಾತೆಯನ್ನು ವಹಿಸಿಕೊಂಡಿದ್ದ ಶಾಸ್ತ್ರೀಜಿ, 1951ರಲ್ಲಿ ಲೋಕಸಭೆಗೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು. ಜೊತೆಗೆ ರೈಲ್ವೆ ಖಾತೆಯನ್ನೂ ನಿರ್ವಹಿಸಿದರು. ಅರಿಯಳೂರು ಬಳಿ ಸಂಭವಿಸಿದ ರೈಲ್ವೆ ದುರಂತದ ಸಂದರ್ಭದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮುಂದೆ ಸಾರಿಗೆ ಮಂತ್ರಿಯಾಗಿ ಮತ್ತು 1961ರಲ್ಲಿ ಗೃಹ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು. 1964ರಲ್ಲಿ ಜವಾಹರ್ಲಾಲ್ ನೆಹರು ಅವರು ಸಾವನ್ನಪ್ಪಿದಾಗ ಕಾಂಗ್ರೆಸ್ನಲ್ಲಿ ಹಲವಾರು ಪ್ರತಿಸ್ಪರ್ಧಿಗಳು ಉದ್ಭವಗೊಂಡ ಹಿನ್ನಲೆಯಲ್ಲಿ ಅತ್ಯಂತ ಸರಳರೂ, ಅಧಿಕಾರದ ಬಗ್ಗೆ ಯಾವುದೇ ವ್ಯಾಮೋಹಗಳಿಲ್ಲದವರೂ ಆದ ಶಾಸ್ತ್ರಿಯವರು ಪ್ರಧಾನಿಯಾಗಿ ಮೂಡಿಬಂದರು.
ಶಾಸ್ತ್ರೀಜಿಯವರ ಆಡಳಿತ ಕಾಲದಲ್ಲಿ ಪಾಕಿಸ್ತಾನದೊಂದಿಗೆ ಯುದ್ಧಗಳು, ಭಾರತದಲ್ಲಿ ತಲೆದೋರಿದ್ದ ಬರಗಾಲ, ಕ್ಷಾಮ ಪರಿಸ್ಥಿತಿಗಳು ಮತ್ತು ಅದನ್ನು ಶಾಸ್ತ್ರೀಜಿಯವರು ಧೈರ್ಯದಿಂದ ಎದುರಿಸಿದ ಮಾತುಗಳನ್ನು ನಾವು ಸಾಕಷ್ಟು ಕೇಳಿದ್ದೇವೆ. ಇವುಗಳಲ್ಲಿ ಎದ್ದು ಕಾಣುವ ಗುಣವೆಂದರೆ ಅವರಲ್ಲಿದ್ದ ಪ್ರಾಮಾಣಿಕತೆ, ಸರಳತೆ ಮತ್ತು ಯಾವುದೇ ಪರಿಸ್ಥಿತಿಯಲ್ಲೂ ಧೃತಿಗೆಡದೆ ನಿಷ್ಠೆಯಿಂದ ಹಗಲಿರುಳೂ ದುಡಿಯುವ ಅಪ್ರತಿಮ ಗುಣ. ಪ್ರಾಮಾಣಿಕತೆ ಎಂಬ ವಿಚಾರ ಬಂದಾಗ ಭಾರತೀಯರಿಗೆ ಪ್ರಧಾನವಾಗಿ ಕಾಣುವ ವ್ಯಕ್ತಿ ಎಂದರೆ ಲಾಲ್ ಬಹದ್ದೂರ್ ಶಾಸ್ತ್ರಿಯವರು ಎಂದರೆ ತಪ್ಪಾಗಲಾರದು.
ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನ ಮಂತ್ರಿಗಳಾಗಿದ್ದ ಸಂಧರ್ಭದಲ್ಲಿ ಒಮ್ಮೆ ಒಂದು ರಾಜ್ಯಕ್ಕೆ ಭೇಟಿ ನೀಡುವ ಕಾರ್ಯಕ್ರಮವನ್ನು ರದ್ದು ಮಾಡಬೇಕಾದ ಅನಿವಾರ್ಯ ಉಂಟಾಯಿತು. ಆ ರಾಜ್ಯದ ಮುಖ್ಯಮಂತ್ರಿ ಶಾಸ್ತ್ರೀಜಿಯವರಿಗೆ ದೂರವಾಣಿ ಕರೆ ಮಾಡಿ, “ಶಾಸ್ತ್ರೀಜಿ ದಯವಿಟ್ಟು ಕಾರ್ಯಕ್ರಮವನ್ನು ರದ್ದು ಮಾಡಬೇಡಿ. I have made first class arrangements for your visit” ಎಂದು ದೈನ್ಯತೆ ಪ್ರದರ್ಶಿಸಿದರು. ಶಾಸ್ತ್ರೀಜಿ, ಅಷ್ಟೇ ನಯವಾಗಿ ಹೇಳಿದರು, “why did you do first class arrangements for a third class man”. ಶಾಸ್ತ್ರೀಜಿ ಅವರು ಉನ್ನತ ಸ್ಥಾನದಲ್ಲಿದ್ದರೂ ಆ ಸ್ಥಾನದ ಬಗ್ಗೆ ಒಂದಿಷ್ಟೂ ಅಹಂಕಾರ ವ್ಯಾಮೊಹಗಳನ್ನು ಹೊಂದಿರಲಿಲ್ಲ.
ಅಂದಿನ ದಿನಗಳಲ್ಲಿ ದೇಶದಲ್ಲಿ ಬರಗಾಲ ಬಂದೊದಗಿತು. ಆಗ ಹೊರದೇಶದಿಂದ ಆಹಾರವನ್ನು ಆಮದು ಮಾಡಿಕೊಳ್ಳಬೇಕಾಯಿತು. ಸಾಲಭಾರ ಅಧಿಕವಾಯಿತು. ಅದನ್ನರಿತ ಶಾಸ್ತ್ರೀಜಿ ವಾರದಲ್ಲಿ ಒಂದು ದಿನ ಊಟವನ್ನು ಬಿಟ್ಟರೆ ಎಷ್ಟು ಆಹಾರ ಸಂಗ್ರಹವಾಗುವುದೆಂದು ಲೆಕ್ಕಾಚಾರ ಹಾಕಿ ಸೋಮವಾರ ರಾತ್ರಿ ಊಟವನ್ನು ಬಿಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ತಾವೂ ಸಹ ಸೋಮವಾರದ ಊಟವನ್ನು ತ್ಯಜಿಸಿದರು. ಇನ್ನೂ ಸಹ ಶಾಸ್ತ್ರಿಯವರ ಸೋಮವಾರವು ಪ್ರಚಲಿತದಲ್ಲಿದೆ. ಈ ನಿರ್ಣಯವು ಅವರ ಸ್ವಾಭಿಮಾನ ಯಾತ್ರೆಗೆ ಮುಕುಟಪ್ರಾಯದಂತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: