ಬೀದರ್: ಸಂಗೀತ ಸಾಮ್ರಾಜ್ಞೆ ಲತಾ ಮಂಗೇಶ್ಕರ್ ಇಹಲೋಕ ತ್ಯಜಿಸಿದ ನಂತರ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ನೀಲಂಗಾ ತಾಲ್ಲೂಕಿನ ಷಹಜಾನಿ ಔರಾದ್ ಗ್ರಾಮದಲ್ಲಿ ಸಂಪೂರ್ಣ ಮೌನ ಆವರಿಸಿದೆ. ಬೀದರ್ ಜಿಲ್ಲೆಯ ಹುಲಸೂರು ತಾಲ್ಲೂಕು ಕೇಂದ್ರದಿಂದ 10 ಕಿ.ಮೀ ಅಂತರದಲ್ಲೇ ಈ ಗ್ರಾಮ ಇದೆ.ಷಹಜಾನಿ ಔರಾದ್ ಗ್ರಾಮದಲ್ಲಿ ಲತಾ ಮಂಗೇಶ್ಕರ್ ಅವರು ಕಾಲೇಜು ಕಟ್ಟಿಸಿ ಗಡಿಭಾಗದ ಜನರ ಮನದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ.ಔರಾದ್ ಷಹಜಾನಿ ಗ್ರಾಮದ ಮುಖಂಡರು 1970ರಲ್ಲಿ ಕಾಲೇಜನ್ನು ಸ್ಥಾಪಿಸಲು ಅನೇಕ ಸಭೆಗಳನ್ನು ನಡೆಸಿ ಹೊಸ ಕಾಲೇಜಿಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಸರು ಮಾಡಿದವರ ಹೆಸರು ಇಡಲು ತೀರ್ಮಾನಿಸಿದರು.ಗ್ರಾಮಸ್ಥರೆಲ್ಲ ಗಾಯಕ ಮತ್ತು ಸಂಗೀತಗಾರ ಮಾಸ್ಟರ್ ದೀನಾನಾಥ್ ಮಂಗೇಶ್ಕರ್ ಅವರ ಹೆಸರನ್ನೇ ಇಡಬೇಕು ಎಂದು ಒಕ್ಕೊರಲಿನಿಂದ ನಿರ್ಧರಿಸಿದರು. ನಂತರ ಗ್ರಾಮದ ಮುಖಂಡರ ನಿಯೋಗವೊಂದು ಕೊಲ್ಹಾಪುರದ ಪನ್ಹಾಲಾದಲ್ಲಿ ಇದ್ದ ಲತಾ ಮಂಗೇಶ್ಕರ್ ಅವರನ್ನು ಭೇಟಿ ಮಾಡಿದರು. ದೀನಾನಾಥ್ ಮಂಗೇಶ್ಕರ್ ಅವರ ಹೆಸರನ್ನು ಕಾಲೇಜಿಗೆ ಇಡಲು ಅವಕಾಶ ನೀಡಬೇಕು ಎಂದು ಎಲ್ಲರೂ ಮನವಿ ಮಾಡಿದರು. ತಮ್ಮ ತಂದೆಯ ಹೆಸರಿನಲ್ಲಿ ಕಾಲೇಜು ಸ್ಥಾಪನೆಯಾಗುತ್ತಿರುವ ಸುದ್ದಿ ಕೇಳಿ ಮಂಗೇಶ್ಕರ್ ಕುಟುಂಬದವರೂ ಖುಷಿಯಾದರು.1970ರಲ್ಲಿ ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆಯನ್ನೂ ನೆರವೇರಿಸಲಾಯಿತು. ಮಾಯಿ ಮಂಗೇಶ್ಕರ್ ಮತ್ತು ಗ.ದಿ.ಮದ್ಗುಲ್ಕರ್ ಮೊದಲಾದವರು ಪಾಲ್ಗೊಂಡಿದ್ದರು. 1976ರಲ್ಲಿ ನಡೆದ ಕಾಲೇಜು ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿ ಶಂಕರರಾವ್ ಚವ್ಹಾಣ, ಲತಾ ಮಂಗೇಶ್ಕರ್, ಶಾಸಕ ಶಿವರಾಜ್ ಪಾಟೀಲ ಚಾಕೂರಕರ್ ಭಾಗವಹಿಸಿದ್ದರು.ಇದೇ ವೇಳೆಯಲ್ಲಿ ಹಣಕಾಸಿನ ಕೊರತೆಯಿಂದಾಗಿ ಕಾಲೇಜು ಕಟ್ಟಡದ ಕಾಮಗಾರಿ ಅಪೂರ್ಣವಾಗಿರುವ ವಿಷಯ ತಿಳಿದ ಲತಾ ಮಂಗೇಶ್ಕರ್ ಅವರು ಔರಾದ್ ಷಹಜಾನಿಯಲ್ಲಿ ‘ಲತಾ ಮಂಗೇಶ್ಕರ್ ಸಂಗೀತ ಕಾರ್ಯಕ್ರಮ’ ಆಯೋಜಿಸಲು ತೀರ್ಮಾನಿಸಿದರು. ಫೆಬ್ರುವರಿ 1981 ರಲ್ಲಿ ಲತಾ ಮಂಗೇಶ್ಕರ್ ಅವರು ತಮ್ಮ ಒಡಹುಟ್ಟಿದವರೊಂದಿಗೆ ಗ್ರಾಮಕ್ಕೆ ಬಂದು ಕಾರ್ಯಕ್ರಮವನ್ನೂ ನೀಡಿದರು.ಕಾರ್ಯಕ್ರಮಕ್ಕೆ ಕಲಾಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ದೊರಕಿತು. ನಿರೀಕ್ಷೆಗೂ ಮೀರಿ ಜನರಿಂದ ದೇಣಿಗೆ ಸಂಗ್ರಹವಾಯಿತು. ಎಲ್ಲ ಹಣವನ್ನೂ ಕಾಲೇಜಿಗೆ ನೀಡಿದರು. ನಂತರ ಸುಸಜ್ಜಿತ ಕಟ್ಟಡ ನಿರ್ಮಾಣವಾಯಿತು.’ಲತಾ ಮಂಗೇಶ್ವರ ಅವರು ಶಿಕ್ಷಣ ಪ್ರೇಮಿಯೂ ಆಗಿದ್ದರು. ಸಾರಿಗೆ ಸಂಪರ್ಕದ ಸಮಸ್ಯೆ ಇದ್ದರೂ ಪ್ರಯಾಸಪಟ್ಟು ಖಾಸಗಿ ವಾಹನದಲ್ಲಿ ಬಂದು ಗ್ರಾಮದ ಜನರಿಗೆ ನೆರವಾದರು. ಅವರ ಸೇವಾಭಾವನ್ನು ಗ್ರಾಮದ ಜನತೆ ಇಂದಿಗೂ ಮರೆತಿಲ್ಲ’ ಎಂದು ಹಿರಿಯ ಪತ್ರಕರ್ತ ರವಿಕುಮಾರ ದೇಶಮುಖ ಹೇಳುತ್ತಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada