ಡಾ. ಮಂಗಳಾ ಪ್ರಿಯದರ್ಶಿನಿ ತಮ್ಮ ಹೆಸರಿನಷ್ಟೇ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಆಪ್ತರಾದವರು. ಲೇಖಕರಾಗಿ, ವಿಮರ್ಶಕರಾಗಿ, ಸ್ತ್ರೀಪರ ಚಿಂತಕರಾಗಿ, ಶಿಕ್ಷಣ ತಜ್ಞರಾಗಿ, ಉನ್ನತ ಶೈಕ್ಷಣಿಕ ಸಾಧಕರಾಗಿ, ಮಾರ್ಗದರ್ಶಕರಾಗಿ, ಹೀಗೆ ಅವರ ಸಾಧನೆಯ ಹಾದಿ ವೈವಿಧ್ಯಮುಖಿಯಾದದ್ದು.ಮಂಗಳಾ ಪ್ರಿಯದರ್ಶಿನಿ ಅವರು ಜನಿಸಿದ ದಿನ ಫೆಬ್ರವರಿ 28. ತಂದೆ ಹೆಸರಾಂತ ಶಿಕ್ಷಣತಜ್ಞರಾದ ಬಿ. ವಿ. ದಕ್ಷಿಣಾ ಮೂರ್ತಿ. ತಾಯಿ ಪ್ರಖ್ಯಾತ ಕಾದಂಬರಿಕಾರ್ತಿ ವಿಶಾಲಾಕ್ಷಿ ದಕ್ಷಿಣಾಮೂರ್ತಿ.ನಿರಂತರ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ಮಂಗಳಾ ಪ್ರಿಯದರ್ಶಿನಿ ಬಿ. ಎ. ಪದವಿಯನ್ನು ಎರಡು ಚಿನ್ನದ ಪದಕಗಳೊಂದಿಗೆ ಪ್ರಥಮ ರ್ಯಾಂಕ್ ಸಾಧನೆಯಲ್ಲಿ ಮತ್ತು ಕನ್ನಡ ಎಂ.ಎ ಪದವಿಯನ್ನು ಎಂಟು ಚಿನ್ನದ ಪದಕಗಳೊಂದಿಗೆ ಪ್ರಥಮ ರ್ಯಾಂಕ್ ಸಾಧನೆಯಲ್ಲಿ ಗಳಿಸಿದರು. ಡಾ. ಜಿ. ಎಸ್. ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ ‘ನವೋದಯ ಕಾವ್ಯದಲ್ಲಿ ಪ್ರತಿಮಾ ವಿಧಾನ – ಒಂದು ಅಧ್ಯಯನ’ ಪ್ರಬಂಧ ಮಂಡಿಸಿ ಎಂ.ಫಿಲ್. ಮತ್ತು ‘ನವೋದಯ ಕಾವ್ಯದಲ್ಲಿ ಅನುಭಾವದ ಅಂಶಗಳು – ಒಂದು ಅಧ್ಯಯನ’ ಪ್ರಬಂಧ ಮಂಡಿಸಿ ಪಿಎಚ್.ಡಿ ಪದವಿಗಳನ್ನು ಗಳಿಸಿದರು.ನಿರಂತರ ಜ್ಞಾನಾಕಾಂಕ್ಷಿಗಳಾದ ಮಂಗಳಾ ಪ್ರಿಯದರ್ಶಿನಿ ಅವರು ಯುಜಿಸಿ ನೆರವಿನೊಂದಿಗೆ ‘ಮಹಿಳಾ ಅಧ್ಯಯನ – ಸಮಕಾಲೀನ ಸ್ವರೂಪ, ಸಮಸ್ಯೆಗಳ ವಿಶ್ಲೇಷಣೆ ಸಾಹಿತ್ಯ ಪರಂಪರೆಯ ಹಿನ್ನಲೆಯಲ್ಲಿ’ ಮತ್ತು ‘ಮಹಿಳಾ ಸಮಸ್ಯೆಗಳು ಮತ್ತು ಮಹಿಳಾ ಚಳುವಳಿಗಳು‘ ಎಂಬ ಸಂಶೋಧನೆಗಳನ್ನೂ ಕೈಗೊಂಡು ಯಶಸ್ವಿಯಾಗಿ ನಿರ್ವಹಿಸಿದರು.ಡಾ. ಮಂಗಳಾ ಪ್ರಿಯದರ್ಶಿನಿ ಅವರು ಪದವಿ ಮಟ್ಟದಲ್ಲಿ 38 ವರ್ಷಗಳ ಬೋಧನಾನುಭವ ಮತ್ತು ಕನ್ನಡ ಸ್ನಾತಕೋತ್ತರ ಮಟ್ಟದಲ್ಲಿ 15 ವರ್ಷಗಳ ಬೋಧನಾನುಭವ ಉಳ್ಳವರಾಗಿದ್ದು ಬೆಂಗಳೂರು ಬಸವೆಶ್ವರ ನಗರದ ಯು ಜಿ ಸಿ ಗ್ರೇಡ್ ಒನ್ ( ನಿ ), ವಿ ವಿ ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದವರು. ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಸಂದರ್ಶನ ಪ್ರಾಧ್ಯಾಪಕಿಯಾಗಿಯೂ ಅವರ ಸೇವೆ ಸಂದಿದೆ. ಬೆಂಗಳೂರು ವಿಶ್ವವಿದ್ಯಾಲಯ , ಹಂಪಿ ವಿಶ್ವವಿದ್ಯಾಲಯ ಹಾಗೂ ಕುಪ್ಪಂ ದ್ರಾವಿಡ ವಿಶ್ವವಿದ್ಯಾಲಯಗಳ ಅನೇಕ ಅಭ್ಯರ್ಥಿಗಳಿಗೆ ಪಿಎಚ್.ಡಿ ಮತ್ತು ಎಂ.ಫಿಲ್ ಅಧ್ಯಯನಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಐಎಎಸ್, ಕೆಎಎಸ್ ಪರೀಕ್ಷಾರ್ಥಿಗಳಿಗೂ ಅವರ ಮಾರ್ಗದರ್ಶನ ಸಂದಿದೆ.ಮಂಗಳಾ ಪ್ರಿಯದರ್ಶಿನಿ ಅವರ ಕೃತಿಗಳು ವಿದ್ವತ್ಪೂರ್ಣ ವೈವಿಧ್ಯಗಳಿಂದ ಕೂಡಿವೆ. ನವೋದಯ ಕಾವ್ಯದಲ್ಲಿ ಪ್ರತಿಮಾ ವಿಧಾನ – ಒಂದು ಅಧ್ಯಯನ (ಎಂ.ಫಿಲ್ ಸಂಶೋಧನಾ ಪ್ರಬಂಧ ಕೃತಿ); ನವೋದಯ ಕಾವ್ಯದಲ್ಲಿ ಅನುಭಾವದ ಅಂಶಗಳು (ಪಿಎಚ್.ಡಿ ಸಂಶೋಧನಾ ಪ್ರಬಂಧ ಕೃತಿ); ಬೇಂದ್ರೆ, ವೀರಶೈವ ಷಟ್ಪದಿ ಸಾಹಿತ್ಯ, ಆಧುನಿಕ ಕನ್ನಡ ಕಾವ್ಯದ ಸ್ವರೂಪ, ಮೋಳಿಗೆ ಮಹಾದೇವಿ, ಮಹಿಳಾ ಸಾಹಿತ್ಯ ಚರಿತ್ರೆ; ಸ್ತ್ರೀವಾದ , ಮಹಿಳಾ ಅಧ್ಯಯನ , ಒಂದು ಪ್ರವೇಶಿಕೆ; ಬೆಳೆಗೆರೆ ಪಾರ್ವತಮ್ಮ, ವಚನಕಾರ್ತಿಯರ ಅನುಭಾವ, ಬೈದವ್ವ ಕೇಳಾ ನನ ಮಾತಾ, ಸ್ತ್ರೀವಾದೀ ಚಿಂತನೆಗಳ ಹಿನ್ನೆಲೆಯಲ್ಲಿ; ಗಾನ ಗಂಗೆ ಪಂಚಾಕ್ಷರಿ ಗವಾಯಿಗಳು; ಪ್ರಮಾಣ – ಕನ್ನಡ ಲೇಖಕ ಹಾಗೂ ಸಾಹಿತ್ಯ ಸಂಸ್ಕೃತಿಯನ್ನು ಕುರಿತಾದ ಚಿಂತನೆಗಳು; ಕಗ್ಗತ್ತಲ ಖಂಡದೊಳಗೊಂದು ಬೆಳಕಿನ ಇಣುಕು – ತಾಂಜಾನಿಯಾ ದೇಶದ ಪ್ರವಾಸದ ಅನುಭವ ಕಥನ; ಭಾರತೀಯ ಕಾವ್ಯ ಮೀಮಾಂಸೆ ಹಾಗೂ ಪಾಶ್ಚಾತ್ಯ ವಿಮರ್ಶೆ; ಐ ಎ ಎಸ್ ಸಾಹಿತ್ಯ ದರ್ಶಿನಿ; ನವೋದಯ ಸಾಹಿತ್ಯ ಹಾಗೂ ಅನುಭಾವ ಮುಂತಾದ ಕೃತಿಗಳು ಪ್ರಸಿದ್ಧ ಸಂಸ್ಥೆಗಳಿಂದ ಪ್ರಕಟಗೊಂಡು ಅನೇಕ ಮರುಮುದ್ರಣಗಳೊಂದಿಗೆ ಜನಪ್ರಿಯಗೊಂಡಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: