ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ವೇ (NH 275)ಯಲ್ಲಿ ಮಂಗಳವಾರ (ಫೆ.28) ಬೆಳಗ್ಗೆ 8 ಗಂಟೆಯಿಂದ ಟೋಲ್ ಸಂಗ್ರಹ ಪ್ರಾರಂಭವಾಗಲಿದೆ. ವಾಹನಗಳ ಮಾದರಿಯನ್ನು ಅವಲಂಭಿಸಿ ರೂ.135 ರಿಂದ ರೂ.880 ಶುಲ್ಕವನ್ನು ನಿಗದಿಪಡಿಸಲಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ರಾಮನಗರ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಸಭೆಯಲ್ಲಿಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
117 ಕಿಲೋಮೀಟರ್ ಉದ್ದದ ಹೆದ್ದಾರಿ ಇದಾಗಿದ್ದು, ಒಂದನೇ ಹಂತದ (56 ಕಿ.ಮೀ) ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಕೊಂಡಿದ್ದು, ಅಲ್ಲಿಗೆ ಮಾತ್ರ ಟೋಲ್ ಶುಲ್ಕವನ್ನು ವಿಧಿಸಲಾಗುತ್ತಿದೆ. ಬೆಂಗಳೂರು – ನಿಡಘಟ್ಟ ನಡುವಿನ ಶೇಷಗಿರಿಹಳ್ಳಿ ಸಮೀಪ ಮೊದಲ ಟೋಲ್ ಅಧಿಕೃತವಾಗಿ ನಾಳೆಯಿಂದ ಕಾರ್ಯಾರಂಭ ಮಾಡಲಿದೆ. ಎರಡನೇ ಟೋಲ್ ಸಂಗ್ರಹ ಕೇಂದ್ರ ಮಂಡ್ಯ ಬಳಿಯಿದ್ದು, ಅದರ ಕಾರ್ಯಾಚರಣೆ ಇನ್ನೂ ಶುರುವಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ, ಮಾರ್ಚ್ 11ರಂದು ಈ ಎಕ್ಸ್ಪ್ರೆಸ್ವೇ ಲೋಕಾರ್ಪಣೆ ಮಾಡಲಿದ್ದಾರೆ.
ಇದು ದಶಪಥ ಹೆದ್ದಾರಿಯಾಗಿದ್ದು, ಆರು ಪಥದ ಎಕ್ಸ್ಪ್ರೆಸ್ವೇಯಲ್ಲಿ ಸಂಚರಿಸುವವರೂ ಮಾತ್ರ ಶುಲ್ಕ ಪಾವತಿಸಬೇಕು. ಉಳಿದಂತೆ ಎರಡು ಬದಿಯಲ್ಲಿ ತಲಾ 2 ಲೇನ್ಗಳಿರುವ ಸರ್ವಿಸ್ ರಸ್ತೆ ಓಡಾಟ ನಡೆಸುವವರೂ ಯಾವುದೇ ಮೊತ್ತ ಕಟ್ಟುವ ಅಗತ್ಯವಿಲ್ಲ. ಕಾರು, ಜೀಪ್ ಹಾಗೂ ವ್ಯಾನ್ಗೆ ಒಂದು ಬಾರಿ ಸಂಚರಿಸಲು ರೂ.135 ಪಾವತಿಸಬೇಕು. ಅಂದೇ ಹಿಂದಿರುಗುವುದಾದರೆ ರೂ.205 ಶುಲ್ಕ ಕಟ್ಟಬೇಕು. ಮಾಸಿಕ ಪಾಸ್ಗೆ ರೂ.4,525, ಸ್ಥಳೀಯ ವಾಹನಗಳಿಗೆ ರೂ.70 ಟೋಲ್ ಶುಲ್ಕ ನಿಗದಿಪಡಿಸಲಾಗಿದೆ.
ಲೈಟ್ ಕಮರ್ಷಿಯಲ್ ವೆಹಿಕಲ್ (LCV), ಲೈಟ್ ಗೋಡ್ಸ್ ವೆಹಿಕಲ್ (LGV) ಮಿನಿ ಬಸ್ಗೆ ಒಂದು ಬಾರಿ ಸಂಚರಿಸಲು ರೂ.220, ಅಂದೇ ಹಿಂದಿರುಗುವುದಾದರೆ ರೂ.330 ತಿಂಗಳ ಪಾಸ್ಗೆ ರೂ.7,315 ಇದೆ. ಟ್ರಕ್, ಬಸ್ (2-ಆಕ್ಸಲ್) ಏಕಮುಖ ಸಂಚಾರಕ್ಕೆ ರೂ.460, ಅದೇ ದಿನ ಮರು ಸಂಚಾರಕ್ಕೆ ರೂ.690, ಮಾಸಿಕ ಪಾಸ್ ರೂ.15,325, 3-ಆಕ್ಸಲ್ ಕಮರ್ಷಿಯಲ್ ವೆಹಿಕಲ್ ಒಂದು ಬಾರಿ ಸಂಚರಿಸಲು ರೂ.500, ಅಂದೇ ಹಿಂದಿರುಗುವುದಾದರೆ ರೂ.750, ತಿಂಗಳ ಪಾಸ್ ರೂ.16,715 ಶುಲ್ಕವಿದೆ.
ಭಾರಿ ನಿರ್ಮಾಣ ಯಂತ್ರ (Heavy construction machinery) ಭೂ ಅಗೆತ ಸಾಧನ (earth moving equipment) 4-6 ಆಕ್ಸಲ್ ವಾಹನಗಳು ಏಕಮುಖ ಸಂಚಾರಕ್ಕೆ ರೂ.720, ಅದೇ ದಿನ ಮರು ಸಂಚಾರಕ್ಕೆ ರೂ.1,080, ಮಾಸಿಕ ಪಾಸ್ ರೂ.24,030 ಶುಲ್ಕವಿದೆ. ಭಾರೀ ವಾಹನ (Oversized vehicle) 7ಕ್ಕಿಂತ ಹೆಚ್ಚಿನ ಆಕ್ಸಲ್ ಹೊಂದಿದ್ದರೆ ಒಂದು ಬಾರಿ ಸಂಚರಿಸಲು ರೂ.880, ಅಂದೇ ಹಿಂದಿರುಗುವುದಾದರೆ ರೂ.1,315 ತಿಂಗಳ ಪಾಸ್ಗೆ 29,255 ಪಾವತಿಬೇಕು.
ಈ ಎಕ್ಸ್ಪ್ರೆಸ್ವೇ ದಶಪಥದ ರಸ್ತೆಯನ್ನು ಹೊಂದಿದ್ದು, 9 ದೊಡ್ಡ ಸೇತುವೆ, 44 ಕಿರು ಸೇತುವೆ, 4 ರೈಲ್ವೆ ಮೇಲ್ಸೇತುವೆ, 28 ಅಂಡರ್ಪಾಸ್, 13 ಪಾದಚಾರಿ ಅಂಡರ್ ಪಾಸ್ಗಳು ಬರಲಿವೆ. ಒಟ್ಟು ಎರಡು ಹಂತದಲ್ಲಿ ಕಾಮಗಾರಿ ನಡೆಸಲಾಗಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಭಾರತಮಾಲಾ ಉಪ ಯೋಜನೆ ಹಂತ-1ರ ಅಡಿಯಲ್ಲಿ ಈ ಹೆದ್ದಾರಿಯನ್ನು ನಿರ್ಮಾಣ ಮಾಡಿದೆ. ಒಟ್ಟು ರೂ.8172 ಕೋಟಿಯನ್ನು ಖರ್ಚು ಮಾಡಲಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರು ನಡುವೆ ಈ ಎಕ್ಸ್ಪ್ರೆಸ್ವೇ ನಿರ್ಮಾಣದಿಂದ ಆಗುವ ಪ್ರಮುಖ ಅನುಕೂಲವೆಂದರೆ, ಪ್ರಯಾಣದ ಅವಧಿಯು ತುಂಬಾ ಕಡಿಮೆಯಾಗಲಿದೆ. ಈ ಮೊದಲು ಬೆಂಗಳೂರಿನಿಂದ ಮೈಸೂರು ತಲುಪಲು 150 ನಿಮಿಷ ಬೇಕಿತ್ತು. ಅದು ಕೇವಲ 90 ನಿಮಿಷಕ್ಕೆ ಇಳಿಯಲಿದ್ದು, ಇದರಿಂದ ಕೈಗಾರಿಕೆ ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳು ಅಭಿವೃದ್ಧಿಯಾಗಲಿದ್ದು, ಸಾಕಷ್ಟು ಉದ್ಯೋಗ ಸೃಷ್ಟಿಯಾಗಲಿದೆ.
ಇನ್ನು, ಈ ಎಕ್ಸ್ಪ್ರೆಸ್ವೇ ಬಗ್ಗೆ ಕೆಲವೇ ದಿನಗಳ ಹಿಂದೆ, ಪ್ರಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ, ತಮ್ಮ ಟ್ವಿಟರ್ ಖಾತೆಯಲ್ಲಿ ವಂದೇ ಭಾರತ್ ರೈಲು, ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ವೇ ಸೇತುವೆ ಕೆಳಗೆ ಹಾದುಹೋಗುವ ಡ್ರೋನ್ ದೃಶ್ಯಗಳನ್ನು ಹಂಚಿಕೊಂಡಿದ್ದರು. ವಿಶ್ವದರ್ಜೆಯ ಗುಣಮಟ್ಟದ ಮೂಲಸೌಕರ್ಯದ ಅಭಿವೃದ್ಧಿಯು ಭಾರತವನ್ನು ಹೇಗೆ ಪರಿವರ್ತಿಸುತ್ತಿದೆ ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ ಎಂದು ಬರೆದುಕೊಂಡಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada