ವಾರಣಾಸಿ, ಮೇ 13: ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯ ಒಳಗೆ ಸರ್ವೇಕ್ಷಣೆ ನಡೆಸಲು ಆದೇಶಿಸಿದ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರಿಗೆ ಈಗ ಜೀವಭಯ ಕಾಡುತ್ತಿದೆಯಂತೆ. ಪ್ರಕರಣದಲ್ಲಿ ಅವರು ನೀಡಿದ ಆದೇಶದಲ್ಲೇ ಈ ಆತಂಕ ವ್ಯಕ್ತಪಡಿಸಿದ್ದಾರೆ.
ಭಯದ ವಾತಾವರಣ ನಿರ್ಮಿತವಾಗುತ್ತಿದ್ದು, ತಮ್ಮ ಕುಟುಂಬದ ಸುರಕ್ಷತೆ ಬಗ್ಗೆ ಆತಂಕವಾಗುತ್ತಿದೆ ಎಂದು ಅವರು ನಿನ್ನೆ ಗುರುವಾರ ಹೇಳಿದ್ದರು.
ಹಿಂದಿನ ಆದೇಶದಲ್ಲಿ ಮಸೀದಿಯ ಸರ್ವೇಕ್ಷಣೆ ನಡೆಸಲು ಕೋರ್ಟ್ ಕಮಿಷನರ್ ಆಗಿ ಅಜಯ್ ಮಿಶ್ರಾರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಹಿಂದೂ ಅರ್ಜಿದಾರರ ವಲಯದಲ್ಲಿ ಗುರುತಿಸಿಕೊಂಡಿರುವ ಅಜಯ್ ಮಿಶ್ರಾ ಕೋರ್ಟ್ ಕಮಿಷನರ್ ಆಗಲು ಮಸೀದಿ ಪರ ಇರುವವರ ವಿರೋಧ ಇತ್ತು. ಮಿಶ್ರಾ ನೇತೃತ್ವದ ತಂಡ ಕಳೆದ ವಾರ ಸರ್ವೇಕ್ಷಣೆ ನಡೆಸಲು ಬಂದಾಗ ಮಸೀದಿಯೊಳಗೆ ಪ್ರವೇಶ ನೀಡಿರಲಿಲ್ಲ. ಈಗ ವಾರಣಾಸಿ ಕೋರ್ಟ್ ಮಸೀದಿಯೊಳಗೆ ಸರ್ವೇಕ್ಷಣೆ ನಡೆಸಲು ಮತ್ತೆ ಆದೇಶ ನೀಡಿರುವುದರ ಜೊತೆಗೆ ಕೋರ್ಟ್ ಕಮಿಷನರ್ ಆಗಿ ಅಜಯ್ ಮಿಶ್ರಾರನ್ನೇ ಮುಂದುವರಿಸಿರುವುದು ಮುಸ್ಲಿಮ್ ಗುಂಪುಗಳ ಕಣ್ಣು ಕೆಂಪಗಾಗಿಸಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ನ್ಯಾ| ರವಿಕುಮಾರ್ ದಿವಾಕರ್ ತಮ್ಮ ಕುಟುಂಬದ ಸುರಕ್ಷತೆ ಬಗ್ಗೆ ಚಿಂತೆಗೀಡಾಗಿದ್ದಾರೆ.
“ಈ ನಾಗರಿಕ ಪ್ರಕರಣವನ್ನು ದೊಡ್ಡ ವಿಷಯವಾಗಿ ಮಾಡಿ ಭಯದ ವಾತಾವರಣ ನಿರ್ಮಿಸಲಾಗುತ್ತಿದೆ. ನನ್ನ ಸುರಕ್ಷತೆ ಬಗ್ಗೆ ಕುಟುಂಬದವರಿಗೆ ಚಿಂತೆ ಶುರುವಾಗಿದೆ. ಅವರ ಸುರಕ್ಷತೆ ಬಗ್ಗೆ ನನಗೆ ಆತಂಕವಾಗಿದೆ. ನಾನು ಮನೆಯಿಂದ ಹೊರಗೆ ಹೋದಾಗೆಲ್ಲಾ ಹೆಂಡತಿ ಭಯ ಪಡುವಂಥ ಸ್ಥಿತಿ ಇದೆ” ಎಂದು ನ್ಯಾಯಾಧೀಶರು ಹೇಳಿದ್ದಾರೆ.
“ನನ್ನ ತಾಯಿ ನನ್ನ ಜೊತೆ ಮಾತನಾಡುವಾಗಲೂ ಭಯ ಪಟ್ಟಿದ್ದು ಗೊತ್ತಾಯಿತು. ಸರ್ವೇಕ್ಷಣೆಗೆ ನಾನೂ ಹೋಗಬಹುದು ಎಂದು ಭಾವಿಸಿ ಅವರು ಆತಂಕಕ್ಕೊಳಗಾಗಿದ್ದರು. ನಾನು ಅಲ್ಲಿಗೆ ಹೋದರೆ ಪ್ರಾಣಾಪಾಯ ಆಗಬಹುದು, ಹೋಗಬೇಡ ಅಂತ ಅಮ್ಮ ಹೇಳಿದರು” ಎಂದು ನ್ಯಾ| ರವಿಕುಮಾರ್ ದಿವಾಕರ್ ತಿಳಿಸಿದ್ದಾರೆ.
ನಿನ್ನೆ ಗುರುವಾರ ನೀಡಿದ ತೀರ್ಪಿನಲ್ಲಿ ವಾರಣಾಸಿಯ ನ್ಯಾಯಾಲಯವು, ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ಸಂಕೀರ್ಣದಲ್ಲಿ ಮೇ 17ರೊಳಗೆ ಸರ್ವೇಕ್ಷಣೆ ನಡೆಸಬೇಕು ಎಂದು ತಿಳಿಸಿದೆ.
ಜ್ಞಾನವಾಪಿ ಮಸೀದಿಯಲ್ಲಿ ಶೃಂಗಾರ್ ಗೌರಿ ಮತ್ತಿತತರ ಹಿಂದೂ ದೇವರುಗಳ ವಿಗ್ರಹಗಳಿವೆ. ಮಸೀದಿ ಸ್ಥಳದಲ್ಲಿ ಹಿಂದೆ ಹಿಂದೂ ಮಂದಿರ ಇತ್ತು ಎಂಬುದು ಕೆಲ ಹಿಂದೂಗಳ ವಾದ. ಮಸೀದಿಯೊಳಗೆ ವಿಡಿಯೋ ಶೂಟ್ ಮಾಡಿಸಿದರೆ ಸಾಕ್ಷ್ಯಾಧಾರ ಸಿಗಬಹುದು ಎಂದು ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಮಸೀದಿಯೊಳಗೆ ಸರ್ವೇಕ್ಷಣೆಗೆ ಆದೇಶ ನೀಡಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada