ಅಪ್ರಾಪ್ತ ವಯಸ್ಸಿನ ಮಗಳನ್ನು ಕೊಂದು ಜೈಲಿನಲ್ಲಿರುವ 36 ವರ್ಷದ ವ್ಯಕ್ತಿಯೊಬ್ಬ ಪೆರೋಲ್ ಮೇಲೆ ಆಚೆ ಬಂದ ಬಳಿಕ ಮತ್ತೆ ಜೈಲಿಗೆ ಹೋಗುವುದನ್ನು ತಪ್ಪಿಸಲೆಂದು ಗಾರೆ ಕೆಲಸದಾತರೊಬ್ಬರನ್ನು ಕೊಂದು, ತನ್ನದೇ ಮುಖವನ್ನು ಸುಟ್ಟುಕೊಂಡಿದ್ದಾನೆ.
ದೆಹಲಿಯ ಕಾರಾವಾಲ್ ನಗರದ ಈ ವ್ಯಕ್ತಿಯನ್ನು ಗಾರೆ ಕೆಲಸದಾತನನ್ನು ಕೊಂದ ಆಪಾದನೆ ಮೇಲೆ ಬಂಧಿಸಲಾಗಿದೆ.
ಈ ಕೃತ್ಯದಲ್ಲಿ ಭಾಗಿಯಾದ ಆಪಾದನೆ ಮೇಲೆ ಆತನ ಪತ್ನಿಯನ್ನೂ ಸಹ ಬಂಧಿಸಲಾಗಿದೆ.
ಆಪಾದಿತ ದಂಪತಿಯನ್ನು ಸುಧೇಶ್ ಕುಮಾರ್ ಹಾಗೂ ಆತನ ಪತ್ನಿ ಅನುಪಮಾ ಎಂದು ಗುರುತಿಸಲಾಗಿದೆ. ಮಾರ್ಚ್ 2018ರಲ್ಲಿ ತನ್ನ ಮಗಳನ್ನೇ ಕೊಂದ ಆರೋಪದ ಮೇಲೆ ಕುಮಾರ್ ಜೈಲಿನಲ್ಲಿದ್ದ. ಕೋವಿಡ್ ಸಾಂಕ್ರಮಿಕದ ಕಾರಣ ಆತನನ್ನು ನಿಯಮವೊಂದರ ಅಡಿ ಪೆರೋಲ್ ಮೇಲೆ ಬಿಟ್ಟು ಕಳುಹಿಸಲಾಗಿತ್ತು.
ಪೊಲೀಸರ ಪ್ರಕಾರ, ಮಗಳನ್ನು ಕೊಂದು ಅಜ್ಞಾತ ಸ್ಥಳವೊಂದರಲ್ಲಿ ಆಕೆಯ ದೇಹ ಎಸೆದಿದ್ದ ಕುಮಾರ್, ಆಕೆಯನ್ನು ಅಪಹರಿಸಲಾಗಿದೆ ಎಂದು ಪೊಲೀಸರ ಬಳಿಯೇ ದೂರು ಕೊಟ್ಟಿದ್ದ. ಆದರೆ ಆತನ ದೂರಿನಲ್ಲಿ ಸಾಕಷ್ಟು ಅನುಮಾನಗಳು ಕಂಡು ಬಂದ ಬಳಿಕ ಪೊಲೀಸರು ಕುಮಾರನನ್ನೇ ಬಂಧಿಸಿ ಜೈಲಿಗಟ್ಟಿದ್ದರು.