ಬೆಂಗಳೂರು: ‘ವಿಕ್ರಾಂತ್ ರೋಣ’, ‘ತ್ರಿಬಲ್ ರೈಡಿಂಗ್’, ‘ದಿಲ್ ಪಸಂದ್’, ‘ವೇದ’ ಸೇರಿದಂತೆ ಕೆಲವು ಕನ್ನಡ ಚಿತ್ರಗಳಲ್ಲಿ ಹಾಡಿರುವ ತೆಲುಗು ಗಾಯಕಿ ಮಂಗ್ಲಿ, ಇದೀಗ ನಾಯಕಿಯಾಗಿ ಸ್ಯಾಂಡಲ್ವುಡ್ ಡೆಬ್ಯೂ ಮಾಡಲಿದ್ದಾರೆ. ಚಕ್ರವರ್ತಿ ಚಂದ್ರಚೂಡ್ ನಿರ್ದೇಶಿಸಲಿರುವ, ನಾಗಶೇಖರ್ ನಾಯಕನಾಗಿರುವ ಪ್ಯಾನ್ ಇಂಡಿಯಾ ‘ಪಾದರಾಯ’ ಚಿತ್ರದ ಮೂಲಕ ಮಂಗ್ಲಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ.ಈ ಹಿಂದೆ ಕೆಲವು ತೆಲುಗು ಚಿತ್ರಗಳಲ್ಲಿ ನಟಿಸಿದ್ದರೂ, ಪೂರ್ಣಪ್ರಮಾಣದ ನಾಯಕಿಯಾಗಿ ಅವರಿಗೆ ‘ಪಾದರಾಯ’ ಮೊದಲ ಸಿನಿಮಾ.’ನಾಯಕ ನಾಗಶೇಖರ್ ಸದ್ಯ ಪಾತ್ರಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹನುಮ ಮಾಲೆ ಧರಿಸಿ ಕಟ್ಟುನಿಟ್ಟಿನ ವ್ರತ ಆಚರಿಸುತ್ತಿದ್ದಾರೆ. ಬೆಳಗ್ಗೆ ಎದ್ದು ಅಂಜನಾದ್ರಿ ಬೆಟ್ಟ ಹತ್ತುತ್ತಾರೆ. ಸಂಜೆಯವರೆಗೂ ದೇವಸ್ಥಾನದಲ್ಲಿ, ಅದರ ಸುತ್ತಮುತ್ತ ಓಡಾಡಿಕೊಂಡಿದ್ದು, ಪೂಜೆಯಲ್ಲಿ ಪಾಲ್ಗೊಂಡು, ಅಲ್ಲಿನ ವಾತಾವರಣ, ಭಕ್ತರು, ಅವರ ಭಕ್ತಿ ಎಲ್ಲವನ್ನೂ ಸೂಕ್ಷ್ಮದಿಂದ ನೋಡುತ್ತಾ ಸಂಜೆವರೆಗೂ ಅಲ್ಲಿಯೇ ಇದ್ದು, ನಂತರ ಬೆಟ್ಟದಿಂದ ಇಳಿದು ಬರುತ್ತಾರೆ. ಹೀಗೆ 42 ದಿನಗಳ ಕಾಲ ಅವರು ವ್ರತ ಮಾಡಲಿದ್ದಾರೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ, ಅವರಿಗೆ ಹನುಮ ಮಾಲೆ ಹಾಕಿರುವ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್.ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಸದ್ಯ ಚಿತ್ರೀಕರಣ ಪೂರ್ವ ಕೆಲಸಗಳಲ್ಲಿ ತೊಡಗಿದ್ದಾರೆ. 2013-14ರಲ್ಲಿ ನಡೆದ ನೈಜ ಘಟನೆ ಆಧರಿಸಿದ, ಆರು ರಾಜ್ಯಗಳಿಗೆ ಸಂಬಂಧಿಸಿದ ಘಟನೆಯ ಸುತ್ತ ‘ಪಾದರಾಯ’ ಕಥೆ ಸುತ್ತುತ್ತದೆ. ಚಿತ್ರಕ್ಕೆ ಅಜನೀಶ್ ಲೋಕ ನಾಥ್ ಸಂಗೀತ, ಆಂಟೋನಿ ಸಂಕಲನ, ಸತ್ಯ ಹೆಗ್ಡೆ ಛಾಯಾಗ್ರಹಣ ಇರಲಿದೆ.
https://play.google.com/store/apps/details?id=com.speed.newskannada