ಮೈಸೂರು ದಸರಾ ಮಹೋತ್ಸವದ ಪೂರ್ವಭಾವಿ ಕಾಮಗಾರಿಗಳು ಪ್ರಗತಿಯಲ್ಲಿರುವುದರಿಂದ ಹಾಗೂ ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಹಿನ್ನೆಲೆಯಲ್ಲಿ ಅಕ್ಟೋಬರ್ 4 ರಿಂದ 21ರವರೆಗೆ ಮೈಸೂರು ಅರಮನೆ ಆವರಣದಲ್ಲಿ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
ಮೈಸೂರು ಅರಮನೆಯಲ್ಲಿ 2021ನೇ ಸಾಲಿನ ದಸರಾ ಮಹೋತ್ಸವದ ಸಿದ್ಧತೆಗಳು ನಡೆಯುತ್ತಿವೆ. ಮಂಗಳವಾರ ಮೈಸೂರಿನಲ್ಲಿ ಫಿರಂಗಿ ಗಾಡಿಗಳಿಂದ ಕುಶಾಲತೋಪುಗಳನ್ನ ಸಿಡಿಸುವ 2ನೇ ಹಂತದ ತಾಲೀಮು ನಡೆಯಿತು. ಗಜಪಡೆ ಹಾಗೂ ಅಶ್ವಗಳು ಬೆದರದಂತೆ ಫಿರಂಗಿಗಳ ಮೂಲಕ ಕುಶಾಲತೋಪುಗಳನ್ನ ಸಿಡಿಸಲಾಯಿತು. ಕಳೆದ ಸೆಪ್ಟೆಂಬರ್ 30ರಂದು ಮೊದಲ ತಾಲೀಮು ನಡೆಸಿದ್ದ ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಗಳು. ಇಂದು ಕೂಡ ಅರಮನೆ ಹೊರ ಆವರಣದಲ್ಲಿರುವ ಕೋಟೆ ಮಾರಮ್ಮನವರ ದೇಗುಲದ ಬಳಿ ಕುಶಾಲತೋಪುಗಳನ್ನ ಸಿಡಿಸುವ ತಾಲೀಮು ನಡೆಸಿದರು. 7 ಫಿರಂಗಿ ಗಾಡಿಗಳಿಂದ 21 ಕುಶಾಲತೋಪುಗಳನ್ನ ಸಿಎಆರ್ ಸಿಬ್ಬಂದಿಗಳು ಸಿಡಿಸಿದರು. ಕುಶಾಲತೋಪುಗಳನ್ನ ಸಿಡಿಸುವ 2ನೇ ಹಂತದ ತಾಲೀಮು ಸಹ ಯಶಸ್ವಿಯಾಗಿದೆ.
ಜಂಬೂ ಸವಾರಿ ಮೆರವಣಿಗೆಗೂ ಮುನ್ನಾ ಒಟ್ಟು ಮೂರು ಬಾರಿ ಕುಶಾಲತೋಪುಗಳನ್ನ ಸಿಡಿಸುವ ತಾಲೀಮು ನಡೆಯುತ್ತದೆ. ಮೈಸೂರು ದಸರಾ ಹಿನ್ನಲೆಯಲ್ಲಿ ಮೈಸೂರು ನಗರ ಪೊಲೀಸರು ನಗರದಲ್ಲಿ ಭದ್ರತೆ ಹೆಚ್ಚಿಸಿದ್ದಾರೆ. ಅನುಮಾಸ್ಪದ ವ್ಯಕ್ತಿಗಳ ಸಂಚಾರ ಕಂಡು ಬಂದರೆ ಮಾಹಿತಿ ನೀಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.