ಬೆಂಗಳೂರು, ಫೆಬ್ರವರಿ 11: ಕರ್ನಾಟಕದ ಉಡುಪಿ ಕಾಲೇಜಿನಲ್ಲಿ ಶುರುವಾದ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಕರ್ನಾಟಕದ ಹಲವು ಜಿಲ್ಲೆಗಳಿಗೆ ವ್ಯಾಪಿಸಿದೆ. ಅಲ್ಲದೇ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ವಿದ್ಯಾರ್ಥಿಗಳ ನಡುವೆ ಶುರುವಾದ ವಿವಾದ ಈಗ ರಾಜಕೀಯ ತಿರುವು ಪಡೆದುಕೊಂಡಿದೆ.ಹಿಜಾಬ್- ಕೇಸರಿ ಶಾಲು ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸುಪ್ರೀಂ ಕೋರ್ಟ್ಗೆ ಹೋಗುವವರು ಹೋಗಲಿ. ನಮ್ಮದೇನು ಅಭ್ಯಂತರ ಇಲ್ಲ. ಕೋರ್ಟ್ ಏನು ತೀರ್ಮಾನ ಮಾಡುತ್ತದೋ ಕಾದು ನೋಡೋಣ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.ಮಾಧ್ಯಮದ ಜೊತೆ ಮಾತನಾಡಿದ ಅವರು, ಲಾಯರ್ಗಳನ್ನು ಇಟ್ಟು ಕೋರ್ಟ್ನಲ್ಲಿ ವಾದ ಮಾಡುವ ಶಕ್ತಿ ನನಗಂತೂ ಇಲ್ಲ, ಕಾಲೇಜಿನ ಆ ವಿದ್ಯಾರ್ಥಿನಿಯರಿಗೂ ಆ ಶಕ್ತಿ ಇರಲ್ಲ. ಆದರೆ ಯಾರೋ ಈ ವಿದ್ಯಾರ್ಥಿನಿಯರ ಹಿಂದೆ ಇದ್ದಾರೆ ಎಂದು ಸಚಿವರು ಶಂಕೆ ವ್ಯಕ್ತಪಡಿಸಿದರು.ಇಡೀ ಹಿಜಾಬ್ ವಿವಾದ ಪ್ರಕರಣದ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಅನ್ನಿಸುತ್ತಿದೆ. ಅವರು ಹೀಗೆಲ್ಲಾ ಮಾಡಿಸುತ್ತಾ ಇದ್ದಾರೆ. ಸುಪ್ರೀಂ ಕೋರ್ಟ್ಗೆ ಹೋಗುವವರು ಹೋಗಲಿ, ನಮ್ಮದೇನು ಅಭ್ಯಂತರ ಇಲ್ಲ. ಕೋರ್ಟ್ ಏನು ತೀರ್ಮಾನ ಮಾಡುತ್ತದೋ ನೋಡೋಣ. ಸರ್ಕಾರದ ಆದೇಶ ಪಾಲನೆ ಮಾಡಿದರೆ ಮಾತ್ರ ಕಾಲೇಜಿಗೆ ಪ್ರವೇಶ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟಪಡಿಸಿದರು.ಸಿಎಫ್ಐ ಸಂಘಟನೆಯ ಅಜೆಂಡಾ ಈಡೇರಿದ ಹಾಗೆ ಇಲ್ಲ. ಹೀಗಾಗಿ ಕೋರ್ಟ್ ಆದೇಶವನ್ನು ವಿರೋಧ ಮಾಡುತ್ತಿದ್ದಾರೆ. ಈ ಸಂಘಟನೆಯೇ ಇದರ ಹಿಂದೆ ಇದ್ದು ಕೆಲಸ ಮಾಡುತ್ತಿದೆ. ಕೋರ್ಟ್ ಆದೇಶಕ್ಕೆ ಎಲ್ಲರೂ ತಲೆ ಬಾಗಲೇಬೇಕು ಎಂದು ಹೇಳಿದರು.ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಗುರುವಾರ ವಿಚಾರಣೆಯನ್ನು ಆರಂಭಿಸಿದ ಹೈಕೋರ್ಟ್ ವಿಸ್ತೃತ ನ್ಯಾಯಪೀಠ, ಹಿಜಾಬ್ ಮತ್ತು ಕೇಸರಿ ಶಾಲು ಸೇರಿದಂತೆ ಯಾವುದೇ ಧರ್ಮವನ್ನು ಸೂಚಿಸುವ ವಸ್ತ್ರವನ್ನು ಧರಿಸಲು ಯಾವ ವಿದ್ಯಾರ್ಥಿ ಮೇಲೂ ಒತ್ತಡ ಹೇರಬಾರದು ಎಂದು ಮೌಖಿಕವಾಗಿ ಹೇಳಿದೆ. ಆ ಕುರಿತು ಆದೇಶ ನೀಡುವುದಾಗಿ ಹೇಳಿರುವ ನ್ಯಾಯಪೀಠ ವಿಚಾರಣೆಯನ್ನು ಸೋಮವಾರಕ್ಕೆ ಮಧ್ಯಾಹ್ನಕ್ಕೆ ಮುಂದೂಡಿದೆ.ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾ. ಖಾಜಿ ಜೈಬುನ್ನೀಸಾ ಅವರಿದ್ದ ತ್ರಿಸದಸ್ಯ ಪೀಠ ಸುಮಾರು ಎರಡು ಗಂಟೆಗಳ ಕಾಲ ವಾದ- ಪ್ರತಿವಾದವನ್ನು ಆಲಿಸಿತು.ಬಳಿಕ “ಶಾಲಾ-ಕಾಲೇಜುಗಳು ಆರಂಭವಾಗಲಿ, ವಿಷಯ ನ್ಯಾಯಾಲಯದ ಮುಂದಿದೆ, ಕೋರ್ಟ್ ಆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಅಲ್ಲಿಯವರೆರೆಗೆ ಹಿಜಾಬ್ ಆಗಲಿ ಅಥವಾ ಕೇಸರಿ ಶಾಲು ಆಗಲಿ ಯಾವುದೇ ಧರ್ಮಕ್ಕೆ ಸಂಬಂಧಿಸಿದ ವಸ್ತುಗಳನ್ನು ಧರಿಸುವಂತಿಲ್ಲ ಮತ್ತು ಆ ಕುರಿತು ಯಾರೂ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಬಾರದು. ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಮರಳಬೇಕು ಎಂಬುದು ಕೋರ್ಟ್ ಆಶಯವಾಗಿದೆ,” ಎಂದು ಮೌಖಿಕವಾಗಿ ಆದೇಶಿಸಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada