ಮಂಗಳೂರು, ಏಪ್ರಿಲ್ 15: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿಯ ಲಾಡ್ಜ್ವೊಂದರಲ್ಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ತನಿಖೆ ಆಗುತ್ತಿದೆ.
ಮೊದಲು ತನಿಖೆಗೆ ಒತ್ತಾಯ ಮಾಡ್ಡಿದ್ದೇ ಕೆ.ಎಸ್. ಈಶ್ವರಪ್ಪನವರು. ತನಿಖೆಗೆ ಸಹಕರಿಸುವ ನೆಲೆಯಲ್ಲಿ ಯಾರಿಗೂ ಮುಜುಗರ ಆಗಬಾರದೆಂದು ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಸಾವಿನಲ್ಲೂ ರಾಜಕೀಯ ಮಾಡುತ್ತಿದೆ ಅಂತಾ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.
ಈಶ್ವರಪ್ಪರನ್ನು ಜೈಲಿಗೆ ಕಳುಹಿಸಿ ಅನ್ನುವ ಕಾಂಗ್ರೆಸ್ನ ಎಲ್ಲಾ ನಾಯಕರು ಜೈಲಲ್ಲಿ ಇರಬೇಕಿತ್ತು. ಕಾಂಗ್ರೆಸ್ನ ಒಂದು ನಾಯಕರೂ ಹೊರಗಿರಬಾರದು, ಎಲ್ಲರೂ ಜೈಲಿನಲ್ಲಿ ಇರಬೇಕಾದವರು ಎಂದು ಹೇಳಿದರು.
ಸಿದ್ದರಾಮಯ್ಯ ಸರ್ಕಾರ ಇದ್ದಾಗ ಗಣಪತಿ ಭಟ್ ಘಟನೆ ನಡೆದಿದೆ. ವಿಡಿಯೋ ಡೆತ್ನೋಟ್ ಮಾಡಿ ಆತ್ಮಹತ್ಯೆ ಆಗಿದೆ. ಸಂತೋಷ್ ಆತ್ಮಹತ್ಯೆಯ ಬಗ್ಗೆ ಎಲ್ಲೂ ಡೆತ್ ನೋಟ್ ಸಿಕ್ಕಿಲ್ಲ. ಕೇವಲ ವಾಟ್ಸಪ್ನಲ್ಲಿ ಹರಿದಾಡಿದ್ದು ಮಾತ್ರ ಸಿಕ್ಕಿದೆ. ಯಾಕೆ ನೀವು ಕೆ.ಜೆ. ಜಾರ್ಜ್ ಅನ್ನು ಬಂಧನ ಮಾಡಿಲ್ಲ? ಸಿದ್ದರಾಮಯ್ಯ ಸರ್ಕಾರದಲ್ಲಿ 24 ಮಂದಿ ಕಾರ್ಯಕರ್ತರ ಹತ್ಯೆಯಾಗಿತ್ತು. ಆ ಘಟನೆಗಳಲ್ಲಿ ಸಿದ್ದರಾಮಯ್ಯರನ್ನು ಬಂಧಿಸಿದ್ದಾರಾ? ಎಂದು ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.
ಹಗರಣವೊಂದರಲ್ಲಿ ಬೇಲ್ ಪಡೆದಿರುವ ಕಾಂಗ್ರೆಸ್ ಅಧ್ಯಕ್ಷರು ಕೂಡ ಜೈಲಿನಲ್ಲಿ ಇರಬೇಕಾಗಿತ್ತು. ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಮೇಲೆ ಹತ್ತು ಕೇಸ್ ಇದೆ, ಒಳಗೆ ಹಾಕಿ. ಕಾಂಗ್ರೆಸ್ನವರು ಜೈಲಿನ ಒಳಗಡೆ ಹೋರಾಟ ಮಾಡಬೇಕು. ಕಾಂಗ್ರೆಸ್ಗೆ ಯಾವ ನೈತಿಕತೆಯೂ ಇಲ್ಲ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸಾವಿನಲ್ಲೂ ರಾಜಕಾರಣ ಮಾಡುತ್ತಿದ್ದು, ಸಂತೋಷ್ ಪಾಟೀಲ್ ಸಾವಿನ ಹಿಂದೆ ಕಾಂಗ್ರೆಸ್ ಇದೆ. ತನಿಖೆ ನಡೆಯುತ್ತಿದೆ, ಸತ್ಯಾಸತ್ಯತೆ ಬಯಲಾಗುತ್ತಿದೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಹೊಸಪೇಟೆಯಲ್ಲಿ ರಾಜ್ಯ ಬಿಜೆಪಿ ರಾಜಕಾರಣಿ ಸಭೆಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬರುತ್ತಾರೆ. ಬಿ.ಎಲ್. ಸಂತೋಷ್, ಅರುಣ್ ಸಿಂಗ್ ಬರುತ್ತಾರೆ. ಮುಂದಿನ ಚುನಾವಣೆ, ಪಕ್ಷದ ಮುಂದಿನ ದಾರಿ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada