ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 2019ರಲ್ಲಿ ಜಯ ಸಾಧಿಸಿದಂತೆ ಏಕಪಕ್ಷೀಯ ಗೆಲುವು ಸಾಧಿಸುವುದು ಬಹುತೇಕ ಅಸಾಧ್ಯವೆಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಸಂಸದ ಶಶಿ ತರೂರ್ ಶುಕ್ರವಾರ ಭವಿಷ್ಯ ನುಡಿದಿದ್ದಾರೆ. ಕೇರಳದ ಸಂಸದ ತರೂರ್ ತಮ್ಮ ಅಭಿಪ್ರಾಯವನ್ನು ಪುನರುಚ್ಚರಿಸಿದ್ದು, ‘2024ರಲ್ಲಿ ದೇಶದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಬಹುಮತವನ್ನು ಪಡೆಯುವ ಸಾಧ್ಯತೆ ಇಲ್ಲವೆಂದು ಹೇಳಿದ್ದಾರೆ.
2019ಕ್ಕೆ ಹೋಲಿಸಿದ್ರೆ ಬಿಜೆಪಿ ಹಲವು ಸ್ಥಾನ ಕಳೆದುಕೊಳ್ಳುತ್ತೆ!
ತಿರುವನಂತಪುರಂದಲ್ಲಿ ಆಯೋಜಿಸಿದ್ದ ‘ಕೇರಳ ಸಾಹಿತ್ಯೋತ್ಸವ’ದಲ್ಲಿ ಮಾತನಾಡಿರುವ ತರೂರ್, ‘ಆಡಳಿತ ಪಕ್ಷ ಬಿಜೆಪಿ ಹಿಂದಿನ ಫಲಿತಾಂಶಗಳಿಗೆ ಹೋಲಿಸಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸುಮಾರು 50 ಸ್ಥಾನಗಳನ್ನು ಕಳೆದುಕೊಳ್ಳಬಹುದು ‘ಎಂದು ಹೇಳಿದ್ದಾರೆ. ‘ಬಿಜೆಪಿಯು 2019ರ ಚುನಾವಣೆಯಲ್ಲಿ ಎಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಿತು ಎಂಬುದನ್ನು ನೀವು ನೋಡಬೇಕು. ಹರಿಯಾಣ, ಗುಜರಾತ್ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಬಹುತೇಕ ಎಲ್ಲಾ ಸ್ಥಾನಗಳನ್ನು ಗಳಿಸಿದ್ದರು ಮತ್ತು ಬಂಗಾಳದಲ್ಲಿ 18 ಸ್ಥಾನಗಳಿದ್ದವು. ಅಂದಿನ ಫಲಿತಾಂಶವನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಲಾಗುವುದಿಲ್ಲ ಅಂತಾ ಹೇಳಿದ್ದಾರೆ.
ಅದೇ ಫಲಿತಾಂಶ ಸಿಗುವುದು ಸುಲಭವಲ್ಲ!
‘ಬಿಜೆಪಿ ಹಲವು ರಾಜ್ಯಗಳ ಅಧಿಕಾರವನ್ನು ಕಳೆದುಕೊಳ್ಳಬಹುದು, ಆಗ ಕೇಂದ್ರದ ಅಧಿಕಾರವನ್ನು ಕಳೆದುಕೊಳ್ಳುವುದು ಅಸಾಧ್ಯವೇನಲ್ಲ. ಆದ್ದರಿಂದಲೇ ಈಗ ಅದೇ ಫಲಿತಾಂಶವನ್ನು ಪುನರಾವರ್ತಿಸುವುದು ಅಸಾಧ್ಯ ಮತ್ತು 2024ರಲ್ಲಿ ಬಿಜೆಪಿ ಬಹುಮತವನ್ನು ಪಡೆಯಲು ಸಾಧ್ಯವಾಗದಿರುವ ಸಾಧ್ಯತೆಯೇ ಹೆಚ್ಚಿದೆ ಎಂದು ಹೇಳಿದ್ದಾರೆ. ಪುಲ್ವಾಮಾ ದಾಳಿ ಮತ್ತು ಬಾಲಾಕೋಟ್ ದಾಳಿಯ ನಂತರ 2019ರ ಚುನಾವಣೆಯಲ್ಲಿ ಬಿಜೆಪಿಗೆ ಕೊನೆಯ ಕ್ಷಣದಲ್ಲಿ ಭಾರಿ ಲಾಭ ಸಿಕ್ಕಿತು, ಅದು 2024ರಲ್ಲಿ ಪುನರಾವರ್ತನೆಯಾಗುವುದಿಲ್ಲ ಮತ್ತು ಪ್ರತಿಪಕ್ಷಗಳು ಈ ಬಾರಿ ಸಾಕಷ್ಟು ಲಾಭ ಪಡೆಯುತ್ತವೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಬಿಜೆಪಿಗೆ ಬಹುಮತ ಪಡೆಯಲು ಬಿಡದ ವಿರೋಧ ಪಕ್ಷಗಳು ತಾವಾಗಿಯೇ ಒಗ್ಗಟ್ಟಾಗಿ ಉಳಿಯಲು ಸಾಧ್ಯವೇ ಎಂದು ಕೇಳಿದ ಪ್ರಶ್ನೆಗೆ ತರೂರ್ ಹಾರಿಕೆ ಉತ್ತರ ನೀಡಿದರು. ಈ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲವೆಂದು ಅವರು ಹೇಳಿದ್ದಾರೆ.
https://play.google.com/store/apps/details?id=com.speed.newskannada