ಕಮಲನಗರ: ಎಲ್ಲೆಂದರಲ್ಲಿ ಹಂದಿ ಓಡಾಟಗಳಿಂದ ಚೆಲ್ಲಾಡಿದ ತ್ಯಾಜ್ಯ. ಚರಂಡಿ ದುರ್ನಾತ, ಸೊಳ್ಳೆಗಳ ಹಾವಳಿ, ಮೂತ್ರಾಲಯಗಳ ಕೊರತೆ, ಅಲ್ಲಲ್ಲಿ ಬಯಲು ಶೌಚಾಲಯ. ಇಲ್ಲಿನ ಅಲ್ಲಮಪ್ರಭು ವೃತ್ತ ಬಳಿಯ ಸೋನಾಳ ರಸ್ತೆಗೆ ಹೊಂದಿಕೊಂಡಿರುವ ವಿವಿಧ ಸ್ಥಳಗಳಲ್ಲಿ ಕಂಡು ಬರುವ ಚಿತ್ರಣವಿದು.ಮೂಲ ಸವಲತ್ತುಗಳ ಕೊರತೆ ಯಿಂದ ಕಮಲನಗರ ಅಂದಗೆಟ್ಟಿದೆ. ಇದರಿಂದಾಗಿ ಜನಾರೋಗ್ಯಕ್ಕೆ ಕುತ್ತು ತಂದಿದೆ. ಪಟ್ಟಣದ ಬಸ್ ತಂಗುದಾಣ ಬಳಿ ಸಾರ್ವಜನಿಕ ಶೌಚಾಲಯ, ಹೋಟೆಲ್ಗಳಿಂದ ಬರುವ ತ್ಯಾಜ್ಯ ನೀರು, ಕೊಳೆತ ತರಕಾರಿ ಬಿಸಾಡುವುದರಿಂದ ಸ್ವಚ್ಛತೆಗೆ ಸವಾಲಾಗಿ ಪರಿಣಮಿಸಿದೆ. ಚರಂಡಿ ನೀರು ಜನರಲ್ಲಿ ರೋಗ ಭೀತಿ ಹರಡಿದೆ ಎಂದು ಹೇಳುತ್ತಾರೆ ಪ್ರಶಾಂತ ಖಾನಾಪುರೆ.ಪಟ್ಟಣಕ್ಕೆ ಆಗಮಿಸಿ ಬಸ್ ತಂಗುದಾಣ ಕಡೆ ಕಾಲಿಡುತ್ತಿದ್ದಂತೆ ದುರ್ವಾಸನೆಯಿಂದ ಸಾರ್ವಜನಿಕರು ಮೂಗು ಮುಚ್ಚಿಕೊಳ್ಳುವಂತಾಗಿದೆ. ಅಂಚೆ ಕಚೇರಿ ಖಾಲಿ ಸ್ಥಳದಲ್ಲಿ ಮತ್ತು ಬಾಲುರು ಕ್ರಾಸ್ ಬಳಿ ತಹಶೀಲ್ದಾರ್ ಕಚೇರಿ ಪಕ್ಕದ ಖಾಲಿ ಸ್ಥಳದಲ್ಲಿ ತ್ಯಾಜ್ಯ ಹಾಕಲಾಗಿದೆ. ಅಗತ್ಯವಿದ್ದ ಕಡೆ ಮೂತ್ರಾಲಯಗಳನ್ನು ವ್ಯವಸ್ಥೆಗೊಳಿಸದೇ ಇರುವುದರಿಂದ ಸಾರ್ವಜನಿಕರು ಮೂತ್ರ ವಿಸರ್ಜನೆಗೆ ಪರದಾಡುವಂತಾಂಗಿದೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಬಿಸಾಡುವುದು ಸಾಮಾನ್ಯ. ಬಯಲಲ್ಲೇ ಮೂತ್ರ ವಿಸರ್ಜಿಸುವುದರಿಂದ ಅಕ್ಕ ಪಕ್ಕದಲ್ಲಿ ನಡೆದಾಡುವುದು ಮುಜುಗರಕ್ಕೀಡು ಮಾಡಿದೆ. ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು ಎಂದು ಶಶಿಕಾಂತ ತಿಳಿಸಿದರು.ಕೆಲ ವಾರ್ಡ್ಗಳಲ್ಲಿ ರಸ್ತೆಯೋ ಚರಂಡಿಯೋ ತಿಳಿಯದಾಗಿದೆ. ಅಷ್ಟೊಂದು ದುಸ್ಥಿತಿಗೆ ತಲುಪಿದೆ. ಚರಂಡಿಯಲ್ಲಿ ತ್ಯಾಜ್ಯ ತುಂಬಿರುತ್ತದೆ. ಕಾರ್ಮಿಕರು ತೆಗೆದು ಹೋಗುತ್ತಾರೆ. 200ಕ್ಕೂ ಅಧಿಕ ಹಂದಿಗಳ ಕಾಟ ಹೆಚ್ಚಾಗಿದೆ. ಇದರಿಂದಾಗಿ ಒಣಗಿಸಲು ಬಿಟ್ಟ ತ್ಯಾಜ್ಯವನ್ನು ಮತ್ತೆ ಪುನಃ ಚರಂಡಿಗೆ ಚೆಲ್ಲುತ್ತಿವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಜ ಜುಲ್ಫೆ ತಿಳಿಸುತ್ತಾರೆ.’ಈ ಕುರಿತು ಗ್ರಾಮ ಪಂಚಾಯಿತಿ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಹಂದಿ ಮಾಲೀಕರನ್ನು ಹಂದಿ ಬೇರೆಡೆ ಕೂಡಿಹಾಕುವ ವ್ಯವಸ್ಥೆ ಮಾಡಿಕೊಳ್ಳಿ. ಇಲ್ಲವಾದಲ್ಲಿ ನರೇಗಾ ಯೋಜನೆಯಡಿ ಹಂದಿ ಸಾಕಾಣಿಕೆ ಶೆಡ್ ನಿರ್ಮಿಸಿಕೊಳ್ಳುವ ಅವಕಾಶವಿದೆ ಎಂದು ಹೇಳಲಾಗಿದೆ. ಆದರೂ ಹಂದಿ ಮಾಲೀಕರು ಸ್ಪಂದಿಸಿಲ್ಲ’ ಎಂದು ಪಿಡಿಒ ರಾಜಕುಮಾರ ತಂಬಾಕೆ ತಿಳಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada