ಸರೋಜಿನಿ ಮಹಿಷಿ |On the birth anniversary of writer, teacher, legal expert and politician Dr. Sarojini Mahishi |

ಕನ್ನಡಿಗರಿಗೆ ಸರೋಜಿನಿ ಮಹಿಷಿ ಎಂಬ ಹೆಸರು ಚಿರಪರಿಚಿತ. ಕನ್ನಡಿಗರಿಗೆ ಉದ್ಯೋಗದ ಹಕ್ಕಿನ ಕುರಿತಾದ ಸರೋಜಿನಿ ಮಹಿಷಿ ಅವರ ವರದಿಯ ಬಗ್ಗೆ ಹಲವು ದಶಕಗಳಿಂದ ಕನ್ನಡಿಗರ ಹೋರಾಟ ನಡೆಯುತ್ತಲೇ ಇದೆ. ಡಾ. ಸರೋಜಿನಿ ಮಹಿಷಿ ಅವರು ಪ್ರಸಿದ್ಧ ಕಾನೂನು ತಜ್ಞೆ, ರಾಜಕಾರಿಣಿ, ಸಾಹಿತಿ, ಚಿತ್ರಕಲಾವಿದೆ, ಬಹುಭಾಷಾ ಜ್ಞಾನಿ.
ಸರೋಜಿನಿ ಮಹಿಷಿ 1927ರ ಮಾರ್ಚ್ 3 ರಂದು ಧಾರವಾಡದಲ್ಲಿ ಜನಿಸಿದರು. ತಂದೆ ವಕೀಲರು ಹಾಗೂ ಸಂಸ್ಕೃತ ಪಂಡಿತರಾಗಿದ್ದ ಬಿಂದೂರಾವ್ ಅಚ್ಯುತಾಚಾರ್ಯ ಮಹಿಷಿ. ತಾಯಿ ಕಮಲಾಬಾಯಿ.
ಸರೋಜಿನಿ ಅವರು ಧಾರವಾಡದ ಸರಕಾರಿ ಶಾಲೆಯಲ್ಲಿ ಐದನೆಯ ತರಗತಿಯವರೆಗೆ ಓದಿ ಮುಂದೆ ಕರ್ನಾಟಕ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್‌.ಸಿವರೆಗೆ ಓದಿದರು. ತಂದೆಯವರು ವಕೀಲಿ ವೃತ್ತಿಯನ್ನು ಸಾಂಗ್ಲಿಯಲ್ಲಿ ಪ್ರಾರಂಭಿಸಿದ್ದರಿಂದ ಸರೋಜಿನಿ ಮಹಿಷಿಯವರು ಸಾಂಗ್ಲಿಯ ವಿಲ್ಲಿಂಗ್‌ಡನ್ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದ ನಂತರ ಸ್ನಾತಕೋತ್ತರ ಪದವಿ ಓದಿಗೆ ಸೇರಿದಾಗ ಅಲ್ಲಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದವರು ಡಾ. ರಂ.ಶ್ರೀ. ಮುಗಳಿ. ಮುಗಳಿಯವರ ಪ್ರೇರಣೆಯಿಂದ ಸರೋಜಿನಿ ಅವರಲ್ಲಿ ಅಧ್ಯಯನಾಸಕ್ತಿ ಬೆಳೆಯುತ್ತಾ ಹೋಯಿತು. ಸರೋಜಿನಿ ಅವರು ಮುಂಬಯಿ ವಿಶ್ವವಿದ್ಯಾಲಯದಿಂದ 1949 ರಲ್ಲಿ ಎಂ.ಎ. ಪದವಿ ಪಡೆದರು. ಸರೋಜಿನಿಯವರು ತಾವು ಓದಿದ ಕಾಲೇಜಿನಲ್ಲಿಯೇ ಎರಡು ವರ್ಷಗಳ ಕಾಲ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿದರು. ನಂತರ ಒಂದು ವರ್ಷ ಧಾರವಾಡದ ಗರ್ಲ್ಸ್ ಹೈಸ್ಕೂಲಿನಲ್ಲಿಯೂ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದರು. ಸಮಯವನ್ನು ಹಾಳುಮಾಡದೆ ಸದಾ ಒಂದಲ್ಲೊಂದು ಕಾರ್ಯದಲ್ಲಿ ಸದಾ ತೊಡಗಿರುತಿದ್ದ ಮಹಿಷಿಯವರು DIPLOMA IN TAILORING AND EMBROIDERY ಒಂದು ವರ್ಷದ ತರಬೇತಿ ಪಡೆದು ಈಝೀ ಕಟಿಂಗ್, ಕಮರ್ಷಿಯಲ್ ಸಿಸ್ಟಮ್ ಆಫ್ ಕಟಿಂಗ್, ಮತ್ತು ಕಸೂತಿ ಕಲೆ ಎಂಬ ವಿಷಯಗಳ ಮೇಲೆ ಪುಸ್ತಕಗಳನ್ನು ರಚಿಸಿದರು. ಇದೇ ಸಂದರ್ಭದಲ್ಲಿ ಮುಂಬಯಿಯಲ್ಲಿ ಡಿಪ್ಲೊಮ ಇನ್ ಹೋಮಿಯೋಪತಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಯಾವುದಾದರೊಂದು ಪ್ರಕಾರದಲ್ಲಿ ತೊಡಗಿಕೊಂಡು ತಮ್ಮ ಜ್ಞಾನದಾಹವನ್ನು ಇಂಗಿಸಿಕೊಳ್ಳುವುರಲ್ಲೇ ನಿರತರಾಗಿದ್ದ ಮಹಿಷಿಯವರಿಗೆ ಕಾನೂನು ಕಲಿಯಬೇಕೆನಿಸಿ ಬೆಳಗಾವಿಯ ಆರ್‌.ಎಲ್.ಎಸ್. ಕಾಲೇಜಿನಲ್ಲಿ ಎಲ್‌.ಎಲ್‌.ಟಿ ಅಧ್ಯಯನ ಮಾಡಿ 1955ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಥಮ ರ್ಯಾಂಕ್ ಪಡೆದು ತೇರ್ಗಡೆಯಾದ ನಂತರ ಧಾರವಾಡದ ಜನತಾ ಲಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಕಾಲ ಕಾರ್ಯನಿರ್ವಹಿಸಿದರು. ಧಾರವಾಡದಲ್ಲಿ ಕನವಿಕರ್‌ ಎಂಬ ವಕೀಲರ ಬಳಿ ವಕೀಲಿ ವೃತ್ತಿ ಪ್ರಾರಂಭಿಸಿ ಬಾರ್‌ ಕೌನ್ಸಿಲ್ ಪರೀಕ್ಷೆಗೆ ಕುಳಿತು ಪ್ರಥಮಸ್ಥಾನ ಗಳಿಸಿದ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಸರೋಜಿನಿ ಮಹಿಷಿ ಅವರು ಸಾಹಿತ್ಯಾಭ್ಯಾಸಿಯಾಗಿ ಬರವಣಿಗೆಯಲ್ಲಿ ನಿರತರಾಗಿ ಹಲವಾರು ಕವನಗಳನ್ನು, ಮಕ್ಕಳ ಕವಿತೆಗಳನ್ನು ರಚಿಸಿ ಅವು ಪತ್ರಿಕೆಗಳಲ್ಲೂ ಪ್ರಕಟಗೊಂಡವು. ಅವರು ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲೀಷ್, ಮರಾಠಿ, ತೆಲುಗು, ತಮಿಳು, ಕೊಂಕಣಿ ಭಾಷೆಗಳಲ್ಲೂ ಪ್ರಭುತ್ವ ಪಡೆದು ಬಹುಭಾಷಾ ಕೋವಿದೆ ಎನಿಸಿದ್ದರು. ಕಲಿಕೆಯದಾಹದಿಂದ ಯಾವುದಾದರೊಂದು ಪದವಿಗಳಿಸುವುದರಲ್ಲೇ ತಲ್ಲೀನರಾಗಿರುತ್ತಿದ್ದ ಮಹಿಷಿಯವರು ಸ.ಸ. ಮಾಳದಾಡರ ಮಾರ್ಗದರ್ಶನದಲ್ಲಿ ‘ಕನ್ನಡ ಕವಯಿತ್ರಿಯರು’ (ವೇದಕಾಲದಿಂದ ಆಧುನಿಕ ಕಾಲದವರೆಗೆ) ಎಂಬ ಪ್ರೌಢ ಪ್ರಬಂಧವನ್ನು ರಚಿಸಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ 1961ರಲ್ಲಿ ಸಲ್ಲಿಸಿದರು. ಅವರಿಗೆ ಡಿ.ಲಿಟ್ ಪದವಿ ಸಂದಿತು. ಮಹಿಷಿಯವರು ಶೈಕ್ಷಣಿಕ ಕ್ಷೇತ್ರದೊಡನೆ ನಿಕಟ ಸಂಪರ್ಕ ಹೊಂದಿದ್ದು ಪ್ರಾಥಮಿಕ ಶಿಕ್ಷಣದಿಂದ ಟ್ರೈನಿಂಗ್ ಕಾಲೇಜುಗಳ ವರೆಗೆ ಸಂಚಾಲಕರಾಗಿ, ರಾಜ್ಯಮಹಿಳಾ ಶಿಕ್ಷಣ ಮಂಡಲಿ, ಕೇಂದ್ರ ಶಿಕ್ಷಣ ಸಲಹಾಮಂಡಲಿಗಳ ಸದಸ್ಯರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ, ಸಂಸದೀಯ ಹಿಂದಿ ಪರಿಷತ್ತಿನ ಅಧ್ಯಕ್ಷೆಯಾಗಿ, ಧಾರವಾಡದ ವನಿತಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷೆಯಾಗಿ, ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಉಪಾಧ್ಯಕ್ಷೆಯಾಗಿ ಹೀಗೆ ಹಲವಾರು ಹುದ್ದೆಗಳಲ್ಲಿ ಶೈಕ್ಷಣಿಕ ಉನ್ನತಿಗಾಗಿ ದುಡಿದರು. ಶಿಕ್ಷಣ ಕ್ಷೇತ್ರದಷ್ಟೇ ಇವರು ದುಡಿದ ಮತ್ತೊಂದು ಕ್ಷೇತ್ರವೆಂದರೆ ಸಮಾಜಸೇವೆ. ಮಹಿಳೆಯರ ಏಳ್ಗೆಗಾಗಿ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಕೈಗೊಂಡು ಮಹಿಳೆಯರ ವಿದ್ಯಾಭ್ಯಾಸದ ಜೊತೆಗೆ ಉದ್ಯೋಗ ದೊರಕಿಸಿಕೊಡುವಲ್ಲಿಯೂ ಶ್ರಮಿಸಿದರು.
ಸರೋಜಿನಿ ಮಹಿಷಿ ಅವರು 1962ರಲ್ಲಿ ಹಳ್ಳಿಕೇರಿ ಗುದ್ಲಪ್ಪನವರ ಪ್ರೋತ್ಸಾಹದಿಂದ ಧಾರವಾಡದ ಉತ್ತರಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ಹೀಗೆ ಲೋಕಸಭೆಗೆ ನಾಲ್ಕುಬಾರಿ ಆಯ್ಕೆಗೊಂಡು 25 ವರ್ಷಗಳ ಕಾಲ ಸಂಸತ್ತಿನಲ್ಲಿದ್ದ ಮಹಿಷಿಯರು ನೆಹರು, ಇಂದಿರಾಗಾಂಧಿ, ರಾಜೀವ್‌ಗಾಂಧಿ ಮೂವರು ಪ್ರಧಾನ ಮಂತ್ರಿಗಳನ್ನು ಕಂಡವರು. ಇಂದಿರಾಗಾಂಧಿಯವರು ಪ್ರಧಾನಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅವರ ಆಪ್ತಸಚಿವೆಯಾಗಿ, ಅಣುಶಕ್ತಿ ಹಾಗೂ ಸಂಖ್ಯಾಶಾಸ್ತ್ರ ಸಂಸ್ಥೆಗಳ, ಸಾರ್ವಜನಿಕ ಸಂಬಂಧಗಳ ಖಾತೆಯ ಉಪಮಂತ್ರಿಯಾಗಿ, ಪ್ರವಾಸೋದ್ಯಮ, ವಿಮಾನಖಾತೆ, ಕಾನೂನು ಮತ್ತು ಕಂಪನಿ ವ್ಯವಹಾರಗಳ ಖಾತೆ, ಲೋಕಸಭೆ ಮತ್ತು ರಾಜ್ಯ ಸಭೆಗಳ ಜಂಟಿ ಆಯ್ಕೆ ಸಮಿತಿ ಅಧ್ಯಕ್ಷೆಯಾಗಿ ಪರಿಶಿಷ್ಟ ಪಂಗಡದ ರಾಷ್ಟ್ರೀಯ ಆಯೋಗದ ಉಪಾಧ್ಯಕ್ಷೆಯಾಗಿ, ಗ್ರಾಮೀಣ ಸಚಿವಾಲಯದ ಉಪಾಧ್ಯಕ್ಷೆಯಾಗಿ, ಸಂಸ್ಕೃತ ಸಂಸ್ಥಾನ ಹಿಂದಿ ಸಂಸತ್ ಸಂಘದ ಉಪಾಧ್ಯಕ್ಷೆಯಾಗಿ ಹೀಗೆ ಮಂತ್ರಿಮಂಡಲದಲ್ಲಿ ಮತ್ತು ಸಂಸತ್‌ ರಚಿಸಿದ ಹಲವಾರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು.
ಕನ್ನಡಿಗರಿಗೆ ಕರ್ನಾಟಕದಲ್ಲಿ ಪರಭಾಷಿಕರಿಂದ ಅನ್ಯಾಯವಾಗುತ್ತಿದೆ ಎಂಬ ಕೂಗೆದ್ದಾಗ ಸರಕಾರದ ಕೋರಿಕೆಯಂತೆ ವರದಿಯೊಂದನ್ನು ಸಿದ್ಧಪಡಿಸಿ ಉದ್ಯೋಗಾವಕಾಶಗಳಲ್ಲಿ ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು; ಸರಕಾರಿ ಮತ್ತು ಖಾಸಗಿ ವಲಯಗಳ ಉದ್ಯಮಗಳಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ; ಎಂಪ್ಲಾಯ್‌ಮೆಂಟ್ ಸರ್ವೀಸಸ್‌ ಮೂಲಕ ಅಭ್ಯರ್ಥಿಗಳ ಆಯ್ಕೆ; ತಾಂತ್ರಿಕ ಕ್ಷೇತ್ರಗಳಲ್ಲಿ ಕನ್ನಡಿಗರು ದೊರೆಯದಿದ್ದಾಗ ಮಾತ್ರ ಹೊರರಾಜ್ಯದ ಅಭ್ಯರ್ಥಿಗಳ ಆಯ್ಕೆ, ಉನ್ನತ ಹುದ್ದೆಯಲ್ಲಿರುವ ಇತರ ರಾಜ್ಯದವರಿಗೆ ಕನ್ನಡ ಪರೀಕ್ಷೆ ಇವೇ ಮುಂತಾದ ಅಂಶಗಳನ್ನು ವರದಿಯಲ್ಲಿ ಪ್ರಸ್ತಾಪಿಸಿದ್ದರು.
ವಿದ್ಯಾರ್ಥಿನಿಯಾಗಿದ್ದಾಗಲೇ ಸಾಹಿತ್ಯದ ಬರವಣಿಗೆಯನ್ನು ರೂಢಿಸಿಕೊಂಡಿದ್ದ ಸರೋಜಿನಿ ಮಹಿಷಿಯವರು ‘ರೂಪ’ ಕಥಾಸಂಕಲನ; ಸ್ವಾತಂತ್ಯ್ರಕಹಳೆ ಮತ್ತು ಹಿಮಾಚಲದಿಂದ ರಾಮೇಶ್ವರ-ಕವನ ಸಂಕಲನಗಳು; ಮುಳ್ಳುಗುಲಾಬಿ ಮತ್ತು ನವಿಲ ಇಂಚರ-ಮೊದಲಾದ ಮಕ್ಕಳ ಕವನ ಸಂಕಲನಗಳು; ಅತಿಥಿ ಸತ್ಕಾರ ಹರಟೆಗಳ ಸಂಕಲನ; ಸಾಹಿತ್ಯ ಮಂಥನ ವಿಮರ್ಶಾಸಂಕಲನ; ಕಸೂತಿ ಕಲೆ ಮತ್ತು ಸುಲಭ ಗೃಹ ವಿಜ್ಞಾನ ಎಂಬ ಇತರ ಕೃತಿಗಳನ್ನು ರಚಿಸಿದ್ದಾರೆ. ಇವಲ್ಲದೆ ಕುವೆಂಪುರವರ ‘ರಾಮಾಯಣದರ್ಶನಂ’ ಡಿ.ವಿ.ಜಿಯವರ ‘ಮಂಕುತಿಮ್ಮನ ಕಗ್ಗ’ ಮತ್ತು ಶಿವರಾಮಕಾರಂತರ ಪ್ರವಾಸ ಕಥನ ‘ಅಪೂರ್ವ ಪಶ್ಚಿಮ’ ಕೃತಿಗಳನ್ನು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. ಹಿಂದಿ ಭಾಷೆಯಲ್ಲಿ ‘ಯೇ ಹಮಾರೇ’, ‘ಯೇ ಬಿ ಹಮಾರೇ’, ‘ಅತಿಥಿ ಸತ್ಕಾರ್‌’ ಮುಂತಾದ ಕೃತಿಗಳನ್ನು ರಚಿಸಿದ್ದಲ್ಲದೆ ಹಿಂದಿಯಿಂದ ನಾ.ಶಿ. ಫಡಕೆಯವರ ಶಕುಂತಲಾ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಸರೋಜಿನಿ ಮಹಿಷಿಯವರ ಅತಿಥಿ ಸತ್ಕಾರ ಮತ್ತು ಯೇ ಹಮಾರೆ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮುಳ್ಳು ಗುಲಾಬಿ ಮಕ್ಕಳ ಕವನ ಸಂಕಲನಕ್ಕೆ ರಾಜ್ಯಸರಕಾರದ ಬಹುಮಾನ, ಪುಣೆಯ ಸಮೀರ ಸಂವರ್ಧಿನಿ ಸಂಸ್ಕೃತ ಸಭಾದಿಂದ ‘ವಿದ್ವತ್‌ರತ್ನ’, ಉಡುಪಿ ಪೇಜಾವರ ಶ್ರೀಗಳಿಂದ ‘ಕರ್ನಾಟಕ ಸರಸ್ವರ’, ಅಖಿಲಭಾರತ ಹಿಂದಿ ಸಾಹಿತ್ಯಸಭಾ ಕುರುಕ್ಷೇತ್ರದಿಂದ ‘ಸಾಹಿತ್ಯವಾಚಸ್ಪತಿ’, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನಾಡೋಜ ಪ್ರಶಸ್ತಿ’ ಮುಂತಾದ ಪ್ರಶಸ್ತಿ ಗೌರವಗಳು ಸಂದಿದ್ದವು.
ಅಂದಿನ ದಿನಗಳಲ್ಲಿ ಇಂದಿರಾಗಾಂಧೀ ಅವರ ಭಾಷಣಗಳೆಂದರೆ ಸರೋಜಿನಿ ಮಹಿಷಿ ಅವರ ಕನ್ನಡದ ಅನುವಾದ ಭಾಷಣ ಇರುತ್ತಿತ್ತು. ಅದರ ವರ್ಚಸ್ಸು ಥೇಟ್ ಇಂದಿರಾಗಾಂಧೀ ಅವರೇ ಎರಡು ಭಾಷೆಗಳಲ್ಲಿ ಮಾತನಾಡುತ್ತಿದ್ದಾರೋ ಎಂಬ ಹಾಗೆ ಆಪ್ತತೆ ಮೂಡಿಸುವಂತಿರುತ್ತಿತ್ತು. 1980ರ ವರೆಗೆ ಕಾಂಗ್ರೆಸ್ ಆವರಣದಲ್ಲಿ ಲೋಕಸಭೆಯಲ್ಲಿದ್ದ ಸರೋಜಿನಿ ಮಹಿಷಿ ಅವರು 1983ರಲ್ಲಿ ಜನತಾ ಪಕ್ಷದಿಂದ ರಾಜ್ಯಸಭೆ ಪ್ರವೇಶಿಸಿದ್ದರು.
ಬಹುಮುಖಿ ಸಾಧಕರಾಗಿದ್ದ ಡಾ. ಸರೋಜಿನಿ ಮಹಿಷಿ ಅವರು 2015ರ ಜನವರಿ 25 ರಂದು ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮನ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಂ. ಅಕಬರ ಅಲಿ

Thu Mar 3 , 2022
ಎಂ. ಅಕಬರ ಅಲಿ ಡಾ. ಎಂ. ಅಕಬರ ಅಲಿ ಕನ್ನಡದ ಮಹತ್ವದ ಕವಿಗಳಲ್ಲಿ ಒಬ್ಬರು. ಅಕಬರ ಅಲಿ 1925ರ ಮಾರ್ಚ್ 3ರಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಉಳ್ಳೇಗಡ್ಡಿ ಖಾನಾಪುರದಲ್ಲಿ ಜನಿಸಿದರು. ತಂದೆ ಅಪ್ಪಾ ಸಾಹೇಬರು. ತಾಯಿ ಅಮಿನಬಿ. ಪ್ರಾರಂಭಿಕ ಶಿಕ್ಷಣವನ್ನು ತಮ್ಮ ಊರಿನಲ್ಲೇ ಉರ್ದೂ ಭಾಷೆಯಲ್ಲಿ ಪಡೆದ ಅಕಬರ ಅಲಿ ಅವರು, ಐದನೆಯ ತರಗತಿಯಿಂದ ಕನ್ನಡ ಭಾಷೆಯನ್ನು ಕಲಿಯಲು ಮೊದಲು ಮಾಡಿದರು. ಮುಂದೆ ಅವರು ಬೆಳಗಾವಿಯ ಜಿ. ಎ. […]

Advertisement

Wordpress Social Share Plugin powered by Ultimatelysocial