ಶರಣ್
On the birthday of our enthusiastic actor Sharan
ಶರಣ್ ಕನ್ನಡ ಚಲನಚಿತ್ರ ರಂಗದ ಲವಲವಿಕೆಯ ಕಲಾವಿರಲ್ಲೊಬ್ಬರು. ಹಾಸ್ಯನಟರಾಗಿ ಬಂದ ಶರಣ್ ತಾವೇ ಚಿತ್ರ ನಿರ್ಮಿಸುವುದರ ಮೂಲಕ ತಮಗಿಷ್ಟವಾದ ಪಾತ್ರಗಳ ಚಿತ್ರ ನಿರ್ಮಿಸಿ ಗೆದ್ದವರು. ಹಿನ್ನೆಲೆ ಗಾಯಕರಾಗಿಯೂ ಹೆಸರಾದವರು.
ಶರಣ್ 1972ರ ಫೆಬ್ರವರಿ 6ರಂದು ಗುಲ್ಬರ್ಗಾದಲ್ಲಿ ಜನಿಸಿದರು. ಶರಣ್ ತಂದೆ ತಾಯಿ ಆಗಿನ ಪ್ರಸಿದ್ಧ ಗುಬ್ಬಿ ನಾಟಕ ಕಂಪನಿಯಲ್ಲಿದ್ದರು. ಪ್ರಖ್ಯಾತ ನಟಿ ಶ್ರುತಿ ಶರಣ್ ಅವರ ಸಹೋದರಿ.
ಚಿತ್ರರಂಗಕ್ಕೆ ಬರುವ ಮುನ್ನ ಗಾಯನದಲ್ಲಿ ಆಸಕ್ತಿ ಹೊಂದಿದ್ದ ಶರಣ್ ಒಂದು ವಾದ್ಯಗೋಷ್ಠಿಯ ತಂಡದಲ್ಲಿ ಗಾಯಕರಾಗಿದ್ದರು. ತಮ್ಮದೇ ಆದ ಒಂದು ಭಕ್ತಿ ಗೀತೆಗಳ ಅಲ್ಬಮ್ ಕೂಡ ಹೊರತಂದಿದ್ದರು. ಹಾಗೆಯೇ ಕಿರುತೆರೆಯ ಧಾರವಾಹಿಗಳ ಶೀರ್ಷಿಕೆ ಗೀತೆಗಳನ್ನೂ ಹಾಡುತ್ತಾ ಧಾರಾವಾಹಿಗಳಲ್ಲಿ ನಟಿಸತೊಡಗಿದರು.
ಮುಂದೆ ಶರಣ್ 1996ರಲ್ಲಿ ತೆರೆಕಂಡ ಸಿದ್ಧಲಿಂಗಯ್ಯನವರ `ಪ್ರೇಮ ಪ್ರೇಮ ಪ್ರೇಮ’ ಚಿತ್ರದ ಮೂಲಕ ಹಾಸ್ಯನಟರಾಗಿ ಚಿತ್ರರಂಗಕ್ಕೆ ಬಂದರು. ಹೀಗೆ ಬಹುಕಾಲದಿಂದ ಚಿತ್ರರಂಗದಲ್ಲಿ ಸಾಗಿರುವ ಶರಣ್ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಕರ್ಪೂರದಾ ಗೊಂಬೆ, ಫ್ರೆಂಡ್ಸ್, ಮೊನಾಲಿಸಾ, ಜೊತೆ ಜೊತೆಯಲಿ, ಪಲ್ಲಕ್ಕಿ, ಮಳೆಯಲಿ ಜೊತೆಯಲಿ ಮುಂತಾದವು ಇವರ ಚಿತ್ರಗಳಲ್ಲಿ ಸೇರಿವೆ.
ಶರಣ್ 2012ರಲ್ಲಿ ತಮ್ಮ ನೂರನೇ ಚಿತ್ರವಾದ ‘ರ್ಯಾಂಬೋ’ ಅನ್ನು ತಾವೇ ನಿರ್ಮಿಸಿ ನಾಯಕ ನಟನ ಪಾತ್ರವಹಿಸಿ ಜನಮೆಚ್ಚುಗೆಗಳೊಂದಿಗೆ ಗೆದ್ದರು. ಮುಂದೆ ಬಂದ `ವಿಕ್ಟರಿ’,`ಅಧ್ಯಕ್ಷ’ `ರಾಜರಾಜೇಂದ್ರ’, ಮುಂತಾದ ಚಿತ್ರಗಳು ಒಂದರ ಮೇಲೊಂದರಂತೆ ಯಶಸ್ಸು ಗಳಿಸಿದವು. ‘ಜೈ ಲಲಿತಾ’ ಎಂಬ ಚಿತ್ರದಲ್ಲಿ ಅವರು ಲೀಲಾಜಾಲವಾಗಿ ಸ್ತ್ರೀಪಾತ್ರವನ್ನೂ ನಿರ್ವಹಿಸಿ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರರಾದರು. ‘ಬುಲ್ಲೆಟ್ ಬಸ್ಯ’ ಚಿತ್ರದಲ್ಲಿ ಅವರ ದ್ವಿಪಾತ್ರಾಭಿನಯ ಕೂಡಾ ಮೆಚ್ಚುಗೆಗೆ ಪಾತ್ರವಾಗಿದೆ.
ನಟನೆಯ ಜೊತೆಗೆ ತಮಗೆ ಇಷ್ಟವಾದ ಗಾಯನದಲ್ಲೂ ಮುಂದುವರೆದಿರುವ ಶರಣ್ ‘ರಾಜರಾಜೇಂದ್ರ’,`ವಜ್ರಕಾಯ’,`ಬುಲೆಟ್ ಬಸ್ಯಾ’,`ದನ ಕಾಯೋನು’ ಮುಂತಾದ ಚಿತ್ರಗಳಲ್ಲಿ ಹಿನ್ನೆಲೆ ಗಾಯಕನಾಗಿಯೂ ಮಿಂಚಿದ್ದಾರೆ.
ಚಿತ್ರರಂಗವೆಂಬ ಹಲವು ಏರುಪೇರುಗಳ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಥಾನ ನಿರ್ಮಿಸಿಕೊಂಡು 26 ವರ್ಷಗಳ ಸಾಧನೆ ಮಾಡಿರುವ ಶರಣ್ ಅವರ ಸಾಧನೆ ಮೆಚ್ಚುವಂತದ್ದು. ಅವರಿಗೆ ಶುಭವಾಗಲಿ ಮತ್ತು ಸಂತೃಪ್ತಿಯ ಸಾಧನೆ ಅವರ ಜೊತೆ ಸಾಗಲಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada
Please follow and like us: